ಕುಷ್ಟಗಿ: ಸರ್ಕಾರಿ ಸೇವೆ ಹಾಗೂ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಪ್ರಜಾಸೇವಾ ಇಲಾಖೆ, ತಾಲೂಕಾಡಳಿತ ವತಿಯಿಂದ ನಡೆದ ಕುಷ್ಟಗಿ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ವಿವಿಧ ಇಲಾಖೆಗಳ 75 ಅರ್ಜಿ–ಅಹವಾಲುಗಳನ್ನು ಸ್ವೀಕರಿಸಲಾಯಿತು.
ತಾಪಂ ಇಒ ಅಮರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಜವಾಬ್ದಾರಿ ಎಲ್ಲ ಇಲಾಖೆಗಳ ಮೇಲಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ್ ಗೊಟೂರು ಅವರು ಹಾವು ಕಡಿತ ತಡೆಗಟ್ಟುವಿಕೆ, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಹಾವು ಕಡಿತವಾದ ಸಂದರ್ಭದಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವ ಕುರಿತು ಮಾಹಿತಿ ನೀಡಿದರು.ಒಟ್ಟು 75 ಅರ್ಜಿ ಸಲ್ಲಿಕೆ: ಆಂದೋಲನದಲ್ಲಿ ಕಂದಾಯ ಇಲಾಖೆಗೆ 46, ಪುರಸಭೆಗೆ 13, ಲೋಕೋಪಯೋಗಿ ಇಲಾಖೆಗೆ 4, ಸಾರಿಗೆ ಇಲಾಖೆಗೆ 2, ಕಾರ್ಮಿಕ ಇಲಾಖೆಗೆ 1, ಸಿಡಿಪಿಒ ಇಲಾಖೆಗೆ 2, ಸಮಾಜ ಕಲ್ಯಾಣ ಇಲಾಖೆಗೆ 1, ಜೆಸ್ಕಾಂಗೆ 3 ಹಾಗೂ ತಾಪಂಗೆ 3 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 75 ಅರ್ಜಿ–ಅಹವಾಲುಗಳನ್ನು ಸ್ವೀಕರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಗ್ರೇಡ್-2 ತಹಸೀಲ್ದಾರ್ ರಜನಿಕಾಂತ್ ಕೆಂಗೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಬಸವರಾಜ್, ಎಇಇ ಸುಧಾಕರ ಕಾತರಕಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ಪ್ರಭಾರಿ ಬಿಇಒ ಯಮನಪ್ಪ ಚೂರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ಇದ್ದರು.