ಕ.ರಾ. ಬೆಲ್ಲದ ಮಹಾವಿದ್ಯಾಲಯ ಗ್ರಾಮೀಣ ಕ್ಯಾಂಬ್ರಿಜ್‌ ವಿವಿ ಇದ್ದಂತೆ

KannadaprabhaNewsNetwork | Updated : Jun 20 2025, 12:04 PM IST

ಉತ್ತರ ಕರ್ನಾಟಕದ ಗಡಿಭಾಗದಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಈ ಮುಂಡರಗಿ ಕ.ರಾ. ಬೆಲ್ಲದ ಮಹಾವಿದ್ಯಾಲಯ ಗ್ರಾಮೀಣ ಪ್ರದೇಶದ ಕ್ಯಾಂಬ್ರಿಜ್‌ ವಿಶ್ವವಿದ್ಯಾಲಯವಿದ್ದಂತೆ ಎಂದು ಗದಗ ಕೆಎಸ್‌ಎಸ್‌ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಡಿ.ಬಿ. ಗವಾನಿ ಹೇಳಿದರು.

ಮುಂಡರಗಿ: ಒಂದು ಕಡೆಗೆ ಹೈದ್ರಾಬಾದ್ ಕರ್ನಾಟಕ, ಮತ್ತೊಂದು ಕಡೆ ಬಾಂಬೆ ಕರ್ನಾಟಕ, ಮದ್ರಾಸ್‌ ಕರ್ನಾಟಕ ಈ ಮೂರು ಸಂಗಮಗಳ ಮಧ್ಯದಲ್ಲಿ ಉತ್ತರ ಕರ್ನಾಟಕದ ಗಡಿಭಾಗದಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಈ ಮುಂಡರಗಿ ಕ.ರಾ. ಬೆಲ್ಲದ ಮಹಾವಿದ್ಯಾಲಯ ಗ್ರಾಮೀಣ ಪ್ರದೇಶದ ಕ್ಯಾಂಬ್ರಿಜ್‌ ವಿಶ್ವವಿದ್ಯಾಲಯವಿದ್ದಂತೆ ಎಂದು ಗದಗ ಕೆಎಸ್‌ಎಸ್‌ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ. ಡಿ.ಬಿ. ಗವಾನಿ ಹೇಳಿದರು.

ಅವರು ಗುರುವಾರ ಪಟ್ಟಣದ ಜ.ಅ. ವಿದ್ಯಾ ಸಮಿತಿಯ ಕ.ರಾ. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ 2024-25ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಬಿ.ಎ. ಹಾಗೂ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದು ಇಂಗ್ಲೆಂಡಿನ ರೂರಲ್ ಕ್ಯಾಂಬ್ರಿಡ್ಜ ವಿಶ್ವವಿದ್ಯಾಲಯ ಎಂದು ತಿಳಿದುಕೊಂಡು ವ್ಯಾಸಂಗ ಮಾಡಬೇಕು. ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿಯವರು ವಿದ್ಯಾರ್ಥಿಗಳಲ್ಲಿ ದೇವರನ್ನು ಕಂಡವರು. ಅವರು ಶಿಕ್ಷಣದ ಸಲುವಾಗಿ ಅನೇಕ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿ ಮಕ್ಕಳ ಬದುಕಿಗೆ ಬೆಳಕಾದವರು. ಇಂತಹ ಶ್ರೀಗಳ ಸನ್ನಿಧಿಯಲ್ಲಿ ಅಭ್ಯಾಸ ಮಾಡುತ್ತಿರುವ ನೀವುಗಳೇ ಧನ್ಯರು. ಪ್ರಾಧ್ಯಾಪಕರಾದವರು ಸದಾ ವಿದ್ಯಾರ್ಥಿಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಮೂಲಕ ತ್ಯಾಗಮಯಿ ಜೀವನ ನಡೆಸಬೇಕು ಎಂದರು.

ಸಾನಿಧ್ಯವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಗಳನ್ನು ಓದಿದರೆ ಸಾಲದು, ಅವುಗಳ ಜೊತೆಗೆ ಅನೇಕ ಸಾಹಿತಿಗಳ ಮೌಲಿಕ ಗ್ರಂಥಗಳನ್ನು ಓದಬೇಕು. ಇದರಿಂದ ವಿದ್ಯಾರ್ಥಿ ಜೀವನ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲವನ್ನು ಗಮನಿಸಬೇಕು. ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಗುಣವನ್ನು ಹೊಂದಬೇಕು. ಕನ್ನಡ ಭಾಷೆಯಲ್ಲಿ ಇರುವಂತಹ ಸೊಗಸು ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ ಎಂದರು.

 ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ, ಕಲಿಸಿದ ಗುರುಗಳ ಮತ್ತು ಸಂಸ್ಥೆಯನ್ನು ಎಂದಿಗೂ ಮರೆಯಬಾರದು. ಶಿಕ್ಷಕರು ವಿದ್ಯಾರ್ಥಿಗಳಿಗೆ ಬದುಕಿನ ಹಾದಿಯನ್ನು ತೋರಿಸುವ ಗುರು ಆಗಬೇಕು ಎಂದರು. ಎಂ.ಜಿ. ಗಚ್ಚಣ್ಣವರ, ಡಾ.ಬಿ.ಜಿ. ಜವಳಿ ಮತ್ತು ಡಾ.ಡಿ.ಸಿ. ಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ತಿಮ್ಮಪ್ಪ ದಂಡಿನ, ಮಮತಾ ಹಣಗಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಡಾ.ಆರ್.ಎಚ್. ಜಂಗಣವಾರಿ ಸ್ವಾಗತಿಸಿದರು. ಪ್ರಾಚಾರ್ಯ ಡಾ. ಸಂತೋಷ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಹನುಮಂತಪ್ಪ ಎನ್ ವಾರ್ಷಿಕ ವರದಿ ವಾಚಿಸಿದರು. ಪ್ರಾಧ್ಯಾಪಕಿ ಲತಾ ಕಡ್ಡಿ ನಿರೂಪಿಸಿದರು.

Read more Articles on