ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಅನುಕೂಲತೆಗಾಗಿ 604 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸುವ ಸಲುವಾಗಿ ಶೀಘ್ರ ಮಾಸ್ಟರ್ ಪ್ಲಾನ್ ಸಮಿತಿ ಸಭೆ ಕರೆಯಲಾಗುವುದು. ದೇವಳದಲ್ಲಿ ನಡೆಯಲಿರುವ ಸುತ್ತುಪೌಳಿ ನಿರ್ಮಾಣ, ಡಾರ್ಮೆಟರಿ ನಿರ್ಮಾಣ, 1000 ಕೊಠಡಿಗಳ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಿ ವೇಗವಾಗಿ ಕಾಮಗಾರಿ ಸಂಪೂರ್ಣಗೊಳಿಸಿ ಭಕ್ತರ ಉಪಯೋಗಕ್ಕೆ ದೊರಕುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ರಾಜ್ಯ ಧಾರ್ಮಿಕ ದತ್ತಿ ಆಯುಕ್ತ ಶರತ್ ಬಿ. ಹೇಳಿದ್ದಾರೆ.
ಭಾನುವಾರ ರಾತ್ರಿ ಕ್ಷೇತ್ರಕ್ಕಾಗಮಿಸಿದ ಅವರು ಆದಿಶೇಷ ವಸತಿ ಗೃಹದಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು. ಸೋಮವಾರ ಬೆಳಗ್ಗೆ ಆಡಳಿತ ಕಚೇರಿ ಸಭಾಂಗಣದಲ್ಲಿ ಆಡಳಿತ ಮಂಡಳಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಎಸ್.ಜೆ.ಯೇಸುರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಪ್ರವಿಣಾ ರೈ ಮರುವಂಜ, ಲೀಲಾ ಮನಮೋಹನ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಯುತ್ತ ಗೌಡ ಬಳ್ಪ, ದೇವಳದ ಅಧೀಕ್ಷಕ ಕೆ.ಎಂ.ಗೋಪಿನಾಥ್ ನಂಬೀಶ, ಅಭಿಯಂತರ ಉದಯ ಕುಮಾರ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್. ಎಸ್ ಮತ್ತಿತರರಿದ್ದರು.ದೇವಳದ ಆಡಳಿತ ಮಂಡಳಿಯು ಭಕ್ತರ ಅನುಕೂಲತೆಗಾಗಿ ತುರ್ತಾಗಿ ಕ್ಷೇತ್ರದಲ್ಲಾಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ತಿಳಿಸಿದರು. ಆಶ್ಲೇಷಬಲಿ ಮಂಟಪ, ಸುತ್ತುಪೌಳಿ, ಡಾರ್ಮೆಟರಿ, ವಸತಿಗೃಹ, ನೌಕರರ ವಸತಿ ಗೃಹ ನಿರ್ಮಾಣ, ಸಿಬ್ಬಂದಿ ವೇತನ, ಹೊಸ ಸಿಬ್ಬಂದಿ ನೇಮಕ, ಸರ್ಪಸಂಸ್ಕಾರ ಪುರೋಹಿತರ ಸಂಭಾವನೆ, ದೇವಳದಲ್ಲಿ ನಡೆಯುವ ಸೇವೆಗಳು ಇತ್ಯಾದಿಗಳ ಬಗ್ಗೆ ಆಯುಕ್ತರಲ್ಲಿ ಆಡಳಿತ ಮಂಡಳಿ ಚರ್ಚಿಸಿದಾಗ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ ಶೀಘ್ರವೇ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಸಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಅವರನ್ನು ದೇವಳ ಆನೆ ಯಶಸ್ವಿ ಹೂಹಾರ ಹಾಕಿ ಸ್ವಾಗತಿಸಿತು. ಬಳಿಕ ದೇವರ ದರುಶನ ಮಾಡಿದ ಅವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಹೊಸಳಿಗಮ್ಮನ ದರುಶನ ಮಾಡಿದರು.ಸ್ಥಳ ಪರಿಶೀಲನೆ:ಇಂಜಾಡಿಯಲ್ಲಿ 1000 ಕೊಠಡಿಗಳ ವಸತಿಗೃಹ ನಿರ್ಮಾಣವಾಗುವ ಸ್ಥಳ ಮತ್ತು ಸಿಬ್ಬಂದಿ ವಸತಿ ಗೃಹ ಸ್ಥಳಕ್ಕೆ ತೆರಳಿ ಸ್ಥಳಪರಿಶೀಲನೆ ಮಾಡಿದರು.