ಕೊಪ್ಪಳ:
ಜಿಲ್ಲೆಯಲ್ಲಿರುವ ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು ತಿಳಿದುಕೊಳ್ಳಲು ಲಂಡನ್ ಕಿಂಗ್ಸ್ ಕಾಲೇಜಿನ ಜೋಸೆಫ್ ಪೌಲ್ ನೇತೃತ್ವದ ಸಂಶೋಧನಾ ತಂಡವು ಮಂಗಳವಾರ ತಾಲೂಕಿನ ಹಲಗೇರಿಯ ಕೂಸಿನ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.ಕೂಸಿನ ಮನೆಯ ಮಕ್ಕಳ ದಾಖಲಾತಿ ರಜಿಸ್ಟರ್ ಪರಿಶೀಲಿಸಿ ಕೇರ್ ಟೇಕರ್ಗಳಿಗೆ ಹಣ ಪಾವತಿಯಾಗಿರುವ ಬಗ್ಗೆ ಸಂವಾದ ನಡೆಸಿತು. ನಂತರ ಪ್ರತಿ ದಿನ ಮಕ್ಕಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಆಹಾರ ವಿತರಿಸುವ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೇರ್ ಟೇಕರ್ಸ್ ವಿವರಿಸಿದರು.
ಕೂಸಿನ ಮನೆಗೆ ಬರುವ ಮಕ್ಕಳ ದಾಖಲಾತಿ, ಮಕ್ಕಳ ಆರೈಕೆ, ಪೌಷ್ಟಿಕ ಮತ್ತು ಅಪೌಷ್ಟಿಕ ಮಕ್ಕಳಿಗೆ ಮೆನು ಚಾರ್ಟ್ ಪ್ರಕಾರ ಆಹಾರ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಮಕ್ಕಳ ಆರೈಕೆದಾರರ ವೇತನಕ್ಕೆ ಸಂಬಂಧಿಸಿದ ವಹಿಗಳನ್ನು ಪರಿಶೀಲಿಸಿದರು. ಪಾಲಕರು ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರುತ್ತಿರುವುದರಿಂದ ಆಗುತ್ತಿರುವ ಅನುಕೂಲತೆ ಬಗ್ಗೆ ಮಾಹಿತಿ ಸಂಗ್ರಹಿಸಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಪಾಲಕರು ಹೋಗುತ್ತಿರುವುದರಿಂದ ಮಕ್ಕಳ ಆರೈಕೆಗೆ ಕೂಸಿನ ಮನೆ ಬಹಳಷ್ಟು ಅನುಕೂಲವಾಗಿದೆ ಎಂದು ಪಾಲಕರಾದ ಸುನಂದಾ ವಿವರಿಸಿದರು.
ಈ ಕೇಂದ್ರದಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಹೆಸರು ಬೇಳೆ ಪಾಯಸ, ರಾಗಿ ಗಂಜಿ, ಉಪ್ಪಿಟ್ಟು ನೀಡುತ್ತಿದ್ದು ಮಕ್ಕಳಲ್ಲಿ ಅಪೌಷ್ಟಿಕ ಕೊರತೆ ನೀಗಿದೆ ಎಂದು ಮಾಹಿತಿ ನೀಡಿದರು.ಪ್ರತಿ ತಿಂಗಳಿಗೊಮ್ಮೆ ಕೂಸಿನ ಮನೆಯ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸಿ ಅವರ ಬೆಳವಣಿಗೆ, ತೂಕ ಇತ್ಯಾದಿ ಮಾಹಿತಿಯನ್ನು ರಜಿಸ್ಟರ್ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಿದೆ ಎಂದು ಪಿಡಿಒ ವಿವರಿಸಿದರು. ಸಂಶೋಧನಾ ತಂಡವು ಕೂಸಿನ ಮನೆ ಕಾರ್ಯನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು.
ಈ ವೇಳೆ ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಪಿಡಿಒ ಅಶೋಕ ರಾಂಪುರ, ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್, ಸದಸ್ಯ ಕಳಕನಗೌಡ ಹಳೆಮನಿ, ಮಕ್ಕಳ ಆರೈಕೆದಾರರಾದ ಭರಮವ್ವ ಹರಿಜನ, ಅನ್ನಪೂರ್ಣ ಸಂಜೀವಗೌಡ್ರ, ಡಿಇಒ ಪಂಚಾಕ್ಷರಿ, ಮಾಲತೇಶ ಉಪಸ್ಥಿತರಿದ್ದರು.