ಕುಶಾಲನಗರ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

KannadaprabhaNewsNetwork | Published : Aug 21, 2024 12:38 AM

ಸಾರಾಂಶ

ಕರ್ನಾಟಕ ರೈತ ಸಂಘ ಕುಶಾಲನಗರ ಸಮಿತಿಯ ಆಶ್ರಯದಲ್ಲಿ ಕುಶಾಲನಗರ ತಹಸೀಲ್ದಾರ್ ಕಚೇರಿ ಎದುರು ಹಲವು ಬೇಡಿಕೆ ಮುಂದಿಟ್ಟುಕೊಂಡು ಮಂಗಳವಾರ ಪ್ರತಿಭಟನೆ ನಡೆಸಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕರ್ನಾಟಕ ರೈತ ಸಂಘ ಕುಶಾಲನಗರ ಸಮಿತಿಯ ಆಶ್ರಯದಲ್ಲಿ ಕುಶಾಲನಗರ ತಹಸೀಲ್ದಾರ್ ಕಚೇರಿ ಎದುರು ಹಲವು ಬೇಡಿಕೆ ಮುಂದಿಟ್ಟುಕೊಂಡು ಮಂಗಳವಾರ ಪ್ರತಿಭಟನೆ ನಡೆಸಿತು.

ಕುಶಾಲನಗರ ತಾಲೂಕು ವಿವಿಧ ಗ್ರಾಮಗಳಲ್ಲಿ ದಲಿತರು, ಬಡವರ ಅಕ್ರಮ ಸಾಗುವಳಿ 57 ಮತ್ತು 94ಸಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಬಲಾಢ್ಯರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ದಲಿತರ ಜಾಗ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ದಲಿತರ ಕೃಷಿ ಭೂಮಿಯ ಮೇಲೆ ಉಳ್ಳವರಿಗೆ, ಬಲಿಷ್ಠರಿಗೆ ರಸ್ತೆ ಬಿಡಿಸಿಕೊಡುವ ಬಗ್ಗೆ ದಲಿತರಿಗೆ ಕಿರುಕುಳ ದೌರ್ಜನ್ಯ ನಡೆಸಲಾಗುತ್ತಿದೆ. ಇನ್ನು ಕೆಲವು ಗ್ರಾಮದಲ್ಲಿ ದಲಿತರಿಗೆ ಸೂಕ್ತ ತಿರುಗಾಡಲು ರಸ್ತೆ ಇಲ್ಲ. ಸತ್ತಾಗ ಹೂಳಲು ಸ್ಮಶಾನ ಇಲ್ಲ ಎಂದು ಆರೋಪಿಸಲಾಯಿತು.

ಸರ್ಕಾರ ಬಡವರ ತುಂಡು ಭೂಮಿಯನ್ನು ಪೈಸಾರಿ ಸೇರಿಸಿ ಯಾವುದೇ ಸಾಲ ಸೌಲಭ್ಯಗಳು ಸಿಗದಂತೆ ಮಾಡಿದೆ. ಉಳ್ಳವರು ಅಕ್ರಮಿಸಿಕೊಂಡಿರುವ 25 ಎಕರೆ ವರೆಗೆ 30 ವರ್ಷ ಗುತ್ತಿಗೆ ನೀಡಲಾಗುತ್ತಿದೆ. ಬಡವರು, ದಲಿತ, ಆದಿವಾಸಿಗಳಿಗೆ ಸ್ವಂತ ನಿವೇಶನ ಕೃಷಿ ಭೂಮಿ ನೀಡದೆ ಸರ್ಕಾರ ವಂಚನೆ ಮಾಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರೈತ ಸಂಘದ ಪ್ರಮುಖ ನಿರ್ವಾಣಪ್ಪ ಹೇಳಿದರು.

ಪ್ರತಿಭಟನೆಯಲ್ಲಿ ಈ ಕೆಳಗಿನ ಹಕ್ಕೊತ್ತಾಯಗಳ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತರಲಾಯಿತು.

-ತಾಲೂಕಿನಲ್ಲಿ ಬಾಕಿ ಇರುವ ದಲಿತ ಬಡವ ಅಕ್ರಮ ಸಕ್ರಮ ಫಾರಂ ನಂ. 57-94ಸಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.

-ಬಡವರ ತುಂಡುಭೂಮಿಯನ್ನು ಪೈಸಾರಿ ಎಂದು ಆರ್.ಟಿ.ಸಿ.ಗೆ ಸೇರಿಸುವುದನ್ನು ರದ್ದುಗೊಳಿಸಬೇಕು.

-6ನೇ ಹೊಸಕೋಟೆಯಲ್ಲಿ 15 ಕುಟುಂಬದ ದಲಿತರಿಗೆ ರಸ್ತೆ ಬಿಡಿಸಿಕೊಡಬೇಕು.

-ಭುವನಗಿರಿ ಮತ್ತು ಸೀಗೆ ಹೊಸೂರು ಸರ್ವೆ ನಂ.35 ಮತ್ತು 2/10ರ ದಲಿತರ ಭೂಮಿಯ ಮೇಲೆ ಉಳ್ಲವರಿಗೆ ರಸ್ತೆ ಬಿಡಿಸಿಕೊಡುವುದನ್ನು ಕೈಬಿಡಬೇಕು.

-ದೊಡ್ಡತ್ತೂರು ಗ್ರಾಮದ ದಲಿತ ಸಿದ್ದಯ್ಯನ ಎರಡು ಎಕರೆ ಸರ್ವೆ ನಂ.30/5 ರ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸವರ್ಣೀರಿಂದ ತಕ್ಷಣ ಬಿಡಿಸಿಕೊಡಬೇಕು.

-ಸರ್ಕಾರಿ ಭೂಮಿಯನ್ನು ಉಳ್ಳವರು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು ಎನ್ನುವ ಹಕ್ಕೊತ್ತಾಯ ಈಡೇರಿಸಬೇಕಾಗಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಡಿ.ಎಸ್‌. ನಿರ್ವಾಣಪ್ಪ, ಜಿಲ್ಲಾಧ್ಯಕ್ಷ ಎಚ್‌.ಜೆ.ಪ್ರಕಾಶ್, ಕುಶಾಲನಗರ ತಾಲೂಕು ಅಧ್ಯಕ್ಷ ಮುತ್ತಣ್ಣ, ಜವರಯ್ಯ ಮತ್ತಿತರರು ಇದ್ದರು.

Share this article