ತೇಗೂರಿನ ಗಿರಿಧಾಮ ಬುದ್ಧ ವಿಹಾರದಲ್ಲಿ ಆಚರಣೆ
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ, ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಬೌದ್ಧ ಮಹಾಸಭಾ ಸಹಯೋಗದಲ್ಲಿ ಡಿ. 29ರಂದು ಮಧ್ಯಾಹ್ನ 2.30ಕ್ಕೆ ತೇಗೂರಿನ ಗಿರಿಧಾಮ ಬುದ್ಧ ವಿಹಾರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಮುಖ್ಯಸ್ಥ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.
ಬುದ್ಧ ವಿಹಾರದಲ್ಲಿ ಬುದ್ಧ ಬಸವ ಅಂಬೇಡ್ಕರ್ ಸೇರಿದಂತೆ ಮಹಾನ್ ದಾರ್ಶನಿಕರ ಜಯಂತಿ ನಡೆಸುವ ಮೂಲಕ ಈ ಸ್ಥಳವನ್ನು ಜ್ಞಾನ ಪ್ರಸಾರ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುವೆಂಪು ಜನ್ಮ ದಿನಾಚರಣೆ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಬಿ. ಚಂದ್ರೇಗೌಡ ಕುವೆಂಪು ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ವೈದ್ಯ ಡಾ. ಜೆ.ಪಿ.ಕೃಷ್ಣೇಗೌಡ ಕುವೆಂಪು ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಶಾಸಕರಾದ ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪ್ರಮುಖ ರಾದ ಡಾ. ಅಂಶುಮಂತ್, ಎ.ಎನ್.ಮಹೇಶ್, ಎಂ.ಸಿ.ಶಿವಾನಂದಸ್ವಾಮಿ, ಸೂರಿ ಶ್ರೀನಿವಾಸ್, ರವೀಶ್ ಬಸಪ್ಪ, ಎಚ್.ಎಚ್.ದೇವರಾಜ್, ಎಚ್. ಎಸ್.ಮಂಜಪ್ಪ, ಗುರುಶಾಂತಪ್ಪ, ಎಚ್.ಎಂ.ರುದ್ರಸ್ವಾಮಿ, ಅನಿಲ್ ಕುಮಾರ್, ಪರಮೇಶ್ವರ್ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಪ್ರಮುಖರಾದ ಹರಿಯಪ್ಪ, ಕೃಷ್ಣಯ್ಯ, ದಲಿತ ಸಂಘಟನೆಗಳ ಮುಖಂಡರಾದ ಮರ್ಲೆ ಅಣ್ಣಯ್ಯ, ಹುಣಸೆಮಕ್ಕಿ ಲಕ್ಷ್ಮಣ್, ದಂಟರಮಕ್ಕಿ ಶ್ರೀನಿವಾಸ್, ಗ್ರೀನ್ ಬ್ರಿಗೇಡ್ ಅಧ್ಯಕ್ಷ ಹರೀಶ್ ಮಿತ್ರ ಉಪಸ್ಥಿತರಿದ್ದರು.