ಕುಂಡ್ಯೋಳಂಡ ಹಾಕಿ ಉತ್ಸವ: ನೆಲ್ಲಮಕ್ಕಡ, ಚೇಂದಂಡ ನಡುವೆ ಫೈನಲ್ ಹಣಾಹಣಿ

KannadaprabhaNewsNetwork |  
Published : Apr 28, 2024, 01:17 AM IST
 ಹಾಕಿ  | Kannada Prabha

ಸಾರಾಂಶ

ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ. ಇಂದು ಕೊಡವ ಜನಾಂಗ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಹೇಳಿದರು.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್ ನಲ್ಲಿ ಕುಲ್ಲೇಟಿರ ತಂಡದ ವಿರುದ್ಧ ಚೇಂದಂಡ ತಂಡ 3-1 ಗೋಲುಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರೆ ಕಳೆದ ಬಾರಿಯ ಚಾಂಪಿಯನ್ ಕುಪ್ಪಂಡ (ಕೈಕೇರಿ) ತಂಡದ ವಿರುದ್ಧ ನೆಲ್ಲಮಕ್ಕಡ ತಂಡ 4-2 ಗೋಲುಗಳ ಜಯಸಾಧಿಸಿ ಫೈನಲ್ ಪ್ರವೇಶಿಸಿತು.

ಇಂದು ನೆಲ್ಲಮಕ್ಕಡ ಹಾಗೂ ಚೇಂದಂಡ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.

ಮೊದಲ ಸೆಮಿ ಫೈನಲ್ಸ್ ನಲ್ಲಿ ಚೇಂದಂಡ ಮತ್ತು ಕುಲ್ಲೆಟ್ಟರ ತಂಡಗಳ ನಡುವೆ ಪೈಪೋಟಿ ನಡೆಯಿತು. ಚೇಂದಂಡ ತಂಡದ ಚೇಂದಂಡ ಮೋಕ್ಷಿತ್ ಉತ್ತಪ್ಪ ನಾಲ್ಕನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ನಂತರ ಎರಡು ತಂಡಗಳ ನಡುವೆ ಹಣಾಹಣಿ ನಡೆಯಿತು. ಚೇಂದಂಡ ತಂಡದ ನಿಖಿನ್ ತಿಮ್ಮಯ್ಯ 34ನೇ ನಿಮಿಷದಲ್ಲಿ ಹಾಗೂ 48ನೇ ನಿಮಿಷದಲ್ಲಿ ಎರಡು ಗೋಲು ಗಳಿಸುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ತೀವ್ರ ಪೈಪೋಟಿ ನೀಡಿದ ಕುಲ್ಲೇಟಿರ ತಂಡದ ಶುಭಂ 59ನೇ ನಿಮಿಷದಲ್ಲಿ ಒಂದು ಗೋಲು ಗಳಿಸಲಷ್ಟೇ ಶಕ್ತರಾದರು. ಆ ಮೂಲಕ 3-1 ಅಂತರದಲ್ಲಿ ಚೇಂದಂಡ ಕುಲ್ಲೇಟಿರ ವಿರುದ್ಧ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು. ಕಳೆದ ವರ್ಷ ಅಂತಿಮ ಹಂತಕ್ಕೆ ತಲುಪಿದ್ದ ಕುಲ್ಲೇಟಿರ ತಂಡ ಈ ವರ್ಷ ಸೆಮಿಫೈನಲ್ ನಲ್ಲಿ ನಿರ್ಗಮಿಸಿತು.

ಎರಡನೇ ಸೆಮಿಫೈನಲ್ ನಲ್ಲಿ ನೆಲ್ಲಮಕ್ಕಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಸೆಣೆಸಾಟ ನಡೆಸಿದವು. ನೆಲ್ಲಮಕ್ಕಡ ತಂಡದ ಪ್ರಧಾನ ಚಂಗಪ್ಪ 20ನೇ ನಿಮಿಷದಲ್ಲಿ ಹಾಗೂ ನೆಲಮಕ್ಕಡ ಪ್ರಧಾನ ಅಯ್ಯಪ್ಪ 21ನೇ ನಿಮಿಷದಲ್ಲಿ ಸತತವಾಗಿ ಎರಡು ಗೋಲು ಗಳಿಸಿ ರು. ಪ್ರಬಲ ಪೈಪೋಟಿ ನೀಡಿದ ಕುಪ್ಪಂಡ (ಕೈಕೇರಿ )ತಂಡದ ಆಟಗಾರರಾದ ಕುಪ್ಪಂಡ ಸೋಮಯ್ಯ 24ನೇ ನಿಮಿಷದಲ್ಲಿ ಹಾಗೂ 32 ನೇ ನಿಮಿಷದಲ್ಲಿ ಎರಡು ಗೋಲುಗಳಿಸಿ ಸಮಬಲ ಸಾಧಿಸಿದರು. ನೆಲ್ಲಮಕ್ಕಡ ತಂಡದ ಸೋಮಯ್ಯ 34 ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ನೆಲ್ಲಮಕ್ಕಡ ಅಯ್ಯಪ್ಪ 59 ನೇ ನಿಮಿಷದಲ್ಲಿ ಒಟ್ಟು ನಾಲ್ಕು ಗೋಲುಗಳ ನೆರವಿನಿಂದ ನೆಲ್ಲಮಕ್ಕಡ ಕುಪ್ಪಂಡ (ಕೈಕೇರಿ) ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ: ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ

ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 24ನೇ ಕುಂಡ್ಯೋಳಂಡ ಹಾಕಿ ಹಬ್ಬದ ಸೆಮಿ ಫೈನಲ್ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ವಹಿಸಿದ್ದರು.

ಸೆಮಿ ಫೈನಲ್ ಪಂದ್ಯಾವಳಿಯ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡಿರ ಮೊಣ್ಣಪ್ಪ ಪೂಣಚ್ಚ ಪಾಲ್ಗೊಂಡು ಹೂವಿನ ಕುಂಡಕ್ಕೆ ನೀರು ಹಾಕುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಾಕಿ ಕೊಡವ ಜನಾಂಗದಲ್ಲಿ ರಕ್ತಗತವಾಗಿದೆ. ಇಂದು ಕೊಡವ ಜನಾಂಗ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಜನಾಂಗದಲ್ಲಿ ಶಿಸ್ತು ಮತ್ತು ಬದ್ದತೆ ಇರುವುದರಿಂದ ಈ ಸಾಧನೆ ಸಾಧ್ಯವಾಗುತ್ತಿದೆ ಎಂದರು. ಕೊಡವ ಕುಟಂಬಗಳ ಆಟಗಾರರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಜಿಲ್ಲೆಯ ಹಾಕಿ ಕ್ರೀಡೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ಹೇಳಿದರು.

ಒಲಂಪಿಯನ್ , ಲೆಫ್ಟಿ ನೆಟ್ ಕರ್ತರ್ ಬಾಳೆಯಡ ಕೆ.ಸುಬ್ರಮಣಿ ಮಾತನಾಡಿ ಉತ್ತಮ ಕ್ರೀಡಾಕೂಟವನ್ನು ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರು ಅಭಿನಂದನಾರ್ಹರು ಎಂದರು.

ಒಲಿಂಪಿಯನ್ ಅಂಜಪರವಂಡ ಬಿ ಸುಬ್ಬಯ್ಯ ಮಾತನಾಡಿ ಕಾರ್ಯಕ್ರಮದ ಬಗ್ಗೆ ಉತ್ತಮ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಡಾ.ಕಲಿಯಾಟಂಡ ಚಿಣ್ಣಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ.ಬಾಚಮಂಡ ಎ.ಕಾರ್ಯಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಸಂಚಾಲಕ ದಿನೇಶ್ ಕಾರ್ಯಪ್ಪ ಸೇರಿದಂತೆ ಇತರ ಗಣ್ಯರು ಹಾಗೂ ಕ್ರೀಡಾ ಸಮಿತಿ ಪದಾಧಿಕಾರಿ ಸದಸ್ಯರು ಇನ್ನಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕಾರ್ಯನಿರ್ವಹಿಸಿದ ಸಾಧಕರಿಗೆ ಹಾಗೂ ಇಲ್ಲಿ ನಡೆದ ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ಗಳು, ತಾಂತ್ರಿಕವರ್ಗ ಮತ್ತು ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಬ್ಯಾಂಡ್ ಡಿಸ್ ಪ್ಲೇ ಕಾರ್ಯಕ್ರಮ

ಈ ಸಂದರ್ಭ ಇಲ್ಲಿಯ ಅಂಕುರ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಬ್ಯಾಂಡ್ ಡಿಸ್ ಪ್ಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದಕ್ಕೂ ಮುನ್ನ ಅತಿಥಿಗಳನ್ನು ದುಡಿಕೊಟ್ ಪಾಟ್ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೊಡವ ಪುರುಷರಿಗೆ ದಪ್ಪ ಮೀಸೆಯ ಸ್ಪರ್ಧೆ ಮತ್ತು ಕೊಡವ ಮಹಿಳೆಯರಿಗೆ ಉದ್ದ ಜಡೆಯ ಸ್ಪರ್ಧೆ ಯನ್ನು ಆಯೋಜಿಸಲಾಗಿತ್ತು. ಶನಿವಾರ ಬೆಳಿಗ್ಗೆ ಕಕ್ಕಬ್ಬೆ ಪಟ್ಟಣದಿಂದ ನಾಪೋಕ್ಲು ವರೆಗೆ ರಿಲೇ ಸ್ಪರ್ಧೆ ನಡೆಯಿತು.

ಹಾಕಿ ಉತ್ಸವ ಇಂದು ಫೈನಲ್

ಭಾನುವಾರ ಬೆಳಗ್ಗೆ 9 ಗಂಟೆಗೆ 3 ಮತ್ತು 4 ನೇ ಸ್ಥಾನಕ್ಕಾಗಿ ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳ ನಡುವೆ ಪೈಪೋಟಿ ನಡೆಯಲಿದೆ. 10.30 ಗಂಟೆಗೆ ನಡೆಯಲಿರುವ ಕುಂಡ್ಯೋಳಂಡ ಕಪ್ ಹಾಕಿ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು.

ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪ ನಿರ್ದೇಶಕ ಮುಕ್ಕಾಟಿರ ಪುನಿತ್ ಕುಟ್ಟಯ್ಯ, ಉದ್ಯಮಿ ಕೊಡಂಗಡ ರವಿ ಕರುಂಬಯ್ಯ, ಐಆರ್‌ಎಸ್ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ, ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿಮಾಡ ಎಂ.ಉತ್ತಪ್ಪ (ಸಂತೋಷ್), ಪಾಂಡಂಡ ಲೀಲಾ ಕುಟ್ಟಪ್ಪ, ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡಮಹೇಶ್ ನಾಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇಬ್ನಿ ಕೂರ್ಗ್ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಸಬಾಸ್ಟಿಯನ್, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕ ಪೀಟರ್, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷ ಕುಲ್ಲೇಟ್ಟಿರ ಹೇಮಾವತಿ ಅರುಣ್ ಬೇಬಾ, ಟಾಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ, ನಾಪೋಕ್ಲು ಕೆಪಿಎಸ್ ಸ್ಕೂಲ್ನ ಪ್ರಾಂಶುಪಾಲೆ ಮೇದುರ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲರಾದ ಎಂ.ಎಸ್.ಶಿವಣ್ಣ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಚಕ್ರವರ್ತಿ, ಅತಿಥಿಗಳಾಗಿ ಆರ್.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್, ಆರ್.ವಿ.ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಿ.ಪಿ.ನಾಗರಾಜ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥ ಮಹೇಶ್ ಶಣೈ, ಉದ್ಯಮಿ ಕಂಬೆಯಂಡ ಶ್ಯಾಮ್, ರಿಪಬ್ಲಿಕ್ ಕನ್ನಡ ಚಾನಲ್ ನ ಪ್ರಧಾನ ಸಂಪಾದಕ ಚೇರಂಡ ಕಿಶನ್ ಪಾಲ್ಗೊಳ್ಳಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!