ಬಿಜೆಪಿ ಟಾರ್ಗೆಟ್‌ ಸಿದ್ದು ಅಲ್ಲ, ಕಾಂಗ್ರೆಸ್‌ : ಮಲ್ಲಿಕಾರ್ಜುನ ಖರ್ಗೆ ಅವರ ಕುತೂಹಲಕಾರಿ ಹೇಳಿಕೆ

KannadaprabhaNewsNetwork | Updated : Sep 28 2024, 07:27 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇರಬಹುದು, ನಾಳೆ ಇಲ್ಲದಿರಬಹುದು. ಆದರೆ ಪಕ್ಷ ಶಾಶ್ವತವಾಗಿ ಮುಂದುವರೆಯುತ್ತದೆ. ಬಿಜೆಪಿಯವರ ಆಸಕ್ತಿ ಪಕ್ಷಕ್ಕೆ ಡ್ಯಾಮೇಜ್‌ ಮಾಡುವುದೇ ಹೊರತು ವೈಯಕ್ತಿಕ ಅಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

 ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಇರಬಹುದು, ನಾಳೆ ಇಲ್ಲದಿರಬಹುದು. ಆದರೆ ಪಕ್ಷ ಶಾಶ್ವತವಾಗಿ ಮುಂದುವರೆಯುತ್ತದೆ. ಬಿಜೆಪಿಯವರ ಆಸಕ್ತಿ ಪಕ್ಷಕ್ಕೆ ಡ್ಯಾಮೇಜ್‌ ಮಾಡುವುದೇ ಹೊರತು ವೈಯಕ್ತಿಕ ಅಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ, ಎಫ್‌ಐಆರ್‌ ಆದ ತಕ್ಷಣ ರಾಜೀನಾಮೆ ಕೊಡಬೇಕು ಎಂದಾದರೆ ಗೋಧ್ರಾ ಪ್ರಕರಣದಲ್ಲಿ ನರೇಂದ್ರ ಮೋದಿ ಅವರು ಯಾಕೆ ರಾಜೀನಾಮೆ ನೀಡಿಲ್ಲ? ಅಮಿತ್‌ ಶಾ ಅವರ ಮೇಲಿನ ಪ್ರಕರಣಗಳಲ್ಲಿ ಹೇಗೆ ನಡೆಸಿಕೊಂಡರು ಎಂದೂ ಪ್ರಶ್ನಿಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾದ ಬಳಿಕ ಹೈಕಮಾಂಡ್‌ ಮುಖ್ಯಮಂತ್ರಿಗಳ ಜತೆಗೆ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಸಿದ್ದರಾಮಯ್ಯ ಜತೆ ನಿಂತಿದ್ದೇವೆ. ಏಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆಯೇ ಹೊರತು ವೈಯಕ್ತಿಕ ಅಲ್ಲ ಎಂದರು.

ಯಾರನ್ನೇ ಆಗಲಿ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಅವರ ಇಮೇಜ್‌ಗೆ ಡ್ಯಾಮೇಜ್ ಮಾಡಿದರೆ ಅದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ಅವರ ಆಸಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುವುದೇ ಹೊರತು ವೈಯಕ್ತಿಕ ಅಲ್ಲ. ಅವರು (ಮುಖ್ಯಮಂತ್ರಿ ಸಿದ್ದರಾಮಯ್ಯ) ಇವತ್ತು ಇರಬಹುದು, ನಾಳೆ ಇಲ್ಲದೇ ಇರಬಹುದು. ಆದರೆ ಪಕ್ಷ ಮುಂದುವರೆಯುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮೂಲ ಮತಗಳನ್ನು ಹಾಳು ಮಾಡುವ ಸಲುವಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ವಿರುದ್ಧ ಚಾರ್ಜ್‌ ಶೀಟ್‌ ಆಗಿಲ್ಲ, ಆರೋಪ ಸಾಬೀತಾಗಿಲ್ಲ. ಆದರೂ ಪ್ರಕರಣದಲ್ಲಿ ಏನೂ ಇಲ್ಲದಿದ್ದರೂ ಪ್ರತಿದಿನ ಮುಡಾ ಮುಡಾ ಎನ್ನುತ್ತಿದ್ದಾರೆ. ಉದ್ಯಮಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಸಾವಿರಾರು ಕೋಟಿ ರು. ನುಂಗಿ ಹಾಕಿದ್ದಾರೆ. ಅದರ ಬಗ್ಗೆ ಚರ್ಚೆಯೇ ಮಾಡಲ್ಲ. ಸಣ್ಣ ವಿಚಾರ ಹಿಡಿದು ಎಳೆದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾವು ಸಿಎಂ ಜತೆ ಇದ್ದೇವೆ:  ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ನಿಂತಿದ್ದು, ಬೆಂಬಲ ಕೊಟ್ಟಿದ್ದೇವೆ. ಎಫ್‌ಐಆರ್‌ ಆದ ತಕ್ಷಣ ರಾಜೀನಾಮೆ ಕೊಡಬೇಕು ಎಂದಾದರೆ ಗೋಧ್ರಾ ಪ್ರಕರಣದಲ್ಲಿ ನರೇಂದ್ರ ಮೋದಿ ಅವರು ಯಾಕೆ ರಾಜೀನಾಮೆ ನೀಡಿಲ್ಲ? ಅಮಿತ್‌ ಶಾ ಅವರ ಮೇಲಿನ ಪ್ರಕರಣಗಳಲ್ಲಿ ಹೇಗೆ ನಡೆಸಿಕೊಂಡರು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

Share this article