ಸಾರ್ವಜನಿಕರಿಗಾಗಿ ನಡೆದ ಕಣ್ಣು ತಪಾಸಣಾ ಶಿಬಿರದಲ್ಲಿ ಅವಶ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಪರ್ವತರಾಜನ್ ಕನ್ನಡಕ ವಿತರಿಸಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಗೌಡ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗಾಗಿ ನಡೆದ ಕಣ್ಣು ತಪಾಸಣಾ ಶಿಬಿರದಲ್ಲಿ ಅವಶ್ಯವಿದ್ದವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಕುಶಾಲನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜು ಪ್ರಭಾರ ಪ್ರಂಶುಪಾಲ ಪಿ. ಪರ್ವತರಾಜನ್ ಅವರು ಕನ್ನಡವನ್ನು ವಿತರಿಸಿ ಮಾತನಾಡಿದರು.
ಇದೊಂದು ಸಾಮಾಜಿಕ ಕಳಕಳಿಯ ಉತ್ತಮ ಕಾರ್ಯಕ್ರಮವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಇದು ಹೆಚ್ಚು ಪ್ರಯೋಜನವಾಗಲಿದೆ. ಇನ್ನು ಮುಂದೆಯೂ ಸಂಘ ಇಂತಹ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಲಿ ಎಂದು ಸಲಹೆ ನೀಡಿದರು.
ಕಾಲೇಜಿನ ರಿಜಿಸ್ಟ್ರಾರ್ ಕೆ.ಎ. ಮೇರಿ ಮಾತನಾಡಿ, ಈ ಇಳಿ ವಯಸ್ಸಿನಲ್ಲೂ ಸಂಘದ ಪದಾಧಿಕಾರಿಗಳು ಕೈಗೊಂಡಿರುವ ಜನಪರ ಕಾರ್ಯಕ್ರಮ ಅತ್ಯುತ್ತಮವಾಗಿದೆ. ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಬಡ ಜನರ ಆಶೋತ್ತರಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ, ಸಹ ಕಾರ್ಯದರ್ಶಿ ಅತ್ತೆಡಿ ಕೃಷ್ಣಪ್ಪ, ನಿರ್ದೇಶಕರಾದ ಬೈತಡ್ಕ ಬೆಳ್ಯಪ್ಪ, ತಳೂರು ಕಾಳಪ್ಪ, ಹೊಸೊಕ್ಲು ಪೊನ್ನಪ್ಪ, ಕುಲ್ಲಚೆಟ್ಟಿ ಪೂವಯ್ಯ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.