ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಚನ್ನಪಟ್ಟಣ: ಮಹಾ ದಾರ್ಶನಿಕರಾಗಿದ್ದ ಕುವೆಂಪು ನಮ್ಮ ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶ ಸಾರಿದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ನಾವೆಲ್ಲ ಸಾಗಬೇಕಿದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಚನ್ನಪಟ್ಟಣ: ಮಹಾ ದಾರ್ಶನಿಕರಾಗಿದ್ದ ಕುವೆಂಪು ನಮ್ಮ ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶ ಸಾರಿದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ನಾವೆಲ್ಲ ಸಾಗಬೇಕಿದೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.

ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿ ಡಾ.ನಾಗರಾಜ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರ ಜಗತ್ತಿನ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕುವೆಂಪು ಅವರ ಆತ್ಮಚರಿತ್ರೆ ನೆನಪಿನ ದೋಣಿಯಲ್ಲಿ ಚನ್ನಪಟ್ಟಣದ ಹೆಸರು ದಾಖಲಾಗಿರುವುದು ಬಹುದೊಡ್ಡ ಹೆಗ್ಗಳಿಕೆ. ವೈಚಾರಿಕ ತತ್ವದ ನೆಲೆಯಲ್ಲಿ ಸಮಾಜವನ್ನು ಪ್ರಭಾವಿಸಿ, ಪ್ರೇರೇಪಿಸಿದವರು. ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ವಿಶ್ವಮಾನವತೆಯತ್ತ ಹೆಜ್ಜೆ ಹಾಕಬೇಕು ಎಂದು ತಿಳಿಸಿದರು.

ಕನ್ನಡ ಉಪನ್ಯಾಸಕಿ ಶ್ವೇತಾಮಣಿ ಮಾತನಾಡಿ, ಕುವೆಂಪು ಅವರ ಕಿಂದರಿ ಜೋಗಿ ಮಕ್ಕಳ ಕವಿತೆಯಿಂದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದವರೆಗೂ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಈ ಜಗತ್ತು ಕಂಡ ದೈತ್ಯ ಪ್ರತಿಭೆ ಕುವೆಂಪು. ಕನ್ನಡಿಗರು ಆತ್ಮ ಸ್ಥೈರ್ಯ, ಸ್ವಾಭಿಮಾನ ಹೊಂದಲು ಕುವೆಂಪು ಬಹುಮುಖ್ಯ ಕಾರಣರು. ಕುವೆಂಪು ಅವರ ವಿಶ್ವಮಾನವ ಸಂದೇಶ, ಸ್ತ್ರೀ ಸಂವೇದನೆ, ಸಮಸಮಾಜದ ಆಶಯ, ಮಂತ್ರ ಮಾಂಗಲ್ಯ ಮುಂತಾದ ಪರಿಕಲ್ಪನೆಗಳನ್ನು ಕಟ್ಟಿ ಕೊಟ್ಟ ಮಹಾ ಮಾನವತಾವಾದಿ ಕುವೆಂಪು ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಶಶಿಧರ್ ಮಾತನಾಡಿ, ಪ್ರಕೃತಿ ಸೌಂದರ್ಯದ ವರ್ಣನೆಯಲ್ಲಿ ಕುವೆಂಪು ಅವರು ಎತ್ತಿದ ಕೈ. ಕಾದಂಬರಿಯಲ್ಲಿನ ಸಣ್ಣಪುಟ್ಟ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಕುವೆಂಪು ಅವರ ಸಾಹಿತ್ಯಕ್ಕೆ ಸಾಟಿಯೇ ಇಲ್ಲ. ಪ್ರಸ್ತುತ ಬದುಕಿಗೆ ಕುವೆಂಪು ಅವರ ಸಾಹಿತ್ಯದ ಅವಶ್ಯಕತೆ ಹೆಚ್ಚಾಗಿದೆ ಎಂದು ತಿಳಿಸಿದರು.

ವೇದಿಕೆ ಅಧ್ಯಕ್ಷೆ ಡಾ.ರಾಜಶ್ರೀ ಮಾತನಾಡಿ, ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರ ಪುಸ್ತಕ ಪ್ರಕಟಣೆ ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ನಮ್ಮ ವೇದಿಕೆ ಸಹಕಾರ ನೀಡುತ್ತದೆ. ದಿವಂಗತ ಕವಿ ಡಾ. ನಾಗರಾಜ್ ಅವರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ವೇದಿಕೆ ಸಾಗುತ್ತಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ವಸಂತಕುಮಾರ್, ಭಾರತ್ ವಿಕಾಸ್ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಿ. ಗುರುಮಾದಯ್ಯ, ಗಮಕಿ ಡಿ.ಪುಟ್ಡಸ್ವಾಮಿಗೌಡ, ನಿವೃತ್ತ ಸಬ್ ಇನ್ಸ್ಪೆಕ್ಟರ್ ರಾಮೇಗೌಡ, ಡಾ. ರಂಗನಾಥ, ಭಾರತ ಸೇವಾದಳದ ಶಿವಕುಮಾರ್, ಹಿರಿಯ ಕವಯತ್ರಿ ಎಂ.ಎಸ್. ಆಶಾಲತಾ, ಭಾವಿಪ ಕಾರ್ಯದರ್ಶಿ ವಿ.ಟಿ. ರಮೇಶ್, ಹಿರಿಯ ಕವಿ ಕೂರಣಗೆರೆ ಕೃಷ್ಣಪ್ಪ, ಎಂ.ಎನ್. ಕೃಷ್ಣಕುಮಾರ್, ಕನ್ನಡ ಶಿಕ್ಷಕಿ ಪೂರ್ಣಿಮಾ, ಭಾಗ್ಯ ಗುರುಮಾದಯ್ಯ, ವಾಸು ಟಿ, ಶಿಕ್ಷಕರಾದ ಚನ್ನಪ್ಪ, ಕರಿಯಪ್ಪ, ವಿಜೇಂದ್ರ ಮುಂತಾದವರು ಹಾಜರಿದ್ದರು.

ಗಾಯಕಿ ಚಂದ್ರಿಕಾ, ಡಿ.ಪುಟ್ಟಸ್ವಾಮಿಗೌಡ ಕುವೆಂಪು ಗೀತೆಗಳ ಗಾಯನ ನಡೆಸಿಕೊಟ್ಟರು.ಪೊಟೋ೭ಸಿಪಿಟಿ೬:

ಚನ್ನಪಟ್ಟಣದಲ್ಲಿ ಡಾ.ನಾಗರಾಜ್ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು.

Share this article