ಸೋಮರಡ್ಡಿ ಅಳವಂಡಿ ಕೊಪ್ಪಳ
ಇದು, ಕೊಪ್ಪಳ ನಗರದ ಆರೂಢ ಹೋಟೆಲ್ ಮಾಲೀಕ ಲಿಂಗರಾಜ್ ಮಾತು.
ಹೌದು, ಸಿಲಿಂಡರ್ ಸಮಸ್ಯೆಯಿಂದ ಬೇಸತ್ತಿರುವ ಇವರು ಕಟ್ಟಿಗೆ ಒಲೆ ಬಳಕೆ ಮಾಡಿಕೊಂಡು ಪರಿಹಾರ ಕಂಡುಕೊಂಡು ಹೋಟೆಲ್ ನಡೆಸುತ್ತಿದ್ದಾರೆ. ಈಗ ಅದಕ್ಕೆ ಕುಲುಮೆ ಮಾದರಿ ಅಳವಡಿಸಿ, ಸಿಲಿಂಡರ್ ಸ್ಟೋವ್ ಗಿಂತಲೂ ದೊಡ್ಡ ಪ್ರಮಾಣದ ಬೆಂಕಿ ಸುಲಭವಾಗಿ ಬರುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಲಿಂಡರ್ಗಿಂತಲೂ ಅಡುಗೆ ಬೇಗ ಆಗುತ್ತದೆ. ವೆಚ್ಚವೂ ಕಡಿಮೆ. ಸಿಲಿಂಡರ್ ಬಳಕೆಗಿಂತಲೂ ಬಹಳ ಅನುಕೂಲವಾಗಿದೆ ಎನ್ನುತ್ತಾರೆ.ಏನಿದು ಕುಲುಮೆ ಮಾದರಿ: ಹಿಂದೆ ನಮ್ಮ ಊರಲ್ಲಿ ಕಮ್ಮಾರರು ರೈತಾಪಿ ಜನರ ಕಬ್ಬಿಣ ಸಾಮಗ್ರಿ ಸಿದ್ಧ ಮಾಡಿಕೊಡಲು ಕುಲುಮೆ ಬಳಕೆ ಮಾಡುತ್ತಿದ್ದರು. ಅದಕ್ಕೆ ಪ್ಯಾನ್ ಹಾಕಿ, ತಿರುಗಿಸುತ್ತಾ ಇಲ್ಲವೇ ಬ್ಲೋವರ್ ಅಳವಡಿಸಿ ಕುಲುಮೆಯಲ್ಲಿ ಬೆಂಕಿಯ ಶಾಖ್ ತೀವ್ರವಾಗಿ ಬರುವಂತೆ ಮಾಡುತ್ತಿದ್ದರು. ಇದನ್ನೇ ಮಾದರಿಯಾಗಿಟ್ಟುಕೊಂಡು ನಾನು ಕುಲುಮೆ ಮಾದರಿ ಒಲೆ ಬಳಕೆ ಮಾಡಿದ್ದೇನೆ. ಇದಕ್ಕೆ ಎಲೆಕ್ಟ್ರಿಕಲ್ ಪಂಪ್ ಬಳಕೆ ಮಾಡುವ ಮೂಲಕ ಹೊಸತನ ಅಳವಡಿಸಿಕೊಂಡಿದ್ದೇನೆ. ಇದರಿಂದ ಕಟ್ಟಿಗೆ ಒಲೆ ಸಿಲಿಂಡರ್ ಒಲೆ ಮೀರಿಸುವಂತೆ ಬೆಂಕಿ ಬರುತ್ತದೆ ಎನ್ನುತ್ತಾರೆ.
ಸಿಲಿಂಡರ್ ಮೇಲೆ ಮಾಡುವ ಅಡುಗೆಗಿಂತಲೂ ರುಚಿಯಾಗಿರುತ್ತದೆ. ಅಷ್ಟೇ ಅಲ್ಲ, ಸಿಲಿಂಡರ್ ಸ್ಟೋವ್ ಬಳಕೆ ಮಾಡಿಕೊಂಡು ಬಳಕೆ ಮಾಡುವುದಕ್ಕಿಂತಲೂ ಬೇಗ ಅಡುಗೆ ಸಿದ್ಧವಾಗುತ್ತದೆ.
ದುಬಾರಿಯಾದ ಕಟ್ಟಿಗೆ: ಸಿಲಿಂಡರ್ ಸಮಸ್ಯೆಯಾಗಿ ಕಟ್ಟಿಗೆ ಒಲೆ ಅಧಿಕವಾಗಿ ಬಳಕೆ ಮಾಡುತ್ತಿರುವುದರಿಂದ ಕಟ್ಟಿಗೆಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಸಹಜವಾಗಿಯೇ ಬೆಲೆಯೂ ಹೆಚ್ಚಳವಾಗಿದೆ. ₹3500ಗೆ ಟನ್ ಸಿಗುತ್ತಿದ್ದ ಕಟ್ಟಿಗೆ ಈಗ ₹6 ಸಾವಿರ ಆಗಿದೆ. ಕೆಲಸಕ್ಕೆ ಬಾರದ ಕಟ್ಟಿಗೆಗೂ ಬೇಡಿಕೆ ಬಂದಿದೆ. ಕಟ್ಟಿಗೆಯ ಅಡ್ಡೆಯಲ್ಲಿ ಕಟ್ಟಿಗೆ ಸಾಮಗ್ರಿ ಮಾಡುವಾಗ ಬರುತ್ತಿದ್ದ ತ್ಯಾಜ್ಯಕ್ಕೂ ಈಗ ಬೇಡಿಕೆ ಬಂದಿದೆ.