ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಹಿಂದುಳಿದ ವರ್ಗದ ಜನರ ಏಳಿಗೆಗಾಗಿ ಮೀಸಲಾತಿಯನ್ನು ಜಾರಿಗೆ ತಂದು ಸಮ ಸಮಾಜ ಹಾಗೂ ಸಾಮಾಜಿಕ ನ್ಯಾಯದ ನಿರ್ಮಾತೃ ಎನಿಸಿದವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣಿಸಿದರು.ಬುಧವಾರ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಇಂದು ನಮ್ಮೊಡನೆ ಇಲ್ಲ. ಆದರೂ ಅವರು ನಮ್ಮ ಮುಂದಿನ ಪೀಳಿಗೆ ಸ್ಮರಿಸುವಂತಹ ಕೊಡುಗೆ ನೀಡಿದ್ದಾರೆ. ನಮ್ಮ ಭಾಗದ ಜನರು ನಿತ್ಯ ಅವರನ್ನು ನೆನೆಯುವಂತಹ ಸೇವೆ ಸಲ್ಲಿಸಿದ್ದಾರೆ. ಬ್ರಿಟಿಷರ ಕಾಲದಲ್ಲೂ ಸಹ ಸುಮಾರು 600 ಸಂಸ್ಥಾನಗಳಲ್ಲಿ ಆಳ್ವಿಕೆ ನಡೆಸಿದ ಧೀಮಂತ ನಾಯಕ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೇಳಿದರು.ಮೈಸೂರು, ಮಂಡ್ಯ, ಹಾಸನ ಪ್ರಾಂತ್ಯಗಳ ಜನರು ನಾಲ್ವಡಿ ಅವರ ಭಾವಚಿತ್ರವನ್ನು ಮನೆಗಳಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಭಾಗದ ಜನರು ನಾಡಗೀತೆಗೆ ಸಿಗುವಷ್ಟೆ ಗೌರವವನ್ನು ‘ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್’ ಹಾಡಿಗೆ ನೀಡುತ್ತಾರೆ ಎಂದು ತಿಳಿಸಿದರು.
ಮಹಿಳಾ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಶಿವರಾಮು ಮಾತನಾಡಿ, ನಾವೆಲ್ಲರೂ ಸಮೃದ್ಧವಾಗಿ ಜೀವನ ಸಾಗಿಸಲು ಮುಖ್ಯ ಕಾರಣ ನಾಲ್ವಡಿ ಕೃಷ್ಣರಾಜರು ನಿರ್ಮಿಸಿದ ಕೃಷ್ಣರಾಜಸಾಗರ ಅಣೆಕಟ್ಟು. ಕೆಆರ್ಎಸ್ ಅಣೆಕಟ್ಟೆಗೆ ಮೊಟ್ಟ ಮೊದಲ ನೀಲಿ ನಕ್ಷೆ ಸಿದ್ಧಪಡಿಸಿದ್ದು ಕ್ಯಾಪ್ಟನ್ ಬರ್ನೋಲ್ಡ್ ದಾವೂಸ್ ಎಂಬುವವರು ಅಣೆಕಟ್ಟಿನ ಕಾರ್ಯ ನಿರ್ವಹಿಸುತ್ತಿರುವಾಗ ಅವರು ಅಸುನೀಗುತ್ತಾರೆ. ನಂತರ ಸರ್ ಎಂ.ವಿಶ್ವೇಶ್ವರಯ್ಯ ಅಣೆಕಟ್ಟಿನ ಕಾರ್ಯ ಕೈಗೆತ್ತಿಕೊಳ್ಳುತ್ತಾರೆ. ಕಾಮಗಾರಿ ವೆಚ್ಚವೇ ಸುಮಾರು 2 ಕೋಟಿ 75 ಲಕ್ಷ ರು. ಎಂದು ಅಂದಾಜಿಸಲಾಗುತ್ತದೆ. ಮೈಸೂರು ಸಂಸ್ಥಾನದ ಒಟ್ಟು ಆದಾಯವೇ 2 ಕೋಟಿ 75 ಲಕ್ಷ ಇರುವುದಿಲ್ಲ ಎಂದು ಚಿಂತಿಸುತ್ತಿರುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪತ್ನಿ ತಮ್ಮ ಒಡವೆ, ವಜ್ರ, ವೈಡೂರ್ಯಗಳನ್ನು ನೀಡಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಸೂಚಿಸುತ್ತಾರೆ. ಅಣೆಕಟ್ಟು ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರನ್ನೂ ನಾವು ನೆನೆಯಬೇಕಿದೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ವಿ ನಂದೀಶ್, ಜೈ ಕರ್ನಾಟಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ನಾರಾಯಣ, ಡಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ, ಕೃಷ್ಣ, ಲಲಿತಾ, ಅಮ್ಜದ್ ಪಾಷಾ, ಧನಂಜಯ, ಬಿ.ಎಂ.ಅಪ್ಪಾಜಪ್ಪ , ಎಂ.ಸಿ.ಲಂಕೇಶ್ ಇತರರಿದ್ದರು.