ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ, ಪಟ್ಟಣ ಠಾಣೆ ಅಧಿಕಾರಿ ಸಿಬ್ಬಂದಿ, ಪಟ್ಟಣದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಕೌಟ್ಸ್ ಗೈಡ್ಸ್ ಮಕ್ಕಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಬೈಚನಹಳ್ಳಿ ಬಳಿಯಿಂದ ಮೆರವಣಿಗೆ ಮೂಲಕ ಮುಖ್ಯರಸ್ತೆಗಳಲ್ಲಿ ತೆರಳಿ ಜನರಿಗೆ ರಸ್ತೆ ನಿಯಮಗಳ ಬಗ್ಗೆ ಸಮರ್ಪಕ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಿದರು.
ಮಾರಿಯಮ್ಮ ದೇವಾಲಯ ಬಳಿ ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ಅವರು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಒಂದು ವಾರ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ರಸ್ತೆ ಸಂಚಾರಿ ಸುರಕ್ಷತಾ ಕಾರ್ಯಕ್ರಮಗಳ ಬಗ್ಗೆ ಅರಿವು ಜಾಗೃತಿ ಮೂಡಿಸುವ ಚಟುವಟಿಕೆಗಳು ನಡೆಯಲಿವೆ ಎಂದರು.ನೂರಾರು ವಿದ್ಯಾರ್ಥಿಗಳು ಸೂಚನಾ ಫಲಕಗಳ ಜೊತೆಗೆ ಕುಶಾಲನಗರ ಮುಖ್ಯ ರಸ್ತೆ, ರಥ ಬೀದಿ ಮತ್ತು ಇತರ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಸಂಚಾರಿ ವ್ಯವಸ್ಥೆಯ ಬಗ್ಗೆ ಮತ್ತು ಸಮರ್ಪಕವಾಗಿ ನಿಯಮ ಪಾಲಿಸುವ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಡೆಯಿತು.
ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಸಂಚಾರಿ ಠಾಣಾಧಿಕಾರಿ ಗಣೇಶ್, ಸಹಾಯಕ ಠಾಣಾಧಿಕಾರಿಗಳಾದ ಸುಬ್ರಮಣ್ಯ, ಸುಕನ್ಯ, ಸ್ಕೌಟ್ಸ್ ಗೈಡ್ಸ್ ತಾಲೂಕು ಅಧ್ಯಕ್ಷರಾದ ಡಾ. ಪ್ರವೀಣ್ ಮತ್ತು ಪದಾಧಿಕಾರಿಗಳು, ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ ಸಿ ಸಿ ಅಧಿಕಾರಿ ಮಹೇಂದ್ರ ಮತ್ತಿತರರು ಇದ್ದರು.