ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಿಂದ ರಾಷ್ಟ್ರೀಯ ಹೆದ್ದಾರಿ-275 ರ ಮೈಸೂರು ಭಾಗಕ್ಕೆ ವಿಸ್ತರಣೆ ಮತ್ತು ಸುಧಾರಣೆ ಕಾಮಗಾರಿ ಪ್ರಾರಂಭಗೊಂಡಿದೆ. ಗುಡ್ಡೆಹೊಸೂರು ಬಳಿ ಚತುಷ್ಪಥ ರಸ್ತೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕಟ್ಟಡಗಳ ತೆರವು ಬಿರುಸಿನಿಂದ ನಡೆಯುತ್ತಿದೆ.ಕುಶಾಲನಗರದಿಂದ ಮೈಸೂರು ತನಕ ಸುಮಾರು 92.335 ಕಿ.ಮೀ. ಉದ್ದದ ರಸ್ತೆ ನಾಲ್ಕು ಮತ್ತು ಆರು ಪಥಗಳ ಸುಸಜ್ಜಿತ ರಸ್ತೆಗಳ ಕಾಮಗಾರಿ ಪ್ರಾಥಮಿಕ ಹಂತದ ಕೆಲಸ ಈಗಾಗಲೇ ನಡೆಯುತ್ತಿದೆ.
ಕುಶಾಲನಗರ-ಮಡಿಕೇರಿ ಹೆದ್ದಾರಿ ರಸ್ತೆಯ ಗುಡ್ಡೆಹೊಸೂರು ವೃತ್ತದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದ ತೆಪ್ಪದಕಂಡಿ ಬಳಿಯಿಂದ ಆನೆಕಾಡು ತನಕ 25ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಲಾಗುತ್ತಿದ್ದು, ಇವರಿಗೆ ಈಗಾಗಲೇ ಸರ್ಕಾರದಿಂದ ಅಗತ್ಯ ಪರಿಹಾರ ಕೂಡ ನೀಡಲಾಗಿದೆ.ಯೋಜನಾ ಪ್ರದೇಶದಲ್ಲಿ ಸುಧಾರಿತ ರಸ್ತೆ ಸಂಪರ್ಕ ಕಾಮಗಾರಿ ಹಿನ್ನೆಲೆಯಲ್ಲಿ ತೆಪ್ಪದಕಂಡಿ ತೂಗು ಸೇತುವೆ ಎದುರು ಭಾಗದಲ್ಲಿ ಸುಮಾರು ಉದ್ದದ ತನಕ ನೆಲೆ ಕಂಡಿರುವ ಮನೆಗಳು ಹಾಗೂ ತೋಟಗಳನ್ನು ತೆರವುಗೊಳಿಸುವ ದೃಶ್ಯ ಕಂಡು ಬಂದಿದೆ.
ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಈಗಾಗಲೇ ಗಡಿ ಗುರುತು ಮಾಡಿದ್ದು ಕಟ್ಟಡಗಳ ಮಾಲೀಕರು ತೆರವುಗೊಳಿಸುತ್ತಿರುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಮೈಸೂರು ಬಳಿಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬೈಲುಕುಪ್ಪೆ ಬಳಿ ಬೈಪಾಸ್ ಮೂಲಕ ಸಾಗಿ ಟಿಬೆಟಿಯನ್ ನಿರಾಶ್ರಿತ ಶಿಬಿರ ಮೂಲಕ ರಾಣಿ ಗೇಟ್ ನಂತರ ತೆಪ್ಪದಕಂಡಿ ಬಳಿ ಗುಡ್ಡೆಹೊಸೂರು- ಸಿದ್ದಾಪುರ ಸಾಗುವ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ.
ಸೇತುವೆ, ಫ್ಲೈಓರ್ ನಿರ್ಮಾಣ:ಈ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ಹಾಗೂ ಫ್ಲೈ ಓವರ್ ಮೂಲಕ ಬಸವನಹಳ್ಳಿ ಬಳಿ ಕುಶಾಲನಗರ -ಮಡಿಕೇರಿ ಸಾಗುವ ರಸ್ತೆಯಲ್ಲಿ ಪ್ರಥಮ ಹಂತದ ಕಾಮಗಾರಿ ಕೊನೆಗೊಳ್ಳಲಿದೆ.
ಈ ಯೋಜನೆ ಮೈಸೂರು ಮಂಡ್ಯ ಮತ್ತು ಕೊಡಗು ಜಿಲ್ಲೆಯ ಮೂಲಕ ಬಯಲು ಪ್ರದೇಶ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಕೊಡಗು ಜಿಲ್ಲೆಯಲ್ಲಿ 46.85 ಹೆಕ್ಟೇರ್ ಪ್ರದೇಶದ ಅರಣ್ಯ ಮೂಲಕ ಸಾಗಲಿದೆ.ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 2.3 ಕಿ.ಮೀ. ಉದ್ದದ ರಸ್ತೆ ಮಾತ್ರ ನಿರ್ಮಾಣಗೊಳ್ಳಲಿದ್ದು ಅಂದಾಜು 13.74 ಹೆಕ್ಟೇರ್ ವಿಸ್ತೀರ್ಣದ ಭೂಮಿಯ ಅಗತ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರಿನಿಂದ ಕುಶಾಲನಗರ ತನಕ ಒಟ್ಟು 62 ಹಳ್ಳಿಗಳು ಕಾಮಗಾರಿಯ ಪ್ರಭಾವಕ್ಕೆ ಒಳಗಾಗಲಿದ್ದು ಜಿಲ್ಲೆಯಲ್ಲಿ ಕೇವಲ ಗುಡ್ಡೆ ಹೊಸೂರು ತೆಪ್ಪದ ಕಂಡಿ ವ್ಯಾಪ್ತಿಯಿಂದ 2.3 ಕಿ.ಮೀ. ಉದ್ದದ ರಸ್ತೆ ನಿರ್ಮಾಣಗೊಳ್ಳಲಿದೆ.25 ಕಟ್ಟಡಗಳಿಗೆ ಹಾನಿ:
ಸುಮಾರು 25 ಕಟ್ಟಡಗಳು ಮತ್ತು ಆಸ್ತಿ ಹಾನಿಗೆ ಒಳಗಾಗಲಿವೆ. 50ಕ್ಕೂ ಅಧಿಕ ಕುಟುಂಬಗಳು ಮನೆ, ಕಟ್ಟಡ ತೋಟ ಭೂಮಿ ಕಳೆದುಕೊಳ್ಳಲಿದ್ದು ಅವರಿಗೆ ಈಗಾಗಲೇ ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ.ತೆಪ್ಪದಕಂಡಿ ಬಳಿ ಕಾವೇರಿ ನದಿಗೆ ಬೃಹತ್ ಗಾತ್ರದ ಸೇತುವೆ ನಿರ್ಮಾಣವಾಗಲಿದೆ.
ಮೈಸೂರಿನಿಂದ ಕುಶಾಲನಗರ ಗಡಿ ತನಕ 22 ವಾಹನ ಸುರಂಗಗಳು ನಿರ್ಮಾಣವಾಗಲಿದ್ದು ವ್ಯಾಪ್ತಿಯಲ್ಲಿ ಎರಡು ವಾಹನ ಸುರಂಗ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದಾರೆ.ತೆಪ್ಪದಕಂಡಿ ಬಳಿ ರಾಜ್ಯ ಹೆದ್ದಾರಿ ಕೆಳಭಾಗದಲ್ಲಿ ಸಾಗಲಿದ್ದು ಚತುಷ್ಪಥ ರಸ್ತೆ ಫ್ಲೈಓವರ್ ಮೂಲಕ ಸಾಗಲಿದೆ. ಈ ಭಾಗದಲ್ಲಿ ಬೃಹತ್ ವೃತ್ತ ರಚನೆ ಆಗಲಿದೆ.
ಮೈಸೂರಿನಿಂದ ಕುಶಾಲನಗರ ಗಡಿ ತನಕ ಒಟ್ಟು 4128.92 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆ ನಡೆಯಲಿದ್ದು ಜಿಲ್ಲೆಯಲ್ಲಿ ಇದರ ವೆಚ್ಚ 92 ಕೋಟಿ ರು.ಗಳಾಗಿವೆ.ಹೆದ್ದಾರಿ ಕಾಮಗಾರಿಗೆ ಈಗಾಗಲೇ ಭೂ ಮತ್ತು ಆಸ್ತಿ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ ಬಹುತೇಕ ಪರಿಹಾರ ಮೊತ್ತವನ್ನು ಕೂಡ ಮನೆ ಆಸ್ತಿ ಕಟ್ಟಡ ಕಳೆದುಕೊಳ್ಳುವ ಮಾಲೀಕರಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
...........ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಕುಡಿಯುವ ನೀರಿನ ಮೂಲಗಳನ್ನು ಸ್ಥಳಾಂತರಿಸುವುದು, ಆಕಸ್ಮಿಕ ನಷ್ಟದ ಸಂದರ್ಭದಲ್ಲಿ ತಾತ್ಕಾಲಿಕ ವ್ಯವಸ್ಥೆಗಳನ್ನು ಒದಗಿಸುವುದು. ಕಾಮಗಾರಿ ಸಂದರ್ಭ ಯಾವುದೇ ರೀತಿಯ ಜಲಮೂಲಗಳು ಕಲುಷಿತ ಆಗದಂತೆ ಎಚ್ಚರ ವಹಿಸಲಾಗುವುದು.-ಪ್ರಕಾಶ್, ಹಿರಿಯ ಪರಿಸರ ಅಧಿಕಾರಿ.
....................ರಸ್ತೆ ಹೆದ್ದಾರಿ ಅಭಿವೃದ್ಧಿ ಮತ್ತು ಅಗಲೀಕರಣ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸೂಚನೆಯಂತೆ ಸಂಬಂಧಿಸಿದ ಪ್ರದೇಶಗಳಲ್ಲಿ ಎಲ್ಲಾ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಗುಡ್ಡೆ ಹೊಸೂರು ಬಳಿಯ ತೆಪ್ಪದ ಕಂಡಿ ಬಳಿ ಮನೆ ಕಟ್ಟಡಗಳನ್ನು ಹಾಗೂ ತೋಟ ತೆರವು ಕಾರ್ಯ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ.
-ಕುಡೇಕಲ್ ಗಣೇಶ್, ಸ್ಥಳೀಯರು.