ಕನ್ನಡಪ್ರಭ ವಾರ್ತೆ ಕೋಲಾರಸಿವಿಲ್ ನ್ಯಾಯಾಧೀಶರ ಪರೀಕ್ಷೆ ಆಕಾಂಕ್ಷಿಗಳು ಮೊದಲು ಇತಿಹಾಸ ಅರಿತು, ನ್ಯಾಯಾಂಗ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು, ನ್ಯಾಯ ನಿರ್ಣಯದಲ್ಲಿ ನಿಸ್ವಾರ್ಥತೆಯೊಂದಿಗೆ ನಿಷ್ಪಕ್ಷಪಾತದಿಂದ ವರ್ತಿಸುವ ಸಂಕಲ್ಪ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಭವನದಲ್ಲಿ ಸಿವಿಲ್ ನ್ಯಾಯಾಧೀಶರ ಹುದ್ದೆ ಪರೀಕ್ಷಾರ್ಥಿಗಳಿಗೆ ತರಬೇತಿ ಶಿಬಿರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನ್ಯಾಯಾಂಗ ವ್ಯವಸ್ಥೆ ಅರಿತುಕೊಳ್ಳಿ
ಸಮಾಜದಲ್ಲಿನ ಭ್ರಷ್ಟಾಚಾರ, ಶೋಷಣೆ ತಡೆಯಲು ವಕೀಲರು ಹೆಚ್ಚಿನ ಜವಾಬ್ದಾರಿ ವಹಿಸಬೇಕು, ಶಾಸಕಾಂಗ ವ್ಯವಸ್ಥೆಯಲ್ಲಿನ ಲೋಪಗಳ ಕುರಿತಾದ ಪ್ರಕರಣಗಳಲ್ಲಿ ನ್ಯಾಯ ರಕ್ಷಣೆಯ ಜವಾಬ್ದಾರಿ ನಿಮ್ಮದಾಗಿದೆ ಎಂದರು.ಇತಿಹಾಸ ಅಧ್ಯಯನ ಮಾಡಿ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ಮಾತನಾಡಿ, ಉತ್ತಮ ವಕೀಲರು, ನ್ಯಾಯಾಧೀಶರಾಗಲು ನಿರಂತರ ಅಧ್ಯಯನ ಅಗತ್ಯವಿದೆ, ಕಾನೂನು ಪುಸ್ತಕಗಳ ಜತೆಗೆ ನಮ್ಮ ದೇಶದ ಇತಿಹಾಸ ಪುಸ್ತಕಗಳ ಅಧ್ಯಯನವೂ ಅಗತ್ಯವಿದೆ, ಕೋಲಾರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ವಕೀಲರು ನ್ಯಾಯಾಧೀಶರ ಹುದ್ದೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿ ಎಂದು ಹಾರೈಸಿದರು.ಹಣ ಗಳಿಕೆಯೊಂದೇ ಮುಖ್ಯ ಕಾರ್ಯವಾಗಬಾರದು, ಸಮಾಜದಲ್ಲಿನ ಶೋಷಿತರ ನೆರವಿಗೆ ನಿಲ್ಲುವ ಸಂಕಲ್ಪವೂ ಅಗತ್ಯವಿದೆ, ಈ ನಿಟ್ಟಿನಲ್ಲಿ ನ್ಯಾಯ ಪಡೆಯಲಾಗದ ಅನೇಕರ ಬಾಳಿಗೆ ನೀವು ನೆರಳಾಗಬೇಕು ಎಂದು ಕೋರಿದರು.ದೇಶಪ್ರೇಮ ಬೆಳೆಸಿಕೊಳ್ಳಿ:ಹೈಕೋರ್ಟ್ನ ನೇಮಕಾತಿ ವಿಲೇಖನಾಧಿಕಾರಿ ಇ.ಚಂದ್ರಕಲಾ ಮಾತನಾಡಿ, ಸಿವಿಲ್ ನ್ಯಾಯಾಧೀಶರಾಗಲು ನಿರಂತರ ಅಧ್ಯಯನ ಅಗತ್ಯವಿದೆ, ದೇಶ ಕಟ್ಟವ ಕಾರ್ಯದಲ್ಲಿ ಪಾತ್ರ ವಹಿಸಿರುವ ವಕೀಲರಲ್ಲಿ ದೇಶಪ್ರೇಮ ಇರಬೇಕು, ದೇಶದ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ತೀರ್ಪು ನೀಡುವಾಗಿ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.ಮಹಿಳಾ ವಕೀಲರು ನ್ಯಾಯಾಧೀಶರಾಗಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ಇಂದು ಮಹಿಳೆಯರು ಸಬಲರಾಗಿದ್ದಾರೆ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಶಕ್ತಿಯನ್ನು ಸಾಕ್ಷೀಕರಿಸಿದ್ದಾರೆ, ಮಹಿಳಾ ಅನಕ್ಷರಸ್ಥರು, ಶೋಷಿತರು ನಿಮ್ಮ ಬಳಿ ಬಂದಾಗ ಅವರ ಹಿತರಕ್ಷಣೆ ಮಾಡುವುದರ ಜತೆಗೆ ಅವರ ನೆರವಿಗೆ ನಿಲ್ಲುವ ನಿರ್ಧಾರ ಮಾಡಬೇಕು ಎಂದರು.ವಕೀಲರ ಹಿತರಕ್ಷಣೆಗೆ ಸಂಘ ಬದ್ಧ
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಜಯಶ್ರೀ, ಅಪರ ಜಿಲ್ಲಾಧಿಕಾರಿ ಮಂಗಳಾ, ವಿಭಾಗಾಧಿಕಾರಿ ಡಾ. ಮೈತ್ರಿ, ನ್ಯಾಯಾಧೀಶರಾದ ದಿವ್ಯ, ಪ್ರಸಾದ್, ನಿರ್ಮಲ, ಸುನಿಲ ಎಸ್.ಹೊಸಮನಿ, ನಟೇಶ್, ಶ್ರೀನಿವಾಸ ಪಾಟೀಲ್, ಚೇತನ ಅರಿಕಟ್ಟೆ, ಮದನ್, ಹರ್ಷ, ಲಕ್ಷ್ಮೀ, ಹಿರಿಯ ವಕೀಲರಾದ ಕೋದಂಡಪ್ಪ, ಕೆ.ವಿ.ಶಂಕರಪ್ಪ, ಟಿ.ಜಿ.ಮನ್ಮಥರೆಡ್ಡಿ, ಬಿಸಪ್ಪಗೌಡ ಮತ್ತಿತರರಿದ್ದು, ಕಂಜುನೇತ್ರಿ ಪ್ರಾರ್ಥಿಸಿ, ವಕೀಲರಾದ ಉಮಾ ನಿರೂಪಿಸಿ, ವಕೀಲರಾದ ಎಂ.ವಿ.ರತ್ನಮ್ಮ ಸ್ವಾಗತಿಸಿ, ಮುನಿರತ್ನ ವಂದಿಸಿದರು.
೭ಕೆಎಲ್ಆರ್-೧........ ಕೋಲಾರ ನಗರದ ವಕೀಲರ ಭವನದಲ್ಲಿ ನ್ಯಾಯಾಧೀಶರ ಹುದ್ದೆ ಪರೀಕ್ಷಾರ್ಥಿಗಳಿಗೆ ತರಬೇತಿ ಶಿಬಿರವನ್ನು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಉದ್ಘಾಟಿಸಿದರು.