ಕನ್ನಡ ವಿಶ್ವವಿದ್ಯಾಲಯ ಕಾಮಗಾರಿಗೆ ಕೆಕೆಆರ್‌ಡಿಬಿ 5 ಕೋಟಿ ರುಪಾಯಿ ಬಿಡುಗಡೆ

KannadaprabhaNewsNetwork |  
Published : May 21, 2024, 12:45 AM IST
ಸ | Kannada Prabha

ಸಾರಾಂಶ

ಕೆಕೆಆರ್‌ಡಿಬಿಯ ಸಿಎಂ ವಿವೇಚನಾ ನಿಧಿಯಡಿ ಮೀಸಲಿಟ್ಟ ಅನುದಾನದಲ್ಲಿ ಉಳಿಕೆಯಾದ ₹19.85 ಕೋಟಿಯನ್ನು ಹಂಪಿ ವಿಶ್ವವಿದ್ಯಾಲಯದ ಎಂಟು ಕಾಮಗಾರಿಗಳಿಗೆ ಒದಗಿಸಲು ಸರ್ಕಾರ ಅನುಮೋದಿಸಿತ್ತು.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಮಂಜೂರಾತಿ ನೀಡಿದ ಕಾಮಗಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮುಖ್ಯಮಂತ್ರಿ ವಿವೇಚನಾ ನಿಧಿಯ ಕ್ರಿಯಾ ಯೋಜನೆಯಡಿ ₹5.55 ಕೋಟಿ ಬಿಡುಗಡೆ ಮಾಡಿದ್ದು, ವಿವಿಯಲ್ಲಿ ಸ್ಥಗಿತಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಈಗ ಮತ್ತೆ ಜೀವ ದೊರೆತಿದೆ.

ಕೆಕೆಆರ್‌ಡಿಬಿಯ ಸಿಎಂ ವಿವೇಚನಾ ನಿಧಿಯಡಿ ಮೀಸಲಿಟ್ಟ ಅನುದಾನದಲ್ಲಿ ಉಳಿಕೆಯಾದ ₹19.85 ಕೋಟಿಯನ್ನು ಹಂಪಿ ವಿಶ್ವವಿದ್ಯಾಲಯದ ಎಂಟು ಕಾಮಗಾರಿಗಳಿಗೆ ಒದಗಿಸಲು ಸರ್ಕಾರ ಅನುಮೋದಿಸಿತ್ತು. ಈ ಪೈಕಿ ₹10.34 ಕೋಟಿ ಬಿಡುಗಡೆಯಾಗಿತ್ತು. ಆದರೆ, ಕಾಮಗಾರಿಗಳ ಅನುಷ್ಠಾನ ವಿಚಾರದಲ್ಲಿ ಗೊಂದಲ ಉಂಟಾದ ಹಿನ್ನೆಲೆ ಬಾಕಿ ಮೊತ್ತ ಬಿಡುಗಡೆ ಮಾಡಿರಲಿಲ್ಲ. 2022ರ ಜೂನ್ 6ರಂದು ಸರ್ಕಾರ ಹೊರಡಿಸಿದ ಮೊದಲ ಆದೇಶದ ಪ್ರಕಾರ ಕಾಮಗಾರಿ ಅನುಷ್ಠಾನ ಆಗಬೇಕೆಂಬ ವಿಶ್ವವಿದ್ಯಾಲಯದ ಕೋರಿಕೆಯನ್ನು ಮನ್ನಿಸಿ ಮಂಡಳಿ ಇದೀಗ ಬಾಕಿ ಉಳಿದ ಅನುದಾನದಲ್ಲಿ 2ನೇ ಕಂತಿನ ಶೇ.35ರಷ್ಟನ್ನು ಬಿಡುಗಡೆ ಮಾಡಿದೆ. ಕಾಮಗಾರಿ ಕೊನೆಗೊಂಡ ಬಳಿಕ ಉಳಿದ ಹಣ ಬಿಡುಗಡೆಯಾಗಲಿದೆ. ಈ ಹಿಂದೆ ₹4 ಕೋಟಿ ವೆಚ್ಚದಲ್ಲಿ ಬಾನುಲಿ ಕೇಂದ್ರದ ಸ್ಟುಡಿಯೋ ನಿರ್ಮಾಣವಾಗಿದೆ.

ನೀರಿನ ಟ್ಯಾಂಕ್‌ ನಿರ್ಮಾಣ: ಕನ್ನಡ ವಿವಿ ಬಳಿ ತುಂಗಭದ್ರಾ ಜಲಾಶಯದ ಎಲ್‌ಎಲ್‌ಸಿ ಕಾಲುವೆಯಿಂದ ವರ್ಷಕ್ಕೆ 2 ಕ್ಯುಸೆಕ್‌ನಷ್ಟು ನೀರನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ಇದೆ. ಆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಸಲುವಾಗಿ 2 ಕೋಟಿ ಲೀಟರ್ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್‌ನ ನಿರ್ಮಾಣ ಕಾರ್ಯ ಶೇ.10 ಮತ್ತು 8 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್‌ನ ನಿರ್ಮಾಣ ಕಾರ್ಯ ಶೇ.50ರಷ್ಟು ಪೂರ್ಣಗೊಂಡಿತ್ತು. ಎರಡು ಕಿ.ಮೀ. ಉದ್ದಕ್ಕೆ ಅಳವಡಿಸಬೇಕಾದ 9 ಇಂಚಿನ ನೀರಿನ ಪೈಪ್, ಇತರ ಪೂರೈಕೆ ಪೈಪ್‌ಗಳ ಖರ್ಚು ಸೇರಿದಂತೆ ಒಟ್ಟು ₹6.50 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿತ್ತು. ಮೊದಲ ಕಂತಿನಲ್ಲಿ ₹2.60 ಕೋಟಿ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ₹2.38 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನು ಕನ್ನಡ ವಿವಿಯ ಜೀವಾಳವಾಗಿರುವ ಪ್ರಸಾರಾಂಗ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ₹1.20 ಕೋಟಿ ಬಿಡುಗಡೆಯಾಗಿತ್ತು. ಈಗ ಮತ್ತೆ ₹1.05 ಕೋಟಿ ಬಿಡುಗಡೆಯಾಗಿದೆ. ಈ ಕಟ್ಟಡವನ್ನು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ಕನ್ನಡ ವಿವಿಯಲ್ಲಿ ಅನುದಾನ ಇಲ್ಲದೇ ಸೊರಗಿದೆ ಎಂದು ಹಲವು ಬಾರಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸರ್ಕಾರದ ಗಮನ ಸೆಳೆದಿದ್ದರು. ಕೆಕೆಆರ್‌ಡಿಬಿ ಜೊತೆಗೆ ನಡೆಸಿದ ಪತ್ರ ವ್ಯವಹಾರ ಹಾಗೂ ಕಾಮಗಾರಿಗಳು ನಡೆದು ಅರ್ಧಕ್ಕೆ ನಿಂತಿರುವುದನ್ನು ಪರಿಶೀಲಿಸಿದ ಬಳಿಕ ಈಗ ಅನುದಾನ ಬಿಡುಗಡೆ ಮಾಡಿದೆ.

ಕನ್ನಡ ವಿವಿಯಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಕೆಆರ್‌ಡಿಬಿ ಶೇ.35 ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಹಂಪಿ ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ