ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಕೆಜಿಎಫ್ ಕಾರ್ಮಿಕರಿಂದ ಕರಾಳದಿನ ಆಚರಣೆ

KannadaprabhaNewsNetwork |  
Published : Mar 02, 2026, 02:00 AM IST
1ಕೆಜಿಎಫ್‌5 | Kannada Prabha

ಸಾರಾಂಶ

ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಕೆಜಿಎಫ್ ಕಾರ್ಮಿಕರಿಂದ ಕರಾಳದಿನ ಆಚರಣೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ಚಿನ್ನದ ಗಣಿ ಪ್ರದೇಶದ ಮಹಿಳೆಯರಿಗೆ ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ೨೬ ವರ್ಷಗಳು ಕಳೆದರೂ ನಿವೃತ್ತಿ ಹಣ ಬಂದಿಲ್ಲ, ಕಾರ್ಮಿಕರಿಗೆ ಯೋಗ್ಯವಾದ ಮನೆಯಿಲ್ಲ, ಚಿನ್ನದ ಗಣಿಗಳ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ , ಆದ್ದರಿಂದ ನಗರದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸೇವ್ ಕೆಜಿಎಫ್ ಕಮಿಟಿಯ ಸದಸ್ಯರು ಕಪ್ಪು ಬಾವುಟ ಹಿಡಿದು ಚಿನ್ನದ ಗಣಿ ಪ್ರದೇಶದಲ್ಲಿ ಕರಾಳ ದಿನ ಆಚರಣೆ ಮಾಡಿದರು.

ಕರಾಳ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಎಸ್ .ರಾಜೇಂದ್ರನ್ ಮಾತನಾಡಿ, ಚಿನ್ನದ ಗಣಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಲಭಿಸಬೇಕಾದರೆ ಎಲ್ಲಾ ಪಕ್ಷಗಳ ಮುಖಂಡರು ತಮ್ಮಲ್ಲಿನ ಭಿನ್ನಭಿಪ್ರಾಯಗಳನ್ನು ಬದಿಗೊತ್ತಿ ಮನೆಗೊಬ್ಬರಂತೆ ಬಿಜಿಎಂಎಲ್ ಸ್ವರ್ಣಭವನ ಮುಂಭಾಗ ಹೋರಾಟದಲ್ಲಿ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರೆ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಕರೆ ನೀಡಿದರು.

ಸೇವ್ ಕೆಜಿಎಫ್ ಅಧ್ಯಕ್ಷರಾದ ಜ್ಯೋತಿಬಸು ಮಾತನಾಡಿ, ಶಾಸಕಿ ರೂಪಕಲಾ ಶಶಿಧರ್ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಸಹ ಸದನದಲ್ಲಿ ಧ್ವನಿ ಎತ್ತಲಿಲ್ಲ, ಕೇವಲ ನಾನು ರಸ್ತೆ ನಿರ್ಮಿಸಿದೆ, ಬೀದಿ ದೀಪ ಅಳವಡಿಸಿದ್ದೇನೆ ಎಂದು ಹೇಳುತ್ತಾ ಚುನಾವಣೆ ಬಂದಾಗ ಮತದಾರರಿಗೆ ಹಣ ನೀಡಿ ಮತ ಪಡೆದು ಶಾಸಕ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನಮ್ಮ ಊರಿನ ಜನರು ಇನ್ಮುಂದೆ ಹಣಕ್ಕಾಗಿ ಮತ ಮಾರಾಟ ಮಾಡಿಕೊಳ್ಳಬೇಡಿ, ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ನೀಡಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಬಿಜಿಎಂಎಲ್ ಕಾರ್ಖಾನೆಗೆ ಬೀಗ ಹಾಕಿ ೨೬ ವರ್ಷ ಕಳೆದಿದ್ದು, ಸಾರ್ವಜನಿಕರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಕರಾಳದಿನ ಆಚರಿಸಲಾಗುತ್ತಿದೆ, ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು ಇಲ್ಲ, ಬಿಜಿಎಂಎಲ್ ಭಾಗದಲ್ಲಿ ವಾಸಿಸುತ್ತಿರುವ ಕಾರ್ಮಿಕರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ರೋಗಿ ಹೋದರೆ ಮರಳಿ ಶವವಾಗಿ ಹೊರಗೆ ಬರುವುದು, ಅಷ್ಟರಮಟ್ಟಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಕಾಸು ಬಿಚ್ಚದೇ ಕೆಲಸ ಆಗುವುದಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಜಿಎಫ್ ನಗರದಲ್ಲಿ ಬಯಲು ಶೌಚ ಜೀವಂತ:

ಸೇವ್ ಕಮಿಟಿಯ ಕಾರ‍್ಯದರ್ಶಿ ಪಿ. ದಯಾನಂದ್ ಮಾತನಾಡಿ, ದೇಶವೇ ಬಯಲು ಶೌಚ ಮುಕ್ತವಾಗಿದೆ, ಆದರೆ ಕೆಜಿಎಫ್ ನಗರದಲ್ಲಿ ಈಗಲೂ ಮಹಿಳೆಯರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಇದು ಕೆಜಿಎಫ್ ನಗರದ ದುರಂತ. ಕಳೆದ ೧೫ ವರ್ಷಗಳಿಂದ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಶಾಸಕರನ್ನು ಆಯ್ಕೆ ಮಾಡುತ್ತಿದ್ದು, ಮಹಿಳಾ ಶಾಸಕರಿಗೆ ಮಹಿಳೆಯರ ಕಷ್ಟ ತಿಳಿಯಲಿಲ್ಲವೇ ಎಂದು ಪರೋಕ್ಷವಾಗಿ ಶಾಸಕಿ ರೂಪಕಲಾ ಶಶಿಧರ್ ಅವರನ್ನು ಟೀಕಿಸಿದರು.

ಚಿನ್ನದ ಗಣಿಗಳ ಪ್ರದೇಶದಿಂದ ನೂರಾರು ಕಾರ್ಮಿಕರು ಕಪ್ಪು ಬಟ್ಟೆ ಧರಿಸಿ ಚಾಂಪಿಯನ್ ರೀಫ್, ಆ್ಯಂಡ್ರಸನ್ ಪೇಟೆ , ಪೈಲೈಟ್ಸ್ ಮಾರ್ಗವಾಗಿ ಬಿಜಿಎಂಎಲ್ ವ್ಯಾಪ್ತಿಗೆ ಒಳಪಡುವ ೧೬ ವಾರ್ಡ್ಗಳಲ್ಲಿ ಬೈಕ್ ರ‍್ಯಾಲಿ ಮಾಡುವ ಮೂಲಕ ಕರಾಳ ದಿನ ಆಚರಣೆ ಮಾಡಿದರು.

--------

೧ಕೆಜಿಎಫ್೫

ಬ್ಲಾಕ್ ಡೇ ಹೋರಾಟದಲ್ಲಿ ಭಾಗವಹಿಸಿರುವ ಮಾಜಿ ಶಾಸಕ ಎಸ್.ರಾಜೇಂದ್ರನ್, ಸೇವ್ ಸಮಿತಿಯ ಅಧ್ಯಕ್ಷರಾದ ಜ್ಯೋತಿಬಸು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿ ಅನುಷ್ಠಾನ ತಡೆಯಲು ಹೊರಟಿರುವ ಸರಕಾರದ ನಡೆ ಸರಿಯಲ್ಲ
ಇಂದು ಸರ್ವಧರ್ಮ ಸಮ್ಮೇಳನ-ತೆಪ್ಪೋತ್ಸವ, ನಾಳೆ ಮಹಾರಥೋತ್ಸವ