ಕೆ.ಆರ್ .ಪೇಟೆ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿ, ಕೇಂದ್ರ ಸಚಿವರಾದ ನಂತರ ಪಟ್ಟಣಕ್ಕೆ ಆಗಮಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಹೊರವಲಯದ ದೇವೇಗೌಡ ಅಭಿಮಾನಿ ಬಳಗದ ಕಚೇರಿ ಬಳಿಯಿಂದ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣೆಯಲ್ಲಿ ಆಗಮಿಸಿದರು. ಈ ವೇಳೆ ಟಿಬಿ ವೃತ್ತದಲ್ಲಿ ಎಚ್ಡಿಕೆ ಅವರಿಗೆ ಕ್ರೇನ್ ಮೂಲಕ ಬೃಹತ್ ಬೆಲ್ಲದ ಹಾರ ಹಾಗೂ ಹೂವಿನ ಹಾರಗಳನ್ನು ಸಮರ್ಪಣೆ ಮಾಡಿ ಅಭಿನಂದಿಸಲಾಯಿತು.
ಎಚ್.ಡಿ.ಕುಮಾರಸ್ವಾಮಿ ಅವರು ವೇದಿಕೆ ಬಳಿ ಆಗಮಿಸುತ್ತಿದ್ದಂತೆ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗಿದರು. ಶಿಳ್ಳೆ, ಚಪ್ಪಾಳೆ ಮೂಲಕ ಸ್ವಾಗತ ಕೋರಿದರು.ವೇದಿಕೆ ಏರುವ ಮುನ್ನ ಸಾರ್ವಜನಿಕರಿಂದ ಕೇಂದ್ರ ಸಚಿವರು ಅಹವಾಲು ಸ್ವೀಕರಿಸಿದರು. ಕುಮಾರಸ್ವಾಮಿ ಬರುವವರೆಗು ಕಾದು ನೂರಾರು ಜನರು ತಮ್ಮ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಪಡೆದು ಅಹವಾಲು ಕೇಳಿದ ಕೇಂದ್ರ ಸಚಿವರು ಪರಿಹರಿಸುವ ಭರವಸೆ ನೀಡಿದರು.