ಎಲ್‌ ಆ್ಯಂಡ್‌ ಟಿ ಕಂಪನಿಗೆ ₹50 ಲಕ್ಷ ದಂಡದ ಎಚ್ಚರಿಕೆ

KannadaprabhaNewsNetwork | Published : Jun 1, 2025 1:50 AM
ಶೂನ್ಯ ವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಸದಸ್ಯರು, ಪಕ್ಷಾತೀತವಾಗಿ ಎಲ್ಲ ಸದಸ್ಯರು ಎಲ್‌ಆ್ಯಂಡ್‌ಟಿ ಕಾಮಗಾರಿಯಲ್ಲಿನ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
Follow Us

ಹುಬ್ಬಳ್ಳಿ: ನಿಗದಿತ ಅವಧಿಯಲ್ಲಿ ನಳ ಸಂಪರ್ಕ ಮಾಡದೇ ಇರುವುದು. ನೀರಿನ ಬಿಲ್‌ ನೀಡದೇ ಇರುವುದು. ಕಲುಷಿತ ನೀರು ಪೂರೈಕೆ ಸೇರಿದಂತೆ ಎಲ್‌ಆ್ಯಂಡ್‌ಟಿ ಕಾಮಗಾರಿ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು. ಬಳಿಕ ಎಲ್‌ಆ್ಯಂಡ್‌ಟಿ ವಿಷಯವಾಗಿಯೇ ವಿಶೇಷ ಸಭೆ ಕರೆಯಲು ನಿರ್ಧರಿಸಲಾಯಿತು.

ಶೂನ್ಯ ವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಸದಸ್ಯರು, ಪಕ್ಷಾತೀತವಾಗಿ ಎಲ್ಲ ಸದಸ್ಯರು ಎಲ್‌ಆ್ಯಂಡ್‌ಟಿ ಕಾಮಗಾರಿಯಲ್ಲಿನ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಎಲ್‌ಆ್ಯಂಡ್‌ಟಿ ಅಧಿಕಾರಿಗಳು ಸಭೆಗೆ ಬಂದಿದ್ದರೂ ಸದಸ್ಯರ ಉತ್ತರ ನೀಡಲು ತಡವಡಿಸಿದರು. ನಳ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದವರೂ ಕಚೇರಿ ಅಲೆಯುತ್ತಿದ್ದಾರೆ. ಪಿಎಡಿ ನಂಬರ್‌ಗೆ ಎರಡು ಸಂಪರ್ಕ ಕಲ್ಪಿಸಲು ಆಯುಕ್ತರು ಆದೇಶಿಸಿದಾಗೂ ನಿರ್ಲಕ್ಷ್ಯ ಮಾಡಲಾಗಿದೆ. ನಳ ಸಂಪರ್ಕ ಪಡೆಯಲು ಐದಾರು ತಿಂಗಳು ಬೇಕಾ? ಆದ್ದರಿಂದ ಸರಳೀಕರಣಗೊಳಿಸಬೇಕೆಂದು ಸಂತೋಷ ಚವ್ಹಾಣ ಸೇರಿದಂತೆ ಎಲ್ಲ ಸದಸ್ಯರು ಒತ್ತಾಯಿಸಿದರು. ಅಲ್ಲದೇ, ನಿರಂತರ ನೀರು ಯೋಜನೆ ಅನುಷ್ಠಾನದಲ್ಲಿ ಸಾಕಷ್ಟುವ್ಯತ್ಯಾಸ ಸಮರ್ಪಕ ನಿರ್ವಹಣೆ ಮಾಡದ ಕಂಪನಿ ಮತ್ತು ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಲೋಪ ವೆಸಗಿದ ಕಂಪನಿಗೆ ದಂಡ ವಿಧಿಸಬೇಕೆಂದು ಆಗ್ರಹಿಸಿದರು.

50 ಲಕ್ಷ ದಂಡ:

ನಳ ಸಂಪರ್ಕ ಕಲ್ಪಿಸುವುದು ಸರಳೀರಕರಣಗೊಳಿಸುವುದು, ಸಮರ್ಪಕ ನೀರು ಪೂರೈಕೆಗೆ ಕ್ರಮಕೈಗೊಳ್ಳದಿದ್ದರೆ, ₹50 ಲಕ್ಷ ದಂಡ ವಿಧಿಸಲಾಗುವುದು ಎಂದು ಉಪಮೇಯರ್‌ ಎಚ್ಚರಿಸಿದರು.ಅಲ್ಲದೇ, ಆಯುಕ್ತರು ಪ್ರತ್ಯೇಕ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಆದೇಶಿಸಿದರು. ಚರ್ಚೆಯಲ್ಲಿ ಕಾಂಗ್ರೆಸ್‌ ಸದಸ್ಯರಾದ ಸುವರ್ಣ ಕಲ್ಲಕುಂಟ್ಲಾ, ರಾಜಶೇಖರ ಕಮತಿ, ಆರೀಫ್‌ ಭದ್ರಾಪುರ, ಎಐಎಂಐಎಂನ ನಜೀರ್‌ ಹೊನ್ಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಫುಟ್‌ಪಾತ್‌ ಅತಿಕ್ರಮಣ:

ಫುಟ್‌ಪಾತ್‌ ಅತಿಕ್ರಮಣದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಪಾಲಿಕೆ ಸದಸ್ಯ ಬೀರಪ್ಪ ಗಮನ ಸೆಳೆಯುವ ಸೂಚನೆ ಸಭೆಗೆ ತಂದರು. ಅತೀಕ್ರಮಣದ ಬಗ್ಗೆ ತೀವ್ರ ಚರ್ಚೆ ನಡೆಸಿದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಇಮ್ರಾನ ಯಲಿಗಾರ, ನಜೀರಅಹ್ಮದ ಹೊನ್ನಾಳ ಮಾತನಾಡಿ, ಫುಟ್‌ಪಾತ್‌ ಅತೀಕ್ರಮಣದಿಂದ ಪಾದಚಾರಿಗಳ ರಸ್ತೆಯಲ್ಲಿ ಓಡಾಡುವಂತಾಗಿದೆ. ಹಾಗಾಗಿ ಫುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸಲು ಪಾಲಿಕೆ, ಪೊಲೀಸ್‌ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಟಾಸ್ಕ್‌ಪೋರ್ಸ್‌ ರಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಆಗ ಉಪಮೇಯರ್‌, ಪಾಲಿಕೆ ಆಯುಕ್ತರು, ಪೊಲೀಸ ಅಧಿಕಾರಿಗಳ ಜತೆಗೆ ಸಭೆ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆದೇಶಿಸಿದರು.

ಮಂಗಗಳ ಕಾಟ, ಸಮಸ್ಯೆ ಉಂಟು ಮಾಡುತ್ತಿರುವ ಮರ ತೆರವು ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗ ಬಗೆಹರಿಸಲು ಕ್ರಮವಹಿಸಬೇಕೆಂದು ಸೂಚಿಸಿದರು. ಅದರಂತೆ ಋುತುಮಾನದಲ್ಲಿ ಆಗುತ್ತಿರುವ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ವಾರ್ಡ್‌ವಾರು ಅನುದಾನ ನೀಡುವುದು, ಶೌಚಾಲಯ ನಿರ್ಮಾಣ, ಕೆಂಪಗೇರಿ ಕೆರೆ ನಿರ್ವಹಣೆ, ಆಟೋ,ಟಿಪ್ಪರ ನಿರ್ವಹಣೆ, ಎಸ್ಸಿಎಸ್ಪಿ ಹಾಗೂ ಟಿಎಸ್‌ಪಿ ಅನುದಾನ ವಿನಿಯೋಗ ಸೇರಿದಂತೆ ಹತ್ತಾರು ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.