ಗುಂಡ್ಲುಪೇಟೆ ಬಳಿ ಜಿಂಕೆ ಕೊಂದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಅರಣ್ಯ ಇಲಾಖೆ.
ಗುಂಡ್ಲುಪೇಟೆ: ಜಿಂಕೆ ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದ್ದು, ಮಾಂಸ, ನಾಡ ಬಂದೂಕು ವಶ ಪಡಿಸಿಕೊಂಡ ಘಟನೆ ಪಟ್ಟಣದ ಹೊರ ವಲಯದ ಅಸಿಸಿ ಆಸ್ಪತ್ರೆ ಬಳಿ ಶುಕ್ರವಾರ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳ ಬಂಧಿಸಿ, ಮಾಂಸ, ಚರ್ಮ ವಶ ಪಡಿಸಿಕೊಂಡಿದ್ದಾರೆ. ತಾಲೂಕಿನ ಅಣ್ಣೂರು ಕೇರಿ ಗ್ರಾಮದ ರವಿ, ಮಹೇಶ್, ಸಿದ್ದರಾಜು, ಸಿದ್ದಶೆಟ್ಟಿ, ಪಟ್ಟಣದ ಹೊರವಲಯದ ಗೃಹ ಮಂಡಳಿ ಕಾಲೋನಿಯ ಸುರೇಶ್ನನ್ನು ಬಂಧಿಸಲಾಗಿದ್ದು, ಆರೋಪಿಗಳ ಬಳಿ ನಾಡ ಬಂದೂಕು, ತಲೆ ಬ್ಯಾಟರಿ, ಮಚ್ಚು, ಬ್ಯಾಗ್ ವಶ ಪಡಿಸಿಕೊಳ್ಳಲಾಗಿದೆ. ತಾಲೂಕಿನ ಕಡಬೂರು ಗ್ರಾಮದ ಬಳಿಯ ಕೆರೆ ಬಳಿ ಜಿಂಕೆ ಕೊಂದು ಬೀಸಾಕಿದ್ದ ಚರ್ಮವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶ ಪಡಿಸಿಕೊಂಡಿದ್ದಾರೆ.ಈ ಸಂಬಂಧ ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿರುವ ಅರಣ್ಯ ಇಲಾಖೆ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಆರ್ಎಫ್ಒ ಕೆ.ಪಿ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಗುಂಡ್ಲುಪೇಟೆ ಜಿಂಕೆ ಬೇಟೆ ಪ್ರಕರಣ ಸಂಬಂಧ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಅವರೇ ಆರೋಪಿಗಳನ್ನು ಖುದ್ದು ವಿಚಾರಣೆ ನಡೆಸುತ್ತಿದ್ದಾರೆ. ಗುಂಡ್ಲುಪೇಟೆ ವಲಯ ಕಚೇರಿಯಲ್ಲಿ ಐವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು ಆರೋಪಿಗಳ ಬಾಯಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.