ಕುರುಗೋಡು ತಾಲೂಕಿನ ಸಿದ್ದಮ್ಮನಹಳ್ಳಿ ಪ್ರೌಢಶಾಲೆಗೆ ಮೂಲಸೌಕರ್ಯ ಕೊರತೆ

KannadaprabhaNewsNetwork |  
Published : Feb 27, 2026, 02:45 AM IST
ಕುರುಗೋಡು 01ಕುರುಗೋಡು ತಾಲೂಕಿನ ಸಮೀಪದ ಸಿದ್ದಮ್ಮನಹಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಒಂದು ನೋಟ. | Kannada Prabha

ಸಾರಾಂಶ

150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ ಆ ಸಂಖ್ಯೆ 106ಕ್ಕೆ ಕುಸಿದಿದೆ. ಮೂವರು ಖಾಯಂ, ಮೂವರು ಅತಿಥಿ ಶಿಕ್ಷಕರಿದ್ದು, ಕನ್ನಡ ಮತ್ತು ಸಮಾಜದ ವಿಷಯಗಳಿಗೆ ಶಿಕ್ಷರಿಲ್ಲದಾಗಿದೆ.

ಬಾದನಹಟ್ಟಿ ಪಂಪನಗೌಡ

ಕುರುಗೋಡು: ತಾಲೂಕಿನ ಸಿದ್ದಮ್ಮನಹಳ್ಳಿ ಹೊರವಲಯದಲ್ಲಿ ಕಳೆದ 15 ವರ್ಷದ ಹಿಂದೆ ಸರ್ಕಾರಿ ಶಾಲೆ ನಿರ್ಮಾಣಗೊಂಡಿದ್ದು, ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ.

ಇದರಿಂದಾಗಿ ಆರಂಭದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ ಆ ಸಂಖ್ಯೆ 106ಕ್ಕೆ ಕುಸಿದಿದೆ. ಮೂವರು ಖಾಯಂ, ಮೂವರು ಅತಿಥಿ ಶಿಕ್ಷಕರಿದ್ದು, ಕನ್ನಡ ಮತ್ತು ಸಮಾಜದ ವಿಷಯಗಳಿಗೆ ಶಿಕ್ಷರಿಲ್ಲದಾಗಿದೆ.

ಶಾಲೆ ಗ್ರಾಮದಿಂದ 3 ಕಿ.ಮೀ. ದೂರವಿದೆ. ಸಾರಿಗೆ ವ್ಯವಸ್ಥೆ ಇಲ್ಲವಾಗಿದ್ದು, ವಿದ್ಯಾರ್ಥಿಗಳು ನಡೆದುಕೊಂಡೇ ಬರಬೇಕಿದೆ. ಒಂದೇ ಶೌಚಾಲಯ ಇರುವುದರಿಂದ ವಿದ್ಯಾರ್ಥಿಗಳು ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ. ಇದಲ್ಲದೇ ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ ಇಲ್ಲ. ಆವರಣದಲ್ಲಿ ಗಿಡಗಂಟಿ ಬೆಳೆದಿದ್ದು, ಹಾವು-ಚೇಳುಗಳ ತಾಣವಾಗಿದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಮಕ್ಕಳ ಜೀವಕ್ಕೆ ಸಂಚಕಾರ ಎದುರಾಗಿದೆ. ಇದರಿಂದಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಯಾದಾಗ ಶಾಲೆಯ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇದರಿಂದಾಗಿ ಸಂಚರಿಸಲು ಬಾರದಂತಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಶಿಕ್ಷಕರು ಅದೆಷ್ಟೋ ಬಾರಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಇಸ್ಕಾನ್‌ನಿಂದ ಬರುವ ವಾಹನ ಶಾಲೆ ಒಳ ಹೋಗದ ಪರಿಣಾಮ ಮಕ್ಕಳೇ ಮುಖ್ಯ ರಸ್ತೆಯಿಂದ ಊಟದ ಪಾತ್ರೆಗಳನ್ನು ಹೊತ್ತು ತರಬೇಕಿದೆ.

ತಹಸೀಲ್ದಾರ್‌ ಸೂಚನೆಗೂ ಬೆಲೆ ಇಲ್ಲ:

ನಾಲ್ಕು ವರ್ಷಗಳ ಹಿಂದೆ ಸಿದ್ದಮ್ಮಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ನಡೆದಿತ್ತು. ಆಗ ಮಕ್ಕಳು ಮತ್ತು ಪಾಲಕರು ಶಾಲೆ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರು. ಅಲ್ಲಿದ್ದ ಸಾರಿಗೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಹಸೀಲ್ದಾರ್‌ ಸೂಚನೆ ನೀಡಿದ್ದರು. ಆಗ ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷ ಆದರೂ ಯಾರೊಬ್ಬ ಅಧಿಕಾರಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಲ್ಲ. ಗ್ರಾಮ ವಾಸ್ತವ್ಯ ಭರವಸೆಗೆ ಅಷ್ಟೆ ಸೀಮಿತವಾಗಿದೆ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ

ಸಿದ್ದಮ್ಮನಹಳ್ಳಿಯಿಂದ ಏಳುಬೆಂಚಿಯ ಈ ರಸ್ತೆಯಲ್ಲಿ ದಿನನಿತ್ಯ ರೈತರು ಜಮೀನಿಗೆ ಹೋಗುತ್ತಾರೆ. ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಹೀಗಾಗಿ, ಉತ್ತಮ ರಸ್ತೆ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಲೆಗೆ ಸೂಕ್ತವಾದ ಕಾಂಪೌಂಡ್ ವ್ಯವಸ್ಥೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನಡೆದುಕೊಂಡು ಬರಬೇಕಿದೆ. ಈಗಲಾದರೂ ಕ್ಷೇತ್ರದ ಶಾಸಕರು ಇತ್ತಕಡೆ ವಿದ್ಯಾಭ್ಯಾಸಕ್ಕೆ ಆಸರೆಯಾಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ಕುರಿತು ತಾಪಂ, ಗ್ರಾಪಂನ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ರಸ್ತೆ, ಕಾಂಪೌಂಡ್, ಶೌಚಾಲಯ ಹಾಗೂ ಅವರಣದ ಸ್ವಚ್ಛತೆ ಸೇರಿದಂತೆ ಕೂಡಲೇ ಎಲ್ಲ ಸಮಸ್ಯೆ ಬಗೆಹರಿಸಲಾಗುವುದು ಎನ್ನುತ್ತಾರೆ ಕುರುಗೋಡು ಬಿಇಒ ಸಿದ್ದಲಿಂಗ ಮೂರ್ತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ