ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯದೊಳಗಿನ ವಸತಿ ಪ್ರದೇಶಗಳ ಸ್ಥಳಾಂತರ ಯೋಜನೆಯನ್ನು ಆರ್ಥಿಕ ಲಭ್ಯತೆಯ ಇತಿಮಿತಿಯಲ್ಲಿ ಪುನಾರಂಭಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ನಾನು ಅಧಿಕಾರಿಗಳಿಗೆ ಸೂಚನೆ ನೀಡಿ ಕೂಡಲೇ ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಬರಲು ಅರ್ಜಿ ಸಲ್ಲಿಸಿರುವ ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸಲು ಸೂಚಿಸಿದ್ದೆ, ಪ್ರಸಕ್ತ 5 ಕುಟುಂಬಕ್ಕೆ ಚೆಕ್ ನೀಡಲಾಗಿದೆ. ಜೊತೆಗೆ ಕುದುರೆಮುಖ ರಾ.ಉ. ಪುನರ್ವಸತಿಗೆ 20 ಕೋಟಿ ರು. ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಬ್ಬರ ಮೇಲೆ ಕಾಡಾನೆ ದಾಳಿ ಮಾಡಿದಾಗ, ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಲಾಗಿತ್ತು. ಆನೆ ಸೆರೆ ಮಾತ್ರವೇ ಪರಿಹಾರ ಆಗುವುದಿಲ್ಲ. ಹೀಗಾಗಿ ಅರಣ್ಯದೊಳಗಿನ ಜನರ ಸ್ಥಳಾಂತರದ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ, ಸಂರಕ್ಷಣೆ ಮಾಡಲು ಸರ್ಕಾರ ಕ್ರಮ ವಹಿಸಿದೆ. ಕುದುರೆಮುಖ ಅರಣ್ಯದೊಳಗೆ 1,300 ಪರಿವಾರಗಳಿದ್ದವು, 350 ಕುಟುಂಬಗಳಿಗೆ ಪರಿಹಾರ ನೀಡಿ, ಸ್ಥಳಾಂತರಿಸಲಾಗಿದೆ. ಇನ್ನೂ 300 ಕುಟುಂಬಗಳು ಸ್ವಯಂ ಇಚ್ಛೆಯಿಂದ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದು, ಹಂತ ಹಂತವಾಗಿ ಪುನರ್ವಸತಿ ಯೋಜನೆ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ 100 ಕೋಟಿ ರು. ಮಂಜೂರು ಮಾಡಲು ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನೂ ನೀಡಲಾಗಿದೆ ಎಂದರು.
ವನ ಪ್ರದೇಶ ಇರುವ ಜಿಲ್ಲೆಗಳಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚಾಗಿದೆ. ಮಂಗಳೂರು ಭಾಗದಲ್ಲೂ ಈ ಸಮಸ್ಯೆ ಇದೆ. ನಾನು ಸಚಿವರಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಸಮರ್ಪಿತ ಆನೆ ಕಾರ್ಯಪಡೆ ಮಂಜೂರು ಮಾಡಲಾಗಿದ್ದು, 25 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತಿದ್ದೇವೆ. ಕಾಡಿನಲ್ಲಿ ವನ್ಯಜೀವಿಗಳಿಗೆ ನೀರು, ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಸಿಬ್ಬಂದಿ ನೇಮಕಾತಿ ಮಾಡುತ್ತಿದ್ದೇವೆ. ಕಮಾಂಡ್ ಸೆಂಟರ್ ಆರಂಭಿಸಿದ್ದೇವೆ ಎಂದರು.ಬಾಕ್ಸ್----ಚಾರಣ ಎಸ್.ಒ.ಪಿ. ಕಟ್ಟುನಿಟ್ಟಿನ ಜಾರಿಗೆ – ಈಶ್ವರ ಖಂಡ್ರೆ ಸೂಚನೆ:
ಕುದುರೆಮುಖ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿನ ಶೋಲಾ ಸಫಾರಿಗಾಗಿ ಕ್ಯಾಂಪರ್ ವಾಹನಕ್ಕೂ ಚಾಲನೆ ನೀಡಿದರು. ಚಾರಣಿಗರ ಅನುಕೂಲಕ್ಕಾಗಿ ಕೈಪಿಡಿಯನ್ನೂ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 11 ಕೋಟಿ ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಅರಣ್ಯ ಒತ್ತುವರಿಯನ್ನು ತೆರವು ಮಾಡಲು ಆದ್ಯತೆ ನೀಡಲಾಗಿದ್ದು ಸಾವಿರಾರು ಕೋಟಿ ರು. ಬೆಲೆ ಬಾಳುವ ಅರಣ್ಯ ಒತ್ತುವರಿಯನ್ನು ಹಂತ ಹಂತವಾಗಿ ತೆರವು ಮಾಡಿಸಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಮೂಲಗಳಿಗೆ ತ್ಯಾಜ್ಯಜಲ ಸೇರದಂತೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ ಸಚಿವರು, ಜಲ ಕಾಯಿದೆಯ ನಿಯಮಗಳ ಅಡಿ ಸಂಸ್ಕರಿಸದೆ ತ್ಯಾಜ್ಯವನ್ನು ಜಲಮೂಲಗಳಿಗೆ ಹರಿಸುವವರಿಗೆ ನೋಟಿಸ್ ನೀಡಲು ಆದೇಶಿಸಲಾಗಿದೆ ಎಂದರು.