ಕನ್ನಡಪ್ರಭ ವಾರ್ತೆ ಉಡುಪಿ ಕೊಂಕಣಿ ಸಂಪ್ರದಾಯ, ಜಾನಪದೀಯ ಸಂಸ್ಕೃತಿ ವಿಶಿಷ್ಠ ಮತ್ತು ವೈವಿಧ್ಯಮಯಾಗಿದ್ದು ಅದನ್ನು ಉಳಿಸಿ ಪೋಷಿಸುವ ಅಗತ್ಯತೆ ಇದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ವಂ. ಡೆನಿಸ್ ಡೆಸಾ ಹೇಳಿದರು. ಅವರು ಗುರುವಾರ ತೊಟ್ಟಂ ಚರ್ಚಿನ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ಕಥೊಲಿಕ್ ವಿದ್ಯಾರ್ಥಿ ಸಂಚಾಲನ ಹಾಗೂ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ವೈಸಿಎಸ್ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕೊಂಕಣಿ ಜಾನಪದ ಹಾಡು ಹಾಗೂ ವಾದ್ಯಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಕೊಂಕಣ್ ಮೈನಾ ಬಿರುದಾಂಕಿತರಾದ ಹೆಸರಾಂತ ಗಾಯಕ ದಿ. ವಿಲ್ಫೀ ರೆಬಿಂಬಸ್ ಅವರ ಪತ್ನಿ ಮೀನಾ ರೆಬಿಂಬಸ್ ಕಳಸಿಗೆಗೆ ಅಕ್ಕಿಯನ್ನು ತುಂಬಿಸುವುದರ ಮೂಲಕ ಉದ್ಘಾಟಿಸಿದರು.
ತೊಟ್ಟಂ ಘಟಕದ ವೈಸಿಎಸ್ ಸದಸ್ಯರು ಕೊಂಕಣಿ ಜಾನಪದ ವಾದ್ಯ ಗುಮಟೆಯ ಮೂಲಕ ಸಂಗೀತ ಪ್ರದರ್ಶನ ಮಾಡಿದರು. ಕ್ಯಾಥರಿನ್ ರೊಡ್ರಿಗಸ್, ಡೆಲ್ಟನ್ ಲೋಬೊ, ಜಾಸ್ಮೀನ್ ಜೆನಿಫರ್ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಸುಮಾರು 500ಕ್ಕೂ ಅಧಿಕ ಯುವಜನರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ನಿರ್ದೇಶಕರಾದ ವಂ. ಸ್ಟೀಫನ್ ಫರ್ನಾಂಡಿಸ್, ವೈಸಿಎಸ್ ಕೇಂದ್ರಿಯ ಸಚೇತಕಿ ಕವಿತಾ ಡಿಸಿಲ್ವಾ, ತೊಟ್ಟಂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ತೊಟ್ಟಂ ವೈಸಿಎಸ್ ಅಧ್ಯಕ್ಷ ರಾದ ಜೋಶ್ವಾ ಫರ್ನಾಂಡಿಸ್, ಸಚೇತಕಿ ಸುನೀತಾ ಮಾರ್ಟಿಸ್, ಪ್ರೀಶಲ್ ಡಿಮೆಲ್ಲೊ ಉಪಸ್ಥಿತರಿದ್ದರು. ತೊಟ್ಟಂ ಘಟಕದ ಸಚೇತಕಿ ಲವೀನಾ ಆರೋಜಾ ಸ್ವಾಗತಿಸಿದರು. ಲೆಸ್ಲಿ ಆರೋಝಾ ಕಾರ್ಯಕ್ರಮವನ್ನು ಸಂಘಟಿಸಿದರು.