ಗುಣಾತ್ಮಕ ಶಿಕ್ಷಣಕ್ಕೆ ಕೆಎಲ್‌ಇ ಕಾಲೇಜುಗಳು ಹೆಸರುವಾಸಿ

KannadaprabhaNewsNetwork | Published : Apr 7, 2025 12:35 AM

ಸಾರಾಂಶ

ಕೆಎಲ್ಇ ಸಂಸ್ಥೆಯು ಕಳೆದ 109 ವರ್ಷಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆದುನಿಂತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಎಲ್‌ಇ ಸಂಸ್ಥೆಯು ಕಾನೂನು ಪದವಿ ಕೋರ್ಸುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಅಸಂಖ್ಯ ವಿದ್ಯಾರ್ಥಿಗಳು ಕಾನೂನು ಪದವಿಯೊಂದಿಗೆ ದೇಶದ ನ್ಯಾಯಾಂಗ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯ. ಈ ನಿಟ್ಟಿನಲ್ಲಿ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯವು ಕಳೆದ ಐವತ್ತು ವರ್ಷಗಳಿಂದ ಅಸಂಖ್ಯ ವಿದ್ಯಾರ್ಥಿಗಳನ್ನು ರೂಪಿಸಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ 50 ವರ್ಷಗಳ ಸುವರ್ಣ ಸಂಭ್ರಮಾಚರಣೆ ನಿಮಿತ್ತ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ ವಾಕೋಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್ಇ ಸಂಸ್ಥೆಯು ಕಳೆದ 109 ವರ್ಷಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆದುನಿಂತಿದೆ. ಆ ಮೂಲಕ ಸಾಮಾಜಿಕ ಸೇವೆಯನ್ನು ನಿರಂತರವಾಗಿ ಮಾಡುತ್ತಿದ್ದು ಮುಂದಿನ ದಿನಮಾನಗಳಲ್ಲಿ ಈ ಸೇವೆ ಇನ್ನೂ ಹೆಚ್ಚು ವಿಸ್ತರಿಸಲಿದೆ. ಸಂಸ್ಥೆಯ ಕಾನೂನು ಮಹಾವಿದ್ಯಾಲಯಗಳು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮುಖಾಂತರ ಉತ್ಕೃಷ್ಟ ನ್ಯಾಯವಾದಿಗಳನ್ನು ಸಮಾಜಕ್ಕೆ ಕೊಡಮಾಡಿದೆ ಎಂದರು.

ಸಂಸ್ಥೆಯು ಗದಗ, ಹುಬ್ಬಳ್ಳಿ, ಚಿಕ್ಕೋಡಿ, ಬೆಂಗಳೂರು ಹಾಗೂ ಮುಂಬಯಿಗಳಲ್ಲಿ ಕಾನೂನು ಮಹಾವಿದ್ಯಾಲಯಗಳನ್ನು ಮುನ್ನಡೆಸುತ್ತಿದ್ದು, ಗುಣಾತ್ಮಕವಾದ ಶಿಕ್ಷಣವನ್ನು ನೀಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆಗೆ ಹೆಸರು ತಂದಿದ್ದಾರೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಬೆಳಗಾವಿ ಹತ್ತಿರ ಸಾಂಬ್ರಾ ರಸ್ತೆಗೆ ವಿನೂತನವಾದ ಕಾನೂನು ಮಹಾವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸುತ್ತಿದೆ. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರಿಗೆ ನಿಸ್ವಾರ್ಥದಿಂದ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗುವಂತಾಬೇಕು ಕರೆ ನೀಡಿದರು. ಅರ್ಧ ಶತಮಾನವನ್ನು ಪೂರೈಸುತ್ತಿರುವ ಈ ಕಾಲೇಜು ವಿಸ್ತಾರೋನ್ನತವಾಗಿ ಮುನ್ನಡೆಯಲಿ ಎಂದು ಶುಭಕೋರಿದರು.

ವಾಕೋಥಾನ್‌ವು ಕಾಲೇಜು ಕ್ಯಾಂಪಸ್‌ದಿಂದ ಪ್ರಾರಂಭವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕ್ಯಾಂಪ್, ರೈಲು ನಿಲ್ದಾಣ ವೃತ್ತದಿಂದ ಸಾಗುತ್ತಾ ಮರಳಿ ಮಹಾವಿದ್ಯಾಲಯದ ಆವರಣದಲ್ಲಿ ಕೊನೆಗೊಂಡಿತು. ಮುಖ್ಯ ಅತಿಥಿಗಳಾಗಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಬಿ.ಬೆಲ್ಲದ್ ಅವರು ವಿಜೇತ ಸ್ಪರ್ಧಾಳುಗಳಿಗೆ ಬಹುಮಾನಗಳನ್ನು ವಿತರಿಸಿದರು. ಪ್ರಾಚಾರ್ಯರಾದ ಡಾ. ಜ್ಯೋತಿ ಹಿರೇಮಠ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಕಾಲೇಜಿನ ರಾಯಬಾರಿಗಳು ನಿಮ್ಮ ಸಲಹೆ ಸೂಚನೆಗಳು ಕಾಲೇಜಿನ ಬೆಳವಣಿಗೆಗೆ ಅತ್ಯಗತ್ಯ. ಸುವರ್ಣ ಮಹೋತ್ಸವದ ಅಂಗವಾಗಿ ವರ್ಷದುದ್ದಕ್ಕೂ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದು ಹೇಳಿದರು.

ಹಿರಿಯ ವಕೀಲ ಟಿ.ಸಿ.ಮೋದಗಿ, ವಿ.ಸಿ.ಬೆಂಬಳಗಿ, ಸನೀಲ ತುಬಚಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ರೀಚಾ ರಾವ್, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾಲ್ನಡಿಗೆ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾಲ್ನಡಿಗೆಯಲ್ಲಿ ಪ್ರಥಮಸ್ಥಾನ ಪಡೆದ ಭಾಗ್ಯಶ್ರೀ ಮಗನಟ್ಟಿ, ಸಾಗರ ಬೆಳವಿ ಹಾಗೂ ಇತರ ಸ್ಪರ್ಧಾಳುಗಳಿಗೆ ಆರ್.ಬಿ.ಬೆಲ್ಲದ ಅವರು ಬಹುಮಾನ ವಿತರಿಸಿದರು.

Share this article