ಕೊಡವ ಭಾಷಿಕ ಜನಾಂಗದವರನ್ನು ಕಡೆಗಣಿಸಿದರೆ ತೀವ್ರ ಹೋರಾಟ

KannadaprabhaNewsNetwork |  
Published : Jul 06, 2026, 02:45 AM IST
5ಎಂಡಿಕೆ2 : ವ ಭಾಷಿಕ ಸಮುದಾಯಗಳ ಕೂಟದ ಮಹಾಸಭೆ ನಡೆಯಿತು.  | Kannada Prabha

ಸಾರಾಂಶ

ಕೊಡವ ಭಾಷಾ ಸಂಸ್ಕೃತಿ, ಸಂಪ್ರದಾಯಗಳ ಮೂಲ ತಾಯಿ ಬೇರಿನಂತಿರುವ ಕೊಡವ ಭಾಷಿಕ ಜನಾಂಗದವರನ್ನು ಹಲವಾರು ವರ್ಷಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದಾರೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ: ಕೊಡವ ಭಾಷಾ ಸಂಸ್ಕೃತಿ, ಸಂಪ್ರದಾಯಗಳ ಮೂಲ ತಾಯಿ ಬೇರಿನಂತಿರುವ ಕೊಡವ ಭಾಷಿಕ ಜನಾಂಗದವರನ್ನು ಹಲವಾರು ವರ್ಷಗಳಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದ್ದಾರೆ ಎಂದು ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡವ ಭಾಷಿಕ ಸಮುದಾಯಗಳ ಕೂಟದ 2025- 26 ನೇ ಸಾಲಿನ ಮಹಾಸಭೆ ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತೀರಾ ಹಿಂದುಳಿದ ಮೂಲ ನಿವಾಸಿ ಜನಾಂಗದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ವಿಫಲತೆಯನ್ನು ಕಾಣುತ್ತಿದೆ. ಕೊಡವ ಭಾಷಿಕ ಜನಾಂಗದವರನ್ನು ಕೇವಲ ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.ಶಾಶ್ವತ ನೆಲೆ ಕಂಡುಕೊಳ್ಳುವುದು ಕೊಡವ ಭಾಷಿಕ ಜನಾಂಗದವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಜಾಗವನ್ನು ಗುರುತಿಸಿ ಸಂಬಂಧಿಸಿದ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಮಂಜೂರು ಮಾಡಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.ಜನಾಂಗದ ಪ್ರಮುಖರಾದ ಕೋಲೆಯಂಡ ಡಾ.ಮೋಹನ್ ಅಪ್ಪಾಜಿ, ಅಂಬಾಡಿರ ಕಾರ್ಯಪ್ಪ, ಕುಡಿಯರ ಮುತ್ತಪ್ಪ, ವಾಸುದೇವ್, ಪ್ರಭುಕುಮಾರ್, ಬಿದ್ದಪ್ಪ ಮುಂತಾದವರು ಮಾತನಾಡಿ ಶಾಶ್ವತ ಜಾಗವನ್ನು ಪಡೆಯಲು ಕೂಟದೊಂದಿಗೆ ಜನಾಂಗ ಬಾಂಧವರು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಜನಾಂಗದ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಯಾವುದೇ ಸಮಸ್ಯೆ ಎದುರಾದರೂ ಕೂಟದ ಮೂಲಕ ಹೋರಾಟಕ್ಕೆ ಮುಂದಾಗಬೇಕು. ಪ್ರತಿಷ್ಠೆಯನ್ನು ಬದಿಗೊತ್ತಿ ಎಲ್ಲರೂ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಲು ಸಭೆ ಬೆಂಬಲ ಸೂಚಿಸಿತು.ಶಾಶ್ವತ ಜಾಗದ ವಿಚಾರದಲ್ಲಿ ತೀವ್ರ ಹೋರಾಟ ನಡೆಸುವುದಲ್ಲದೆ, ಮುಂದಿನ ಸಂದರ್ಭಗಳನ್ನು ಅವಲೋಕಿಸಿ ಸ್ಥಳೀಯ ಪಂಚಾಯ್ತಿ ಚುನಾವಣೆಗಳನ್ನು ಬಹಿಷ್ಕರಿಸಲು ಸಭೆ ನಿರ್ಣಯ ಕೈಗೊಂಡಿತು.ಸರ್ವ ಸದಸ್ಯರ ಅಭಿಪ್ರಾಯದಂತೆ ಇದೀಗ ಕಾರ್ಯನಿರ್ವಹಿಸುತ್ತಿರುವ ಕೂಟದ ಕಾರ್ಯಕಾರಿ ಮಂಡಳಿಯನ್ನು ಮೂರು ವರ್ಷಗಳಿಂದ ಮುಂದಿನ 5 ವರ್ಷಗಳ ವರೆಗೆ ಮುಂದುವರೆಸುವಂತೆಯೂ ಮತ್ತು ಯಾವುದೇ ಒಡಕು ಬಾರದಂತೆ ಜನಾಂಗ ಬಾಂಧವರು ಒಗ್ಗಟ್ಟಿನಿಂದ ಇರುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.ಅಂಗಾಂಗ ದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದ ಪಣಿಕ ಜನಾಂಗದ ದಿ.ಡಾಲು ಉತ್ತಯ್ಯ ಅವರ ತ್ಯಾಗವನ್ನು ಸ್ಮರಿಸಿ ಅವರ ಪತ್ನಿ ರಾಜೇಶ್ವರಿ (ರಾಜಿ) ಅವರನ್ನು ಕೂಟದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಅವರು ಸ್ವಾಗತಿಸಿ ಕಳೆದ ಸಾಲಿನ ಮಹಾಸಭೆಯ ಸಮಗ್ರ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಮೃತ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. 2025-26 ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಕೂಟದ ನಿರ್ದೇಶಕ ಕೋಲೆಯಂಡ ಗಿರೀಶ್ ವಾಚಿಸಿದರು. ಖಜಾಂಚಿ ಪಡಿಞರಂಡ ಪ್ರಭು ಕುಮಾರ್ ನಿರೂಪಿಸಿದರು, ಅಪ್ಪಚ್ಚಂಡ ತ್ರಿಶ ಪ್ರಾರ್ಥಿಸಿದರು. ಇದೇ ಪ್ರಥಮ ಬಾರಿಗೆ ಆಯೋಜಿಸಲ್ಪಟ್ಟಿದ್ದ ಕೊಡವ ಭಾಷಿಕ ಜನಾಂಗದ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.ಉಪಾಧ್ಯಕ್ಷರಾದ ನೆರೆಯಂಡಮಂಡ ಉಮಾಪ್ರಭು, ಪೊನ್ನಿರ ಗಗನ್, ಕುಡಿಯರ ಬೋಪಯ್ಯ, ಕಾರ್ಯದರ್ಶಿ ಪಟ್ಟಚಾರಿರ ದಿನೇಶ್ ಕಾರ್ಯಪ್ಪ, ಬಾಳೆಕುಟ್ಟಂಡ ಉದಯ ಮಾದಪ್ಪ, ನಿರ್ದೇಶಕರಾದ ಪೊಟ್ಟಂಡ ಗಣೇಶ್, ವೇದಪಂಡ ಕಿರಣ್, ಪಾತಂಡ ಸಂತೋಷ್, ಬೀಕಚಂಡ ಬೆಳ್ಯಪ್ಪ, ಮೇವಾಟಿರ ಮುತ್ತಣ್ಣ, ಕಾಪಾಳ ಮಿಲನ್, ತೋರೆರ ಕಾಶಿ ಕಾರ್ಯಪ್ಪ, ಪೊನ್ನಜ್ಜಿರ ತಂಜನ್, ಕಣಿಯರ ಪ್ರಕಾಶ್, ಚೋಕಿರ ಬಾಬಿ ಭೀಮಯ್ಯ, ಮೇದರ ಚಂದ್ರ, ಮಾರಂಗಿ ಮನು, ಜೋಕಿರ ಜೀವನ್, ಇಗ್ಗುಡ ಗಣಪತಿ, ಅರಮನೆ ಪಾಲೆ ದೇವಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ದಾಳಿ ಜಿಂಕೆ ಸಾವು
ಮತದಾರರ ಪರಿಷ್ಕರಣಾ ಅರ್ಜಿ ವಿತರಣೆ