ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್ಎಸ್ ಅಣೆಕಟ್ಟೆಯಲ್ಲಿನ ಡೆಡ್ ಸ್ಟೋರೇಜ್ ನೀರನ್ನು ಬಿಡದೆ ಮೈಸೂರು ನಗರಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿ ಹೊಸ ಹುಂಡುವಾಡಿ ಗ್ರಾಮದ ಬಳಿ ನಡೆಯುತ್ತಿದೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಆರೋಪಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಂಬಾಡಿ ಅಣೆಕಟ್ಟೆಯನ್ನು ಮೈಸೂರು ಮಹಾರಾಜರು ನಿರ್ಮಿಸುವ ವೇಳೆ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಎರಡು ತೂಬುಗಳಿದ್ದರೂ ಸಹ ಮಂಡ್ಯ ಜಿಲ್ಲಾ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೀರು ಹರಿಸಿದ್ದರು ಎಂದರು.
ಆದರೆ, ಈಗ ಮಂಡ್ಯದ ಜನಪ್ರತಿನಿಧಿಗಳು ಜಿಲ್ಲಾ ರೈತರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಣೆಕಟ್ಟೆ ಸಮೀಪದ ಸುಮಾರು 3-4 ಕಿ.ಮೀ ವ್ಯಾಪ್ತಿ ಹೊಸಹುಂಡುವಾಡಿ ಬಳಿ 133 ಅಡಿ ಆಳ ತೆಗೆದು ಮೋಟಾರ್ ಮೂಲಕ ಮೈಸೂರಿಗೆ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ. ಕನ್ನಂಬಾಡಿ ಕಟ್ಟೆ ಎತ್ತರ 124 ಅಡಿ ಅದಕ್ಕಿಂತಲೂ ಹಾಳ ತೆಗೆದು ಡೆಸ್ಟ್ ಟೋರೆಜ್ ನೀರನ್ನು ಸಹ ಬಳಸಲು ಹುನ್ನಾರ ನಡೆಯುತ್ತಿದೆ ಎಂದು ಕಿಡಿಕಾರಿದರು.6 ಅಡಿ ಎತ್ತರದ ಪೈಪ್ ಮೂಲಕ ನೀರು ಸರಬರಾಜು ಮಾಡಿಕೊಳ್ಳಲು ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆದು ಇದೀಗ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಉಸ್ತುವಾರಿ ಸಚಿವರು ಇದರ ಬಗ್ಗೆ ಚಕಾರ ಎತ್ತದೆ ಇರುವುದು ಜಿಲ್ಲೆಯ ಜನರಿಗೆ ವಿಷ ಉಣಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದೊಡ್ಡ ಗಾತ್ರದ ಪೈಪ್ ಮೂಲಕ ನೀರು ಸರಬರಾಜು ಅಂದರೆ ದಿನ ನಿತ್ಯ ಸುಮಾರು 4 ಟಿಎಂ.ಸಿ ನೀರು ಕಡಿಮೆಯಾಗುವ ಸಂಭವವಿದೆ. ಈ ವಿಷಯವಾಗಿ ಜಿಲ್ಲೆಯ ಜನಪ್ರತಿನಿಧಿಗಳು ದ್ವನಿ ಎತ್ತಿ ರೈತರ ಪರ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿ ಕೆಆರ್ಎಸ್ ನಿಂದ ಬೆಂಗಳೂರಿಗೂ ನೀರು ತೆಗೆದುಕೊಳ್ಳಲು ಡಿಸಿಎಂ ಚಿಂತನೆ ಮಾಡಿದ್ದಾರೆ. ಇದು ಮುಂದುವರೆದರೆ ಕೆಆರ್ಎಸ್ ಭಾಗದ ಜನರಿಗೆ ನೀರಿನ ಸಮಸ್ಯೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್ಚರಿಸಿದರು.ನಾಲೆಗಳ ಆಧುನೀಕರಣಕ್ಕಾಗಿ ಕೋಟಿ, ಕೋಟಿ ಹಣ ಬಿಡುಗಡೆ ಮಾಡಿ ನಾಲೆಗಳ ಕಾಮಗಾರಿ ನಡೆಸಲಾಗುತ್ತಿದೆ. ಆದರೂ ಕೊನೆ ಭಾಗಗಳಿಗೆ ನೀರು ತಲುಪುತ್ತಿಲ್ಲ. ಜೊತೆಗೆ ಕಾವೇರಿ ಆರತಿ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣ ಕುರಿತು ಜಿಲ್ಲೆಯ ರೈತರ ಜೊತೆ ಮಾತುಕತೆ ಮಾತನಾಡದೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕಾವೇರಿ ಆರತಿಗೆ 92 ಕೋಟಿ, ಅಮ್ಯೂಸ್ಮೆಂಟ್ ಪಾರ್ಕಿಗೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಿಕೊಂಡ ಹಣವನ್ನು ಇಲ್ಲಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಮಗಾರಿ ಹೆಸರಿನಲ್ಲಿ ಕಮಿಷನ್ ಪಡೆದು ಹಣ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.ಐಪಿಎಲ್ ಆಟಗಾರರನ್ನು ಅಭಿನಂದಿಸಲು ಮುಂದಾದ ಸರ್ಕಾರ ಮುಂಜಾಗ್ರತೆ ವಹಿಸದೆ ಲಕ್ಷಾಂತರ ಅಭಿಮಾನಿಗಳು ಒಂದೆಡೆ ಸೇರಿ ಕಾಲ್ತುತುಳಿತದಿಂದ 11 ಮಂದಿ ಮೃತರಾಗಲು ಕಾರಣವಾಗಿದೆ. ಘಟನೆಗೆ ನೇರ ಹೊಣೆ ಸರ್ಕಾರ ಆಗಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ಹುಂಡವಾಡಿ ಮಹದೇವು, ರಾಮಕೃಷ್ಣ, ಸುರೇಶ್ ಸೇರಿದಂತೆ ಇತರರು ಇದ್ದರು.