ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಮುಖ್ಯ ರಸ್ತೆಯಾದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸೇರಿದ ಎಸ್ಡಿಪಿಐ ಕಾರ್ಯಕರ್ತರು ಶಾಸಕ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಮಾತನಾಡಿ, ರೈಲ್ವೆ ಸ್ಟೇಷನ್ ರಸ್ತೆಯು ನಗರದ ಪ್ರಮುಖ ರಸ್ತೆಯಾಗಿದೆ. ರೈಲು ಪ್ರಯಾಣಿಕರೂ ಸೇರಿದಂತೆ ಈ ರಸ್ತೆಯಲ್ಲಿ ಸಾವಿರಾರು ಮಂದಿ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಚೆನ್ನಾಗಿದ್ದ ರಸ್ತೆಯನ್ನು ಪೈಪ್ಲೈನ್ ಕಾಮಗಾರಿಗೆ ಅಗೆದರು. ಆದರೆ, ಅದನ್ನು ಹಿಂದಿನಂತೆ ದುರಸ್ಥಿ ಮಾಡದ ಪರಿಣಾಮ ರಸ್ತೆಯಲ್ಲಿ ಮಂಡಿಯುದ್ದ ಗುಂಡಿ ಬಿದ್ದು, ಧೂಳುಮಯವಾಗಿದೆ ಎಂದು ದೂರಿದರು.ರಸ್ತೆ ಗುಂಡಿಬಿದ್ದ ಪರಿಣಾಮ ಸಾಕಷ್ಟು ಅಪಘಾತಗಳು ನಡೆದು, ವಾಹನ ಸವಾರರು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ರಸ್ತೆಯನ್ನು ಸರಿಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಐದಾರು ಬಾರಿ ಮನವಿ ಸಲ್ಲಿಸಿದರೂ ಸಹ ಬೇಜವಾಬ್ದಾರಿ ತೋರಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಸೈಯದ್ ಮತೀನ್, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಸಾದುಲ್ಲಾ, ತಾಲ್ಲೂಕು ಅಧ್ಯಕ್ಷ ಸುಲ್ತಾನ್ ಅಲಿ ಖಾನ್, ಮುಖಂಡರಾದ ಆರೀಫ್ ಪಾಷ, ನದೀಮ್ ಖಾನ್, ಮೆಹಬೂಬ್ ಪಾಷಾ, ಮೊಹಮ್ಮದ್ ಮತೀನ್, ರಿಜ್ವಾನ್ ಪಾಷ ಮತ್ತಿತರರು ಭಾಗವಹಿಸಿದ್ದರು.