ಕುಂದಾಪುರ: ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ಮೂಡ್ಲಕಟ್ಟೆಯ ಐಎಂಜೆ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ‘ಐಎಂಜೆ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್’ (ಐಎಂಜೆಐಆರ್)ಗೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಹೈದರಾಬಾದ್ನ ಟಿಐಎಫ್ಆರ್ ನಿರ್ದೇಶಕ ಪ್ರೊ. ಎಂ. ಕೃಷ್ಣಮೂರ್ತಿ ಅವರು ಕ್ವಾಂಟಮ್ ಕಂಪ್ಯೂಟೇಶನ್ ಈ ಒಂದು ಕ್ಷೇತ್ರದ ಪ್ರಾಮುಖ್ಯತೆಯನ್ನು ತಿಳಿಸಿದಲ್ಲದೆ ಪ್ರಸಕ್ತ ಅನ್ವೇಷಣಾ ವಲಯದಲ್ಲಿ ಇದರ ಕ್ರಾಂತಿಯ ಬಗ್ಗೆ ಒತ್ತಿ ಹೇಳಿದರು ಮತ್ತು ಮೂಡ್ಲಕಟ್ಟೆಯಲ್ಲಿ ಈ ಸಂಶೋಧನಾ ಕ್ಷೇತ್ರ ಸ್ಥಾಪಿಸಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.
ದಿಕ್ಸೂಚಿ ಭಾಷಣಕಾರರಾಗಿದ್ದ ಪ್ರೊ. ಸಪ್ತರ್ಷಿ ಚೌಧರಿ ಅವರು, ನ್ಯಾಷನಲ್ ಕ್ವಾಂಟಮ್ ಮಿಶನ್ ಬಗ್ಗೆ ವಿವರಿಸಿ, ಭಾರತದಲ್ಲಿ ಪ್ರಸ್ತುತ ಕ್ವಾಂಟಮ್ ಕಂಪ್ಯೂಟ್ ಇಕೋ ಸಿಸ್ಟಮ್ ಇದರ ಸಮಗ್ರ ಪರಿಚಯ ನೀಡಿದರಲ್ಲದೆ ಮೂಡ್ಲಕಟ್ಟೆಯಲ್ಲಿ ಉದ್ಘಾಟನೆಗೊಂಡಿರುವ ವಿಶೇಷವಾದ ಕ್ವಾಂಟಮ್ ಕಂಪ್ಯೂಟರ್ ರಿಸರ್ಚ್ ಸೆಂಟರ್ ಬಗ್ಗೆ ಪ್ರಶಂಸಿಸಿದರು. ಗೌರವ ಅತಿಥಿಯಾಗಿ ಆಗಮಿಸಿದ ಕುವೆಂಪು ವಿವಿಯ ಉಪಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಪರೀಕ್ಷೆಗಳು ಕೇವಲ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ವೇದಿಕೆಯಾಗದೆ, ವಿದ್ಯಾರ್ಥಿಗಳ ಅನ್ವಯಿಕ ಜ್ಞಾನವನ್ನು ಅಳೆಯುವಂತಾಗಬೇಕು ಎಂದು ಆಶಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ ಅವರು ಸಂಸ್ಥೆಯ ಹೊಸ ಮೈಲಿಗಲ್ಲಾಗಿ ರಿಸರ್ಚ್ ಸೆಂಟರ್ ಸ್ಥಾಪಿಸಿರುವುದು ತಮಗೆ ಹೆಮ್ಮೆ ತಂದಿದೆ, ಇದರ ಸದುಪಯೋಗ ಪಡೆದುಕೊಂಡು ತಮ್ಮ ಶೈಕ್ಷಣಿಕ ಅಭಿವೃದ್ಧಿಯತ್ತ ಹೆಚ್ಚು ಗಮನ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭ ಖ್ಯಾತ ಪರಮಾಣು ಭೌತಶಾಸ್ತ್ರಜ್ಞೆ ಡಾ. ಪುಷ್ಪಾ ಎಂ. ರಾವ್ ಅವರನ್ನು ಸನ್ಮಾನಿಸಲಾಯಿತು.ಐಎಂಜೆಐಆರ್ ನಿರ್ದೇಶಕ ಡಾ. ಸತ್ಯಜಿತ್ ಅವರು ರಿಸರ್ಚ್ ಸೆಂಟರ್ ಧ್ಯೇಯೋದ್ಧೇಶಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ಅಕಾಡಮಿಕ್ ನಿರ್ದೇಶಕ ಡಾ. ಎಸ್.ಎನ್. ಭಟ್ ಸ್ವಾಗತಿಸಿ, ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ಡೈರೆಕ್ಟರ್ ಆಗಿರುವ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರಾಧ್ಯಾಪಕಿ ಡಾ. ನಿಖಿಲ ಪೈ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ‘ನೆಲ ಮೂಲ, ಜಗದಗಲ’ (ರೂರಲ್ ರೂಟ್ಸ್, ಗ್ಲೋಬಲ್ ರೀಚ್) ಎಂಬ ಧ್ಯೇಯವಾಕ್ಯಕ್ಕನುಗುಣವಾಗಿ ನೂತನವಾಗಿ ಉದ್ಘಾಟನೆಗೊಂಡ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಕ್ವಾಂಟಮ್ ತಂತ್ರಜ್ಞಾನ ಮತ್ತು ಸುಧಾರಿತ ಸಂಶೋಧನೆಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವ ಗುರಿಯನ್ನು ಹೊಂದಿದೆ.