ಉಡುಪಿ: ನಮ್ಮ ದೇಶದಲ್ಲಿರುವ ಗುರು ಶಿಷ್ಯ ಪರಂಪರೆ ಜಗತ್ತಿನ ಬೇರೆ ಯಾವುದೇ ನಾಗರಿಕತೆಯಲ್ಲಿ ಕಂಡುಬರುವುದಿಲ್ಲ. ನಮ್ಮ ವೇದ ಪುರಾಣಗಳು, ಉಪನಿಷತ್ತುಗಳ ಬೋಧನೆ ಅವಿಚ್ಛಿನ್ನವಾಗಿ ಮುಂದುವರಿಯಲು ಈ ಗುರುಶಿಷ್ಯ ಪರಂಪರೆಯೇ ಮುಖ್ಯ ಕಾರಣ. ಲೋಕಕ್ಕೆ ಈ ಗುರುಶಿಷ್ಯ ಪರಂಪರೆ ಹಿಂದೂ ಸಂಸ್ಕೃತಿಯ ಬಹು ದೊಡ್ಡ ಕೊಡುಗೆಯಾಗಿದೆ ಎಂದು ಹೆಸರಾಂತ ಗಮಕ ವ್ಯಾಖ್ಯಾನಕಾರ ಡಾ. ರಾಘವೇಂದ್ರ ರಾವ್ ಹೇಳಿದರು. ಕರಂಬಳ್ಳಿಯ ಶ್ರೀ ವೆಂಕಟರಮಣ ದೇವಳದ ಶ್ರೀನಿವಾಸ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.ಕುಂಬಾಶಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರವಿರಾಜ್ ಉಪಾಧ್ಯ ಸಭಾಧ್ಯಕ್ಷತೆ ವಹಿಸಿದ್ದರು. ಸಮಿತಿಯ ರಾಜ್ಯ ಪ್ರಭಾರಿ, ಅಂತಾರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರು ಆನ್‌ಲೈನ್ ಮೂಲಕ ತಮ್ಮ ಸಂದೇಶ ನೀಡಿದರು.

ಇದೇ ಸಂದರ್ಭ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ದಿನಾಚರಣೆಯಂದು ಯೋಗ ಶಿಕ್ಷಕರಾಗಿ, ಸ್ವಯಂ ಸೇವಕರಾಗಿ ಯೋಗ ಪ್ರಸಾರದಲ್ಲಿ ಕೈಜೋಡಿಸಿದ ಉಡುಪಿ ಜಿಲ್ಲೆಯ ವಿವಿಧ ಕಕ್ಷೆಗಳ ಯೋಗ ಗುರುಗಳಿಗೆ ಸಮಿತಿ ವತಿಯಿಂದ ಅಭಿನಂದನಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮಧ್ಯಾಹ್ನದ ಭೋಜನ ಪ್ರಸಾದವನ್ನು ಪ್ರಾಯೋಜಿಸಿದ ಯೋಗಾರ್ಥಿಗಳಾದ ಹರಿಪ್ರಕಾಶ್ ಪೈ-ಚಂದ್ರಿಕಾ ಪೈ ಮತ್ತು ಕುಂದಾಪುರದ ಉದ್ಯಮಿ ಅಶೋಕ್ ಕುಮಾರ್ ಅವರನ್ನು ಗೌರವಿಸಲಾಯಿತು. ಸುಮಾರು 131 ಮಂದಿ ಯೋಗಾರ್ಥಿಗಳು ಯೋಗ ಗುರು ಬಾಬಾ ರಾಮದೇವ್ ಮತ್ತು ಯೋಗಾಚಾರ್ಯ ಬಾಲಕೃಷ್ಣಜೀ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಗುರುಕಾಣಿಕೆ ಸಮರ್ಪಿಸಿದರು. ವೇದಿಕೆಯಲ್ಲಿ ಯೋಗಪೀಠ ಹರಿದ್ವಾರದ ಆಜೀವ ಸದಸ್ಯರಾದ ವಿಶ್ವನಾಥ ಭಟ್, ರಾಮಕೃಷ್ಣ ಶರ್ಮ, ಸುರೇಶ ಭಕ್ತ ಹಾಗೂ ಯೋಗ ಸಮಿತಿ ಉಡುಪಿಯ ಪ್ರಭಾರಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ನಾಗರಾಜ್ ಅಗ್ನಿಹೋತ್ರ ಹೋಮ ನೆರವೇರಿಸಿದರು. ಸಮಿತಿ ಸದಸ್ಯ ರಾಘವೇಂದ್ರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮಣ ಶೆಣೈ ನಿರೂಪಿಸಿ, ಸದಾಶಿವ ರಾವ್‌ ವಂದಿಸಿದರು.