ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಆಡಳಿತವನ್ನು ಹಾಲಿ ಆಡಳಿತ ಸಮಿತಿಯೇ ಮುಂದುವರಿಸಲಿದ್ದು, ಈ ಕುರಿತು ಭಕ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಹಾಲಿ ಆಡಳಿತ ಸಮಿತಿ, ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು ಸ್ಪಷ್ಟಪಡಿಸಿದೆ.ಎಲ್ಲವೂ ಕೋರ್ಟ್ನ ನಿಯಮಾವಳಿಯಂತೆಯೇ ನಡೆದಿದ್ದು, ಹೊಸದಾಗಿ ಆಡಳಿತ ಮಂಡಳಿ ಆಯ್ಕೆಯಾಗಿದೆ ಎನ್ನುವುದು ಸರಿಯಲ್ಲ. ಹಾಲಿ ಆಡಳಿತ ಮಂಡಳಿಯೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ ಯಾರೂ ಅನುಮಾನ, ಗೊಂದಲ ಪಡುವ ಅಗತ್ಯ ಇಲ್ಲ ಎಂದು ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಸ್ಪಷ್ಟಪಡಿಸಿದರು.ಈ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಡಿಯಲ್ಲಿದ್ದರೂ ಬಳಿಕ ಗೊಂದಲ ಏರ್ಪಟ್ಟಾಗ ಮುಜರಾಯಿ ಇಲಾಖೆಯ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳ ಮೂಲಕ ಹಿಂದಿನ ಆಡಳಿತ ಸಮಿತಿಯನ್ನು ಮುಂದುವರಿಸಲು ಅನುಮತಿ ಲಭಿಸಿದೆ. ಅದರಂತೆ ಹಾಲಿ ಸಮಿತಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ನಡೆಸಿದೆ. 2020ರ ನಂತರ ಹಿಂದಿನ ಆಡಳಿತ ಸಮಿತಿಯ ಕೆಲವು ಪದಾಧಿಕಾರಿಗಳು ಸಭೆಗೆ ನಿಯಮಿತವಾಗಿ ಹಾಜರಾಗದ ಕಾರಣ ಕೆಲವರನ್ನು ಬದಲಾವಣೆ ಮಾಡಲಾಗಿದೆ. ಅದೇ ಕಾರಣಕ್ಕೆ ಅತೃಪ್ತರು ಸಭೆ ನಡೆಸಿ ತಾವೇ ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯವರು ಎಂದು ಹೇಳುತ್ತಿದ್ದಾರೆ. ನಮ್ಮ ಸಮಿತಿ ಬೈಲಾ ಪ್ರಕಾರ ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಕೊರಗಪ್ಪ ಅವರ ಕುಟುಂಬದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಮ್ಮ ಸಮಿತಿಯನ್ನು ಕೋರ್ಟ್ ಪುರಸ್ಕರಿಸಿದೆ. ಅವರಿಗೆ ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅದನ್ನೇ ಅವರು ಕೋರ್ಟ್ನಲ್ಲಿ ಗೆದ್ದಿರುವುದಾಗಿ ತಪ್ಪಾಗಿ ಭಾವಿಸಿದ್ದಾರೆ. ಅವರೊಂದಿಗೆ ಗುರುತಿಸಿದ ನಮ್ಮ ಸಮಿತಿಯ ಸದಸ್ಯಗೆ ನೋಟಿಸ್ ನೀಡಲಾಗುವುದು. ದೇವಸ್ಥಾನದ ಎಲ್ಲ ಆಸ್ತಿಪಾಸ್ತಿ, ಸೊತ್ತುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಹಾಲಿ ಸಮಿತಿ ಅಧ್ಯಕ್ಷ ಜೈರಾಜ್ ಸೋಮಸುಂದರ್, ದೇವೇಂದ್ರ ಪೂಜಾರಿ, ರವಿರಾಜ್, ರಾಧಾಕೃಷ್ಣ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ, ಲೀಲಾಕ್ಷ ಕರ್ಕೇರ, ಲತೀಸ್ ಸುವರ್ಣ ಮತ್ತಿತರರಿದ್ದರು.