ಬರಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಕೂಡ್ಲಿಗಿ ಬಂದ್ ಸಂಪೂರ್ಣ ಯಶಸ್ವಿ

KannadaprabhaNewsNetwork |  
Published : Sep 01, 2026, 03:00 AM IST
ಬರದ ಪಟ್ಟಿಯಿಂದ ಕೂಡ್ಲಿಗಿ ತಾಲೂಕು ಕೈ ಬಿಟ್ಟಿದ್ದಕ್ಕೆ ವಿವಿಧ ಪ್ರಗತಿಪರ ಸಂಘಟನೆಗಳು ಕೂಡ್ಲಿಗಿ ಪಟ್ಟಣದಲ್ಲಿ  ಬಂದ್ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೂಡ್ಲಿಗಿ ಸೇರಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ಕೂಡ್ಲಿಗಿ ಬಂದ್‌ ಸಂಪೂರ್ಣ ಯಶಸ್ವಿ ಆಯಿತು. ಕೂಡ್ಲಿಗಿಯ ರೈತಪರ, ಕಮ್ಯುನಿಷ್ಟ್ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು

ಕೂಡ್ಲಿಗಿ: ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೂಡ್ಲಿಗಿ ಸೇರಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ಕೂಡ್ಲಿಗಿ ಬಂದ್‌ ಸಂಪೂರ್ಣ ಯಶಸ್ವಿ ಆಯಿತು. ಕೂಡ್ಲಿಗಿಯ ರೈತಪರ, ಕಮ್ಯುನಿಷ್ಟ್ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಪಟ್ಟಣದಲ್ಲಿ ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಂದ್‌ ಆಗಿದ್ದವು. ಶಾಲೆ-ಕಾಲೇಜುಗ‍ಳು ತೆರೆದಿದ್ದವಾದರೂ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಬಸ್ ಸಂಚಾರ ಎಂದಿನಂತಿತ್ತು.

ಪಟ್ಟಣದ ಮದಕರಿನಾಯಕ ವೖತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ರಾಜ್ಯ ಮುಖಂಡ ವೀರಸಂಗಯ್ಯ ಮಾತನಾಡಿ, ಶಾಸಕರು ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿದ್ದೆ. ಆದರೆ, ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೂಡ್ಲಿಗಿ ಹೆಸರು ಇಲ್ಲದ್ದನ್ನು ನೋಡಿ ಆಶ್ಚರ್ಯವಾಯಿತು. ಹಾಗಾದರೇ ಶಾಸಕರು ಏನು ಮಾಡುತ್ತಿದ್ದಾರೆ? ತಮ್ಮ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದರೇನೋ? ಎರಡನೇ ಪಟ್ಟಿಯಲ್ಲಿ ಕೂಡ್ಲಿಗಿ ಇರದಿದ್ದರೆ ಶಾಸಕರು, ಸಂಸದರ ಮನೆಯ ಮುಂದೆ ಕುಳಿತು ರೈತಪರ, ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೂಡ್ಲಿಗಿಯಲ್ಲಿ ಮಳೆ ಇಲ್ಲದೇ ಜನತೆ ಅತೀ ಹೆಚ್ಚು ಗುಳೇ ಹೋಗಿದ್ದಾರೆ. ಆದರೆ, ಕೂಡ್ಲಿಗಿ, ಕೊಟ್ಟೂರನ್ನು ಕೈ ಬಿಟ್ಟಿರುವುದನ್ನು ನೋಡಿದರೆ ಅಧಿಕಾರಿಗಳಿಗೆ ವೈಜ್ಞಾನಿಕ ತಿಳಿವಳಿಕೆ ಕೊರತೆ ಇದೆ. ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡು ಬರದ ಪಟ್ಟಿಗೆ ಸೇರಿಸಬೇಕು, ಕೇಂದ್ರ ಸರ್ಕಾರ ದೊಡ್ಡ ಮೊತ್ತದ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರೈತರ ಬದುಕು ಅತಂತ್ರವಾಗುತ್ತದೆ ಎಂದರು.

ಸಹಕಾರ ಸಂಘಗಳ ರೈತರ ಸಾಲ ಮನ್ನಾ ಮಾಡಬೇಕು, ಮೈಕ್ರೋ ಫೈನಾನ್ಸ್‌ನವರು ಬರದ ಸಂದರ್ಭದಲ್ಲಿ ಕಿರುಕುಳ ನೀಡದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರೈತರ, ಕೂಲಿಕಾರ್ಮಿಕರ ಆತ್ಮಹತ್ಯೆ ತಡೆಯುವ ಕಾರ್ಯವನ್ನು ಜಿಲ್ಲಾಡಳಿತ, ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಯುಕ್ತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಎಪಿಎಂಸಿ ಮತ್ತು ಬಜಾ‌ರ್ ಹಮಾಲರ ಸಂಘ, ದಲಿತ ಹಕ್ಕುಗಳ ಸಮಿತಿ, ಬೀದಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ, ಹೋಟೆಲ್‌ ಮಾಲೀಕರ ಸಂಘ, ವಿದ್ಯಾರ್ಥಿ ಯುವಜನ ಸಂಘಟನೆ, ಜನವಾದಿ ಮಹಿಳೆ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿದ್ದವು.

ಪಟ್ಟಣದ ಮಹಾತ್ಮಾ ಗಾಂಧೀಜಿ ಪವಿತ್ರ ಚಿತಾಭಸ್ಮ ಹಾಗೂ ಹುತಾತ್ಮರ ಸ್ಮಾರಕದಿಂದ ನೂರಾರು ಪ್ರತಿಭಟನಾಕಾರರು ಪ್ರಮುಖ ರಸ್ತೆಯ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಡಾ.ಬಿ.ಆರ್ ಅಂಬೇಡ್ಕರ್ ವೃತ್ತ, ಪಾದಗಟ್ಟೆ ವೃತ್ತದ ಮೂಲಕ ಮೆರವಣಿಗೆ ನಡೆಸಿ ಮದಕರಿ ವೃತ್ತದಲ್ಲಿ ಸಭೆ ನಡೆಸಿದರು.

ಎಲ್ಲೆಲ್ಲೂ ಖಾಕಿಪಡೆ

ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಸೇರಿದಂತೆ ಇಬ್ಬರು ಡಿವೈಎಸ್ಪಿಗಳು, 8 ಸಿಪಿಐಗಳು, 9 ಪಿಎಸ್ಐಗಳು, 20 ಎಎಸ್‌ಐಗಳು, 225 ಪೊಲೀಸ್ ಸಿಬ್ಬಂದಿ, 5 ಡಿಆರ್, ಒಂದು ಕೆಎಸ್‌ಆರ್‌ಪಿ ಸಿಬ್ಬಂದಿ ವಾಹನ, ಹೈವೇ ಪೆಟ್ರೋಲಿಂಗ್, 112 ವಾಹನಗಳು ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದವು. ಪಟ್ಟಣದಲ್ಲಿ ಪ್ರತಿಭಟನಾಕಾರರಿಗಿಂತಲೂ ಪೊಲೀಸ್ ಸಿಬ್ಬಂದಿ ಹೆಚ್ಚಾಗಿದ್ದು ಕಂಡುಬಂದಿತು. ಪ್ರತಿಭಟನೆಯಿಂದಾಗಿ ಬಸ್‌ಗಳು ಪಟ್ಟಣದ ಹೊರಗಡೆಯಿಂದಲೇ ಸಂಚರಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆವುಂಟಾಯಿತು.

ಪ್ರತಿಭಟನೆಯಲ್ಲಿ ಕಮ್ಯುನಿಷ್ಟ ಪಕ್ಷದ ಸಿ. ವಿರೂಪಾಕ್ಷಿ, ಎಚ್. ವೀರಣ್ಣ, ಗುನ್ನಳ್ಳಿ ರಾಘವೇಂದ್ರ, ಕಾಟೇರ್ ಹಾಲೇಶ್, ರೈತ ಸಂಘದ ಅಧ್ಯಕ್ಷ ದೇವರಮನಿ ಮಹೇಶ್, ಟಿ.ಜಿ. ನಾಗರಾಜಗೌಡ, ಬಿಜೆಪಿ ಹಿರಿಯ ಮುಖಂಡ ಸೂರ್ಯಪಾಪಣ್ಣ, ಬಿಟಿ ಗುದ್ದಿ ಚಂದ್ರು, ಭಾಗ್ಯಮ್ಮ, ಸೇರಿದಂತೆ ತಾಲೂಕಿನ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂಗಳ ಧಾರ್ಮಿಕ ಆಚರಣೆ ಮೇಲೆ ಅತಿಯಾದ ನಿಯಂತ್ರಣ ಬೇಡ: ಸಂಸದ ಕೋಟ
ಪಶ್ಚಿಮ ಘಟ್ಟದ ಜನರಿಗೆ ತೊಂದರೆಯಾಗದಂತೆ ಸರ್ಕಾರಕ್ಕೆ ಪತ್ರ: ಸ್ವರೂಪ