ಗದಗ: ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಕೆ.ಎಚ್. ಪಾಟೀಲ್ ಕ್ರಿಕೆಟ್ ಲೀಗ್ ಸೀಸನ್-1ರ ಅಭೂತಪೂರ್ವ ಯಶಸ್ಸಿನ ನಂತರ, ಈಗ ಮತ್ತಷ್ಟು ಸಡಗರದೊಂದಿಗೆ ಸೀಸನ್-2 ಆರಂಭಕ್ಕೆ ಸಜ್ಜಾಗಿದೆ. ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಏ. 12ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ತಿಳಿಸಿದರು.
20 ತಂಡಗಳು: ಸೀಸನ್ -1ರಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಈ ಬಾರಿ 456 ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಕೆ ಮಾಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ 20 ಫ್ರಾಂಚೈಸಿಗಳು ಭಾಗವಹಿಸಿ, 320 ಆಟಗಾರರನ್ನು ತಂಡಗಳಿಗೆ ಸೇರಿಸಿಕೊಳ್ಳಲಾಗಿದೆ ಎಂದರು.
ಈ ಬಾರಿ ಗದಗ ನಗರದ 220 ಆಟಗಾರರ ಜತೆಗೆ 100 ಗ್ರಾಮೀಣ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ತಂಡದಲ್ಲಿರುವ 16 ಆಟಗಾರರಿದ್ದು, ಕನಿಷ್ಠ 5 ಜನ ಕಡ್ಡಾಯವಾಗಿ ಗ್ರಾಮೀಣ ಭಾಗದವರೇ ಇರಬೇಕು ಎನ್ನುವ ನಿಯಮ ರೂಪಿಸುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಮನ್ನಣೆ ನೀಡಲಾಗಿದೆ ಎಂದರು.ಗರಿಷ್ಠ ಬೆಲೆಗೆ ಹರಾಜು: ಮಾ. 22 ಮತ್ತು 23ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಆಟಗಾರರು ಭಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಎಡ್ವರ್ಡ್ ಎನ್ನುವ ಆಟಗಾರ ₹44 ಸಾವಿರಕ್ಕೆ ಮಾರಾಟವಾಗಿದ್ದಾರೆ. ಅದೇ ರೀತಿ ಶಂಕರ ₹42 ಸಾವಿರ, ಯುವರಾಜ್ ₹36 ಸಾವಿರ, ವೈಭವ್ ಮತ್ತು ಫಯಾಜ್ ತಲಾ ₹34 ಸಾವಿರಕ್ಕೆ ಬಿಡ್ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
18 ದಿನಗಳ ಟೂರ್ನಿ: ಸೀಸನ್-2ರಲ್ಲಿ ಒಟ್ಟು 18 ದಿನಗಳ ಕಾಲ ಹೊನಲು ಬೆಳಕಿನ ಪಂದ್ಯಾವಳಿ ನಡೆಯಲಿದೆ. ಅತ್ಯುತ್ತಮ ಬೆಳಕಿನ ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ, ಥರ್ಡ್ ಅಂಪೈರ್ ವ್ಯವಸ್ಥೆಯೂ ಒಳಗೊಂಡಿದೆ ಎಂದರು.