ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕುವೆಂಪು ಕರ್ನಾಟಕ ಮತ್ತು ಕನ್ನಡ ಸಾಹಿತ್ಯದ ಅಸ್ಮಿತೆ ಆಗಿದ್ದಾರೆ. ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ತಿಳಿಸಿದರು.ಅವರು ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾಗೃತ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಸಮಾಗಮ 2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯ ಓದಿನಿಂದ ವಿವೇಚನೆ ಬೆಳೆಯುತ್ತದೆ ಮತ್ತು ಹಸನಾಗುತ್ತದೆ. ಯಾವುದೇ ವಿಚಾರವಿರಲಿ ಅದನ್ನು ಒರೆಗಲ್ಲಿಗೆ ಹಚ್ಚಬೇಕು. ಯಾರೋ ಹೇಳಿದ್ದನ್ನು ಸುಮ್ಮನೆ ಕೇಳಬಾರದು. ಅಂಧಾನುಕರಣೆ ಎಂದಿಗೂ ಒಳಿತಲ್ಲ. ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ವಿಚಾರಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಆಗಲಿವೆ ಎಂದರುವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಮಾತನಾಡಿ, ಸಾಹಿತ್ಯ ಹೇಗೆ ಬದುಕಬೇಕು ಎಂಬುದನ್ನು ಮತ್ತು ವಿಜ್ಞಾನ ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತದೆ. ಕನ್ನಡ ಅಭಿಮಾನ ನವಂಬರ್ ತಿಂಗಳಿಗಷ್ಟೇ ಸೀಮಿತ ಆಗಬಾರದು. ಕನ್ನಡ ಪತ್ರಿಕೆ, ಪುಸ್ತಕಗಳ ಓದು ಕನ್ನಡ ಅಭಿವೃದ್ಧಿಯ ಸೂಚ್ಯಂಕವನ್ನು ತೋರಿಸುತ್ತವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ನೂರು ಭಾಷೆಗಳು ನಾಲಿಗೆ ಮೇಲೆ ಇದ್ದರೂ, ಮನದಾಳದ ಭಾಷೆ ಕನ್ನಡವಾಗಿರಲಿ. ಗೋಕಾಕ್ ಚಳುವಳಿಗೆ ಡಾ.ರಾಜ್ ಕುಮಾರ್ ಜೀವತುಂಬಿದರು. ಗೋಕಾಕ್ ವರದಿ ಜಾರಿಯಿಂದ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಯಿತು ಎಂದರು.ವೈದ್ಯೆ ಡಾ. ಇಂದಿರಾ ಮಾತನಾಡಿ, ಹದಿಹರೆಯದಲ್ಲಿ ಆಗಾಧವಾದ ಶಕ್ತಿಯಿರುತ್ತದೆ. ಆ ಶಕ್ತಿ ದೇಹದಲ್ಲಿ ಮತ್ತು ಮಿದುಳಿನಲ್ಲಿ ಇರುತ್ತದೆ. ಹದಿಹರೆಯದವರಿಗೆ ಬೆಳೆಯುವ ವಯಸ್ಸಿನಲ್ಲಿ ಪೌಷ್ಟಿಕಾಹಾರ ಪದ್ದತಿ ಬಗ್ಗೆ ಅರಿವು ಇರಬೇಕು ಎಂದರು. 
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ, ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಕಜಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ನಿವೃತ್ತ ಶಿಕ್ಷಕ ವಿ.ಎಸ್.ಹೆಗಡೆ, ತಾ. ಕಸಾಪ ಕಾರ್ಯದರ್ಶಿ ಜಯರಾಮ್, ಡಾ.ಮುನಿರಾಜು, ಎಚ್.ಎನ್.ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.ಫೋಟೋ-3ಕೆಡಿಬಿಪಿ4- ದೊಡ್ಡಬಳ್ಳಾಪುರದಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ ವಿಜ್ಞಾನ ಸಮಾಗಮ ಕಾರ್ಯಕ್ರಮದಲ್ಲಿ ಡಾ.ಎ.ಓ.ಆವಲಮೂರ್ತಿ ಮತ್ತಿತರರು ಭಾಗಿಯಾದರು.