ಕಳೆದ ಆರೇಳು ತಿಂಗಳುಗಳಿಂದ ಕೊಡೇಕಲ್ ವಲಯಕ್ಕೆ ಅಡುಗೆ ಅನಿಲ ಸರಬರಾಜು ಮಾಡುವುದನ್ನು ಏಕಾಏಕಿ ನಿಲ್ಲಿಸಿದ್ದು, ಇದರಿಂದ ಕೊಡೇಕಲ್ ಮಾತ್ರವಲ್ಲದೆ, ವಲಯದ ಸುಮಾರು ಹಳ್ಳಿಗಳ ಗ್ರಾಮಸ್ಥರು ಪರದಾಡುವಂತಾಗಿದ್ದು, ಕೂಡಲೇ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸುವಂತೆ ಕರವೇ (ಪ್ರವೀಣ ಶೆಟ್ಟಿ) ಬಣದ ವತಿಯಿಂದ ಕೊಡೇಕಲ್ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ಜರುಗಿತು.
ಕನ್ನಡಪ್ರಭ ವಾರ್ತೆ ಕೊಡೇಕಲ್
ಕಳೆದ ಆರೇಳು ತಿಂಗಳುಗಳಿಂದ ಕೊಡೇಕಲ್ ವಲಯಕ್ಕೆ ಅಡುಗೆ ಅನಿಲ ಸರಬರಾಜು ಮಾಡುವುದನ್ನು ಏಕಾಏಕಿ ನಿಲ್ಲಿಸಿದ್ದು, ಇದರಿಂದ ಕೊಡೇಕಲ್ ಮಾತ್ರವಲ್ಲದೆ, ವಲಯದ ಸುಮಾರು ಹಳ್ಳಿಗಳ ಗ್ರಾಮಸ್ಥರು ಪರದಾಡುವಂತಾಗಿದ್ದು, ಕೂಡಲೇ ಸಮರ್ಪಕವಾಗಿ ಅಡುಗೆ ಅನಿಲ ಪೂರೈಸುವಂತೆ ಕರವೇ (ಪ್ರವೀಣ ಶೆಟ್ಟಿ) ಬಣದ ವತಿಯಿಂದ ಕೊಡೇಕಲ್ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯ ರಸ್ತೆ ತಡೆಯುವ ಮೂಲಕ ಪ್ರತಿಭಟನೆ ಜರುಗಿತು.
ಈ ವೇಳೆ ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ಗ್ರಾಮದ ಖಾಸಗಿ ಏಜೆನ್ಸಿಯವರ ಅಡುಗೆ ಅನಿಲ ವ್ಯತ್ಯಯ ಆಗಿರುವುದರಿಂದ ಕೊಡೇಕಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಡುಗೆ ಅನಿಲಕ್ಕಾಗಿ ದೂರದ ಜಾಲಹಳ್ಳಿಯವರೆಗೆ ಇಲ್ಲಿನ ಜನರು ಸಮಯ ವ್ಯರ್ಥದ ಜೊತೆಗೆ ಸಾಕಷ್ಟು ದೂರ ಕ್ರಮಿಸಬೇಕಾದ್ದರಿಂದ, ಸಾರ್ವಜನಿಕರಿಗೆ ಅನಾನೂಕಲವಾಗುತ್ತಿದೆ ಎಂದು ದೂರಿದರು.
ಇನ್ನು ಕೊಡೇಕಲ್ಗೆ ಈಗಾಗಲೇ ಮಂಜೂರಾದ ಪಶು ಆಸ್ಪತ್ರೆಗೆ ಜಾಗವನ್ನು ಹದ್ದುಬಸ್ತ್ ಮಾಡುವಂತೆ, ಮತ್ತು ಬಿಸಿಎಂ ಹಾಸ್ಟೆಲ್ಗೆ ಜಾಗವನ್ನು ಮಂಜೂರು ಮಾಡುವಂತೆ ಆಗ್ರಹಿಸಿದರು. ಇದೇ ವೇಳೆ ಕರವೇ ಪದಾಧಿಕಾರಿಗಳು ರಸ್ತೆಯ ಮಧ್ಯೆ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆಯಿಂದಾಗಿ ಕೆಲಕಾಲ ಟ್ರಾಪಿಕ್ ಸಮಸ್ಯೆ ಉಂಟಾಗಿತ್ತು.
ಪ್ರತಿಭಟನೆ ನಿರತ ಸ್ಥಳಕ್ಕೆ ತಾಲೂಕು ಆಹಾರ ನಿರೀಕ್ಷಕ ಸಿ.ಎಸ್ ರಾಜು ಹಾಗೂ ಉಪತಹಸೀಲ್ದಾರ್ ಕಲ್ಲಪ್ಪ ಜಂಜಿನಗಡ್ಡಿ ಭೇಟಿ ನೀಡಿ, ಶೀಘ್ರವೇ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದರಿಂದ ಕರವೇ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.