ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರ ಹೊಸ ವರ್ಷದ ದಿನ ಎಡಮ್ಯಾರ್ 1ನ್ನು ಸಂಭ್ರಮದಿಂದ ಆಚರಿಸಿತು.
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರ ಹೊಸ ವರ್ಷದ ದಿನ ಎಡಮ್ಯಾರ್ 1ನ್ನು ಸಂಭ್ರಮದಿಂದ ಆಚರಿಸಿತು.
ಮುಂಜಾನೆ ಬೆಂಗ್ನಾಡು ಗ್ರಾಮದ ಬೆಟ್ಟತ್ತೂರಿನಲ್ಲಿರುವ ಕುಪದೀರ ಎನ್.ಮೋಹನ್ ಭತ್ತದ ಗದ್ದೆಯಲ್ಲಿ ಭೂಮಿ ತಾಯಿಗೆ ಧಾರ್ಮಿಕ ಪೂಜೆ ಸಲ್ಲಿಸಲಾಯಿತು. ಕೆಂಪಯ್ಯ ಹಾಗೂ ಕರಿಯ ಎಂಬ ಹೆಸರಿನ ಜೋಡೆತ್ತುಗಳ ಸಹಾಯದಿಂದ ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಾಂಪ್ರದಾಯಿಕ ಉಳುಮೆ, ನೇಗಿಲು ಹೊಡೆಯುವ ವಿಧಿಯನ್ನು ನೆರವೇರಿಸಿದರು. ಭೂತಾಯಿಗೆ ನಮಸ್ಕರಿಸುವ ಮೂಲಕ ಗೌರವ ಸಲ್ಲಿಸಿದರು.ಈ ಧಾರ್ಮಿಕ ಆಚರಣೆಗಳು ಕೊಡವ ಬುಡಕಟ್ಟು ಜನಾಂಗಕ್ಕೆ ಮಣ್ಣಿನೊಂದಿಗಿರುವ ಅವಿನಾಭಾವ ಸಂಬಂಧವನ್ನು ಸಾಕ್ಷೀಕರಿಸುತ್ತದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಕೊಡವ ಕ್ಯಾಲೆಂಡರ್ ಪಂಚಾಂಗದ ಪ್ರಕಾರ ಕೊಡವರ ಹೊಸ ವರ್ಷದ ದಿನವನ್ನು ಎಡಮ್ಯಾರ್ 1 ರಂದು ಅಂದರೆ ಗ್ರೆಗೋರಿಯನ್ ಕ್ಯಾಲೆಂಡರ್ ನ ಏ.14 ರಂದು ಆಚರಿಸಲಾಗುತ್ತದೆ. ಕೊಡವರು ತಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಪಾಲಿಸುತ್ತಾರೆ, ಎತ್ತುಗಳ ಮೂಲಕ ಬತ್ತದ ಗದ್ದೆಯನ್ನು ಉಳುವ ಕಾರ್ಯವು ಅವರ ಪರಂಪರೆ ಮತ್ತು ಭೂಮಿಯೊಂದಿಗಿನ ಬಲವಾದ ಸಂಬಂಧವನ್ನು ತೋರಿಸುತ್ತದೆ.
ಕೊಡವರ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಆಚರಣೆಗಳು ಆಕರ್ಷಕವಾಗಿವೆ. ಕೊಡವ ಹೊಸ ವರ್ಷದ ಶುಭ ದಿನವಾದ ಎಡಮ್ಯಾರ್ 1ರಂದು ಎತ್ತುಗಳಿಂದ ಗದ್ದೆ ಉಳುವ ವಿಧಿಯು ಒಂದು ಮಹತ್ವದ ಪ್ರಕ್ರಿಯೆಯಾಗಿದೆ ಎಂದರು.
ಕೊಡವ ಜನಾಂಗೀಯ ಸಮುದಾಯವು ಸೌರ ಕ್ಯಾಲೆಂಡರ್ ಅನ್ನು ಅನುಸರಿಸುತ್ತದೆ. ಸಿ.ಎನ್.ಸಿ ಪ್ರಾರಂಭವಾದಾಗಿನಿಂದ, ಕೊಡವರ ಅಸ್ತಿತ್ವದ ಬಗ್ಗೆ ವಿಶ್ವಕ್ಕೆ ಅರಿವು ಮೂಡಿಸಲು ಮತ್ತು ಕೊಡವ ಜನಾಂಗದ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವ ಸಮುದಾಯಕ್ಕೆ ಪ್ರದರ್ಶಿಸಲು, ಆ ಮೂಲಕ ವಿಶ್ವಸಂಸ್ಥೆಯ ಮನ್ನಣೆ ಪಡೆಯಲು ಹಾಗೂ ಸಾಂವಿಧಾನಿಕ ಭರವಸೆಯ ಮೂಲಕ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಕೊಡವ ಹೊಸ ವರ್ಷದ ದಿನ - ಎಡಮ್ಯಾರ್ 1 ಸೇರಿದಂತೆ ಎಲ್ಲಾ ಕೊಡವ ಜಾನಪದ ಸಾಂಪ್ರದಾಯಿಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಾ ಬಂದಿದ್ದೇವೆ ಎಂದು ಎನ್.ಯು.ನಾಚಪ್ಪ ವಿವರಿಸಿದರು.
ಬೇಡಿಕೆಗಳ ಮಂಡನೆ: ಸಂವಿಧಾನದ ವಿಧಿ 244, 371 ಮತ್ತು 6ನೇ ಹಾಗೂ 8ನೇ ಅನುಸೂಚಿಯ ಅಡಿಯಲ್ಲಿ ಕೊಡವನಾಡು ಭೌಗೋಳಿಕ- ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ಹಾಗೂ ಆದಿಮಸಂಜಾತ ಏಕ-ಜನಾಂಗೀಯ ಸಮುದಾಯಕ್ಕೆ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕು.ಕೊಡವ ಭೂಪ್ರದೇಶದ ಆದಿಮ ಜನಾಂಗೀಯ ಸಮುದಾಯವೆಂದು ಅಂತರರಾಷ್ಟ್ರೀಯ ಒಪ್ಪಂದದ ಅಡಿಯಲ್ಲಿ ಆದಿಮ ಕಿರು ಜನಾಂಗೀಯ ಕೊಡವರಿಗೆ ವಿಶ್ವಸಂಸ್ಥೆಯ ಮನ್ನಣೆ.ಸಮಗ್ರ ಸಬಲೀಕರಣಕ್ಕಾಗಿ ಅತ್ಯಲ್ಪ ಸಂಖ್ಯಾತ ಆದಿಮ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವ ಸಮುದಾಯವನ್ನು ನಮ್ಮ ಸಂವಿಧಾನದ ವಿಧಿ 340 ಮತ್ತು 342ರ ಅಡಿಯಲ್ಲಿ ಎಸ್ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು.ಕೊಡವ ಬುಡಕಟ್ಟಿನ ಮಾತೃಭಾಷೆಯಾದ ಶಾಸ್ತ್ರೀಯ ಆದಿಮ "ಕೊಡವ ತಕ್ಕ್ " ಅನ್ನು ನಮ್ಮ ಸಂವಿಧಾನದ 8ನೇ ಅನುಸೂಚಿಯಲ್ಲಿ ಸೇರಿಸಬೇಕು.ರೋಮಾಂಚಕ, ಅದ್ಭುತ, ಶ್ರೀಮಂತ ಮತ್ತು ಬೃಹತ್ ಕೊಡವ ಸಾಂಸ್ಕೃತಿಕ- ಜಾನಪದ ಪರಂಪರೆಯನ್ನು ಯುನೆಸ್ಕೋ ನ ಅಸ್ಪೃಶ್ಯ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಬೇಕು.ಸಿಖ್ಖರ ಕಿರ್ಪಾನ್ ಮಾದರಿಯಲ್ಲಿ ಕೊಡವ ಧಾರ್ಮಿಕ "ಸಂಸ್ಕಾರ "ವಾದ ಕೋವಿ ವಿನಾಯಿತಿ ಸವಲತ್ತನ್ನು ನಮ್ಮ ಸಂವಿಧಾನದ ವಿಧಿ 25 ಮತ್ತು 26 ರ ಅಡಿಯಲ್ಲಿ ಮುಂದುವರಿಸಬೇಕು ಮತ್ತು ಖಾತರಿಪಡಿಸಬೇಕು.ಸಿಕ್ಕಿಂನ ಬೌದ್ಧ ಸಮುದಾಯಕ್ಕೆ ಇರುವ "ಸಂಘ " ಕ್ಷೇತ್ರದ ಮಾದರಿಯಲ್ಲಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಕೊಡವ ಜನಾಂಗಕ್ಕೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಹಕ್ಕೊತ್ತಾಯಗಳನ್ನು ಅವರು ಇದೇ ಸಂದರ್ಭ ಮಂಡಿಸಿದರು.
ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ, ಕೂಪದಿರ ಒಕ್ಕದ ಅಧ್ಯಕ್ಷರಾದ ಕೂಪದಿರ ಪುಷ್ಪ ಮುತ್ತಪ್ಪ, ಕೂಪದಿರ ಗಂಗವ್ವ, ಕೂಪದಿರ ಕಾವೇರಮ್ಮ, ನಯನ ಯಶ್ವಂತ್, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಕೂಪದಿರ ಮೋಹನ್, ಮಂದಪಂಡ ಮನೋಜ್ ಮಂದಣ್ಣ, ಕೂಪದಿರ ಸಾಬು, ಕೂಪದಿರ ರೋಷನ್, ಕೂಪದಿರ ಪ್ರಣಮ್, ಮಲ್ಲಾಜಿರ ಜನಮ್ ಬೋಪಣ್ಣ, ಮಲ್ಲಾಜಿರ ಆಯುಷ್ ಅಯ್ಯಣ್ಣ, ಯಶ್ವಂತ್ ಕುಮಾರ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.