ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಯೋಜಿಸಿದ್ದ ಗ್ಯಾರಂಟಿ ಯೋಜನೆಯ ಮಾಸಿಕ ಸಭೆಯಲ್ಲಿ ಅಧ್ಯಕ್ಷರು ತಮಗಾದ ಅವಮಾನ ತೆರೆದಿಟ್ಟರು.
ಶಕ್ತಿ ಯೋಜನೆಯನ್ನು ಜನ ಟೀಕಿಸಲು ಕೆಲ ನಿರ್ವಾಹಕರೇ ಕಾರಣ ಎಂದು ದೂರಿದರು. ನನಗೂ ನಿರ್ವಾಹಕ ಅವಮಾನ ಮಾಡಿದ್ದ, ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸುವ ಮೊದಲೆ ಪೂರ್ಣ ಪ್ರಮಾಣದ ಟಿಕೇಟ್ ಹರಿದಾಗ, ನಾನು ಗುರುತಿನ ಚೀಟಿ ತೋರಿಸಿದ ಸಂದರ್ಭ, ಬಸ್ ಹತ್ತುವಾಗಲೇ ಗುರುತಿನ ಚೀಟಿ ಹಿಡಿದುಕೊಂಡು ಬರಬೇಕು ಎಂದು ಅಸಭ್ಯವಾಗಿ ವರ್ತಿಸಿ ಮುಂದೆ ಹೋದ. ನಾನು ಪೂರ್ಣ ಪ್ರಮಾಣದ ಟಿಕೇಟ್ ಹಣವನ್ನು ನೀಡಿ ಪ್ರಯಾಣ ಮಾಡಿದೆ. ಕೊನೆಗೆ ಅವನಿಗೆ ತಪ್ಪು ಮನವರಿಕೆ ಆಗಿ, ಅರ್ಧ ಹಣವನ್ನು ವಾಪಾಸ್ಸು ನೀಡಿದ ಎಂದರು.ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ ಹಣವನ್ನು ಸರ್ಕಾರ ಕೆಎಸ್ಆರ್ಟಿಸಿಗೆ ಭರಿಸುತ್ತದೆ. ಅವರು ಭಿಕ್ಷೆ ಕೊಡುವುದಲ್ಲ ಎಂದು ಹೇಳಿದರು.
ಮಹಿಳೆಯರು ಬಸ್ಗೆ ಕೈ ಅಡ್ಡಹಾಕಿದರೆ ಅನೇಕ ಬಸ್ ಚಾಲಕರು ಬಸ್ ನಿಲ್ಲಿಸದೇ ಹೋಗುತ್ತಾರೆ ಎಂದು ಸದಸ್ಯ ವಿರೇಂದ್ರ ಕುಮಾರ್ ದೂರಿದರು. ಅಂತಹ ಬಸ್ ನಂಬರ್, ಮಾರ್ಗ, ಸಮಯವನ್ನು ಬರೆದು ದೂರು ನೀಡಿದರೆ, ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತಾರೆ ಎಂದು ಸಂಚಾರಿ ನಿಯಂತ್ರಕ ಶ್ರೀನಿವಾಸ್ ಭರವಸೆ ನೀಡಿದರು.
೨೦೨೪ರ ನವೆಂಬರ್ ಅಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಯಲ್ಲಿ ತಾಲೂಕಿನಲ್ಲಿ ೨೫೨೩೨ ಫಲಾನುಭವಿಗಳ ನೊಂದಣಿಯಾಗಿದ್ದು, ೨೪,೮೦೨ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿದೆ. ಶೇ.೯೭.೦೬ ಸಾಧನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಾವಿತ್ರಮ್ಮ ತಿಳಿಸಿದರು. ಇನ್ನೆರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಸಿ, ಶೇ.೧೦೦ರಷ್ಟು ಪ್ರಗತಿ ಸಾಧಿಸುವ ಗುರಿಯಿದೆ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದರು.
ಅನ್ನಭಾಗ್ಯ ಯೋಜನೆಯಡಿ, ತಾಲೂಕಿನಲ್ಲಿ ೨೪,೪೧೦ ಫಲಾನುಭವಿಗಳಿದ್ದು, ೨೨,೮೮೯ ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಆರು ತಿಂಗಳಿನಿಂದ ಪಡಿತರ ತೆಗೆದುಕೊಳ್ಳದ ೬೦೬ ಕಾರ್ಡುಗಳು ಸ್ಥಗಿತಗೊಂಡಿವೆ. ಆದಾಯ ತೆರಿಗೆ ಕಟ್ಟುವ ೨೦೭ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಯಾಗಿವೆ. ೧.೨೦ ಲಕ್ಷ ರು.ಗಳಷ್ಟು ಮೇಲ್ಪಟ್ಟ ಆದಾಯ ಪ್ರಮಾಣ ಪತ್ರ ಪಡೆದಿರುವ ೨೪೧೧ ಪಡಿತರ ಚೀಟಿಗಳು ಪರಿಶೀಲನೆಯಲ್ಲಿವೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು.