ಕಡಬ ತಾಲೂಕಿನ ಕೊಂಬಾರು ಗ್ರಾಮದ ಮಣಿಭಾಂಡ-ಕಟ್ಟೆ ರಸ್ತೆಯ ಕಟ್ಟೆ ಎಂಬಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯ ಮಧ್ಯಭಾಗದಲ್ಲೇ ಭಾರಿ ಕುಸಿತ ಸಂಭವಿಸಿದೆ.
ಉಪ್ಪಿನಂಗಡಿ: ಕಡಬ ತಾಲೂಕಿನ ಕೊಂಬಾರು ಗ್ರಾಮದ ಮಣಿಭಾಂಡ-ಕಟ್ಟೆ ರಸ್ತೆಯ ಕಟ್ಟೆ ಎಂಬಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಯ ಮಧ್ಯಭಾಗದಲ್ಲೇ ಭಾರಿ ಕುಸಿತ ಸಂಭವಿಸಿದೆ. ಬಾವಿಯಂತಹ ಆಳವಾದ ಹೊಂಡ ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಹಾಗೂ ಗ್ರಾಮಸ್ಥರು ಆತಂಕಗೊಳ್ಳುವಂತಾಗಿದೆ.
ಮಳೆಯ ರಭಸಕ್ಕೆ ರಸ್ತೆ ಮಧ್ಯ ಭಾಗದ ಮಣ್ಣು ಕೊಚ್ಚಿಹೋಗಿ ಬಾವಿಯಂತಹ ಆಳವಾದ ಗುಂಡಿ ನಿರ್ಮಾಣವಾಗಿದೆ. ಇದು ಪ್ರತಿ ನಿತ್ಯ ಇದೇ ರಸ್ತೆ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ. ರಸ್ತೆ ಕುಸಿದಿರುವ ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆ ಹಾಗೂ ಕೊಂಬಾರು ಗ್ರಾಪಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಭಾವ್ಯ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಮಣಿಭಾಂಡ-ಕಟ್ಟೆ ರಸ್ತೆಯು ಈಗಾಗಲೇ ಸೂಕ್ತ ನಿರ್ವಹಣೆ ಇಲ್ಲದೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಇದೀಗ ಸುರಿದ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹಾನಿಗೊಳಗಾಗಿದ್ದು, ವಾಹನ ಸಂಚಾರ ಸಂಪೂರ್ಣ ಕಷ್ಟಕರವಾಗಿದೆ. ಆದಾಗ್ಯೂ ಪ್ರತಿನಿತ್ಯ ಇದೇ ರಸ್ತೆಯನ್ನು ನೆಚ್ಚಿಕೊಂಡಿರುವ ಸುಮಾರು ೭೦ಕ್ಕೂ ಹೆಚ್ಚು ಕುಟುಂಬಗಳು, ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ರೈತರು ಜೀವ ಕೈಯಲ್ಲಿಡಿದು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.