ಉಡುಪಿ ಕಡೆಗೋಲು ಕೃಷ್ಣನ ಜನ್ಮದಿನ ಸಂಭ್ರಮ

KannadaprabhaNewsNetwork |  
Published : Aug 27, 2024, 01:44 AM IST
ಪುತ್ತಿಗೆ ಶ್ರೀಗಳು ಮಧ್ವಮಂಟದಲ್ಲಿ ತೊಟ್ಟಿಲಿನಲ್ಲಿ ಬಾಲಕೃಷ್ಣನಿಗೆ ಪೂಜೆ ನೆರವೇರಿಸಿ, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರೊಂದಿಗೆ ಕೃಷ್ಣನ ತೊಟ್ಟಿಲು ತೂಗಿ ಡೋಲೊತ್ಸವಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು ದಿನವಿಡೀ ಬಾಲಕೃಷ್ಣನಿಗೆ ವಿವಿಧ ಅಲಂಕಾರ, ಮಹಾಪೂಜೆ, ನೈವೇದ್ಯಗಳನ್ನು ನಡೆಸಿ, ಮಧ್ಯರಾತ್ರಿ ಅರ್ಘ್ಯಪ್ರದಾನ ಮಾಡುವುದರೊಂದಿಗೆ ಕೃಷ್ಣನ ಹುಟ್ಟುಹಬ್ಬದ ಆಚರಣೆ ಸಂಪ್ರದಾಯದಂತೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕಡೆಗೋಲು ಕೃಷ್ಣನ ನೆಲೆವೀಡು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸೋಮವಾರ ಭಕ್ತಿ - ಸಂಭ್ರಮದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಮಂಗಳವಾರ ಕೃಷ್ಣನ ರಥದ ಬೀದಿಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವ ಮೊಸರುಕುಡಿಕೆ ಉತ್ಸವ ನಡೆಯಲಿದೆ.

ಕೃಷ್ಣನ ಜನ್ಮಾಷ್ಟಮಿ ಪ್ರಯಕ್ತ ಕೃಷ್ಣ ಭಕ್ತರು ತಂತಮ್ಮ ಮನೆಗಳಲ್ಲಿ ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳನ್ನು ನಡೆಸಿದರು. ಕೃಷ್ಣಮಠದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರು ದಿನವಿಡೀ ಬಾಲಕೃಷ್ಣನಿಗೆ ವಿವಿಧ ಅಲಂಕಾರ, ಮಹಾಪೂಜೆ, ನೈವೇದ್ಯಗಳನ್ನು ನಡೆಸಿ, ಮಧ್ಯರಾತ್ರಿ ಅರ್ಘ್ಯಪ್ರದಾನ ಮಾಡುವುದರೊಂದಿಗೆ ಕೃಷ್ಣನ ಹುಟ್ಟುಹಬ್ಬದ ಆಚರಣೆ ಸಂಪ್ರದಾಯದಂತೆ ನೆರವೇರಿತು.

ಮುಂಜಾನೆಯಿಂದಲೇ ಸಾವಿರಾರು ಮಂದಿ ಭಕ್ತರು ಕೃಷ್ಣಮಠಕ್ಕೆ ಭೇಟಿ ನೀಡಿ, ಅಂಬೆಗಾಲಿಕ್ಕುವ ಮಗುವಿನ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಕೃಷ್ಣನ ದರ್ಶನ ಪಡೆದು ಪುನೀತರಾದರು.

ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಬಾಲಕೃಷ್ಣನ ತೊಟ್ಟಿಲು ತೂಗುವ ಡೋಲೋತ್ಸವ ಆಯೋಜಿಸಿದ್ದರು. ಮಧ್ವಮಂಟದಲ್ಲಿ ತೊಟ್ಟಿಲಿನಲ್ಲಿ ಬಾಲಕೃಷ್ಣನಿಗೆ ಪೂಜೆ ನೆರವೇರಿಸಿ, ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥರೊಂದಿಗೆ ಕೃಷ್ಣನ ತೊಟ್ಟಿಲು ತೂಗಿ ಡೋಲೊತ್ಸವಕ್ಕೆ ಚಾಲನೆ ನೀಡಿದರು. ಸಾರ್ವಜನಿಕರಿಗೂ ಕೃಷ್ಣನ ತೊಟ್ಟಿಲು ತೂಗುವ ಸೇವೆಯ ಅಪೂರ್ವ ಅವಕಾಶವನ್ನು ಒದಗಿಸಲಾಗಿತ್ತು.

* ಎಲ್ಲೆಲ್ಲೂ ಮುದ್ದುಕೃಷ್ಣರು:

ಸೋಮವಾರ ಉಡುಪಿಯ ಬೀದಿಬೀದಿಗಳನ್ನು ಕೃಷ್ಣನ ದರ್ಶನವಾಗುತಿತ್ತು. ತಾಯಂದಿರುವ ತಮ್ಮ ಮಕ್ಕಳಿಗೆ ಮುದ್ದುಕೃಷ್ಣನ ನಾನಾಬಗೆಯ ವೇಷಗಳನ್ನು ಹಾಕಿ ಕೃಷ್ಣಮಠಕ್ಕೆ ಕರೆ ತಂದಿದ್ದರು.

ನಂತರ ರಾಜಾಂಗಣದಲ್ಲಿ ಪುಟಾಣಿಮಕ್ಕಳಿಗಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಲಾಗಿತ್ತು. ಅಲ್ಲಿಗೆ ಆಗಮಿಸಿದ ಪುತ್ತಿಗೆ ಶ್ರೀದ್ವಯರು ಕೃಷ್ಣವೇಷಧಾರಿ ಮಕ್ಕಳನ್ನು ಎತ್ತಿ ತೊಡೆಯ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದರು.

* ನಗರವಿಡೀ ತಾಸೆಯ ಸದ್ದು:

ಸೋಮವಾರ ಉಡುಪಿ ನಗರವಿಡೀ ತಾಸೆಯ ಸದ್ದು ಕೇಳುತ್ತಿತ್ತು. ತಾಸೆಯ ಸದ್ದಿನೊಂದಿಗೆ ಬೀದಿಬೀದಿಗಳಲ್ಲಿ ಹತ್ತಾರು ಹುಲಿವೇಷ ತಂಡಗಳು ಕುಣಿಯುತ್ತಿದ್ದವು. ಪ್ರಸಿದ್ಧ ಮಾರ್ಪಳ್ಳಿ, ನಿಟ್ಟೂರು, ಕಾಡಬೆಟ್ಟು, ಕೊರಂಗ್ರಪಾಡಿ, ಮಲ್ಪೆ ಇತ್ಯಾದಿ ಹುಲಿವೇಷ ತಂಡಗಳು ಪೈಪೋಟಿಯಲ್ಲಿ ಬೀದಿಗಿಳಿದು ಅಬ್ಬರಿಸುತ್ತಿದ್ದವು. ಮಂಗಳವಾರ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ಮತ್ತು ಶಿರೂರು ಮಠದ ವತಿಯಿಂದ ರಥಬೀದಿಯಲ್ಲಿ ಹುಲಿವೇಷ ಕುಣಿತದ ರಸದೌತಣವಾಗಲಿದೆ.

ಈ ಬಾರಿಯೂ ದರ್ಪಣ ನೃತ್ಯ ಸಂಸ್ಥೆಯ ಬಾಲಕಿಯರು ಮತ್ತು ಯುವತಿಯರು ಹುಲಿವೇಷವನ್ನು ಧರಿಸಿದ್ದು, ಈ ಹೆಣ್ಣು ಹುಲಿಗಳು ಮೊಸರುಕುಡಿಕೆಯ ವಿಶೇಷ ಆಕರ್ಷಣೆಯಾಗಲಿವೆ...........................

ಲಡ್ಡು ತಯಾರಿಸಿದ ಶ್ರೀಗಳು

ಕೃಷ್ಣ ಜನ್ಮಾಷ್ಟಮಿಯಂದು ಬಾಲಕೃಷ್ಣನಿಗೆ ಎಳ್ಳು, ಕಡಲೆ, ಹೆಸರು ಇತ್ಯಾದಿಗಳಿಂದ ತಯಾರಿಸಿದ ಲಡ್ಡುಗಳನ್ನು ಸಮರ್ಪಿಸಲಾಗುತ್ತದೆ. ಈ ಲಡ್ಡುಗಳನ್ನು ಸ್ವತಃ ಪರ್ಯಾಯ ಶ್ರೀಗಳೇ ಕೈಯಾರೆ ತಯಾರಿಸಿ, ಲಡ್ಡು ತಯಾರಿಸುವ ಸಂಪ್ರದಾಯಕ್ಕೆ ಚಾಲನೆ ನೀಡಿದರು.

108 ಬಗೆಯ ಲಡ್ಡುಗಳನ್ನು ತಯಾರಿಸುವ ಲಡ್ಡೋತ್ಸವವೂ ಕೃಷ್ಣಮಠದಲ್ಲಿ ನಡೆದಿದ್ದು, ಕೃಷ್ಣನ ಸಮರ್ಪಣೆಗೆ 1 ಲಕ್ಷ ವಿವಿಧ ಬಗೆಯ ಲಡ್ಡು ಮತ್ತು 1 ಲಕ್ಷ ಚಕ್ಕುಲಿಗಳನ್ನು ತಯಾರಿಸಲಾಗಿದೆ. ಅವುಗಳನ್ನು ಕೃಷ್ಣನಿಗೆ ನೈವೇದ್ಯದ ನಂತರ ಮಂಗಳವಾರ ಭಕ್ತರಿಗೆ ವಿತರಿಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ