- ಗಣೇಶ ದೇವಸ್ಥಾನದಲ್ಲಿ ಪೊಲೀಸ್ ಬೀಟ್, ಜನಸಂಪರ್ಕ ಸಭೆ
ಕನ್ನಡಪ್ರಭ ವಾರ್ತೆ ಹರಿಹರ
ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ಹೆಚ್ಚಿಸಲು ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ. ಆದ್ದರಿಂದ ಪೊಲೀಸರೆಂದರೆ ಭಯ ಬೇಡ, ಬದಲಿಗೆ ಭರವಸೆ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.ನಗರದ ಸಮೀಪದ ಗುತ್ತೂರಿನ ಹರ್ಲಾಪುರ ಗಣೇಶ ದೇವಸ್ಥಾನ ಆವರಣದಲ್ಲಿ ಸೋಮವಾರ ಪೊಲೀಸ್ ಬೀಟ್ ಹಾಗೂ ಜನಸಂಪರ್ಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಂಪರ್ಕ ಹೊಂದಿ, ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಇದರಿಂದ ಅಪರಾಧ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಸಾಧ್ಯ ಎಂದರು.
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಿಗೆ ಮಕ್ಕಳನ್ನೇ ಸಮಾಜದ ಆಸ್ತಿಯಾಗುವಂತೆ ರೂಪಿಸಬೇಕು. ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಈಗಿನ ಯುವಜನರು ದುಶ್ಚಟಗಳಿಗೆ ದಾಸರಾಗದಂತೆ ಪೋಷಕರು ಎಚ್ಚರ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ವೃತ್ತ ನಿರೀಕ್ಷಕ ಸುರೇಶ್ ಸಗರಿ ಬೀಟ್ ವ್ಯವಸ್ಥೆ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಿದರು. ನಗರ ಸಭೆಯ ಉಪಾಧ್ಯಕ್ಷ ಎಂ.ಜಂಬಣ್ಣ, ಬಿ.ಜಿ. ಹಾಲೇಶ್ ಗೌಡ, ಹರಿಹರ ಗ್ರಾಮಂತರ ಪಿಎಸ್ಐ ಮಂಜುನಾಥ್ ಕುಪ್ಪೇಲೂರು, ಅಪರಾಧ ವಿಭಾಗದ ಪಿಎಸ್ಐ ಮಾದೇವ ಸಿದ್ದಪ್ಪ ಬತ್ತಿ, ಪೊಲೀಸ್ ಅಧಿಕಾರಿಗಳಾದ ಕರಿಯಪ್ಪ, ರಮೇಶ್, ಅನಿಲ್, ಅರ್ಜುನ್, ಶಾಲೆ ಶಿಕ್ಷಕರು, ಗ್ರಾಮಸ್ಥರು ಇದ್ದರು.- - -
-07ಎಚ್ಆರ್ಆರ್01, 02.ಜೆಪಿಜಿ:ಹರಿಹರ ಸಮೀಪದ ಗುತ್ತೂರಿನ ಹರ್ಲಾಪುರ ಗಣೇಶ ದೇವಸ್ಥಾನ ಆವರಣದಲ್ಲಿ ಸೋಮವಾರ ಪೊಲೀಸ್ ಬೀಟ್ ಹಾಗೂ ಜನಸಂಪರ್ಕ ಸಭೆಗೆ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಚಾಲನೆ ನೀಡಿದರು.