ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಯಲ್ಲಿ ಅನಾವರಣಗೊಂಡವು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕಸದ ರಾಶಿ ವಿಲೇವಾರಿ, ಹದಗೆಟ್ಟ ರಸ್ತೆಗಳು, ವಿದ್ಯುತ್ ದೀಪಗಳು ಉರಿಯದಿರುವುಕ್ಕೆ, ಕುಡಿಯುವ ನೀರಿನ ಸಮಸ್ಯೆ, ಕ್ರೀಡಾಂಗಣ ಮತ್ತು ಸಭಾಂಗಣದ ಕೊರತೆ ವಿಜ್ಞಾನ ವಿಷಯ ಪಠ್ಯವಾಗಿದ್ದರೂ ಲ್ಯಾಬ್ನಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಶಾಲೆಗೆ ವಾಹನಗಳ ಅತೀವೇಗ ಹಾಗೂ ಅಡ್ಡಾದಿಡ್ಡಿ ಪಾರ್ಕಿಂಗ್ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳ ಕೊರತೆಯ ಬಗ್ಗೆ 7 ವಾರ್ಡ್ಗಳನ್ನೊಳ್ಳಗೊಂಡ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆಯಲ್ಲಿ ಅನಾವರಣಗೊಂಡವು.ಗುರುವಾರ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಸರ್ಕಾರಿ ಶಾಲಾವರಣ ಪುಂಡಪೋಕರಿಗಳ ಹಾವಳಿಯಿಂದ ಕೂಡಿದ್ದು ಕಿಟಕಿ ಬಾಗಿಲುಗಳನ್ನು ಮುರಿಯುವುದು ಹೆಂಚುಗಳನ್ನು ಒಡೆದುಹಾಕುತ್ತಿದ್ದು ಅತ್ಯಂತ ಶೀಘ್ರದಲ್ಲಿ ಸಿಸಿ ಕ್ಯಾಮೆರಗಳನ್ನು ಹಾಳುಗೆಡವಿದ್ದು ಸಿಸಿ ಕ್ಯಾಮೆರಗಳನ್ನು ಸುಸ್ಥಿಯಲ್ಲಿ ಇಡುವಂತೆ ಆಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್ ಮಾತನಾಡಿ, ಶಾಲಾ ಮೂಲಸೌಕರ್ಯದ ಕುರಿತು ನಮಗೆ ಅರಿವಿದೆ. ಆದ್ಯತೆಯ ಮೇರೆಗೆ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.ಗದ್ದೆಹಳ್ಳ ಸಂಯುಕ್ತ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಕ್ಕಳ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಡಿ.1 ರಿಂದ ವಸತಿ ನಿಲಯ ಪುನಾರಂಭಗೊಳ್ಳಲಿದ್ದು, ನೂತನ ಟ್ಯಾಂಕ್ ಕಾರ್ಯಾರಂಭ ಮಾಡುವವರೆಗೆ ಹಾಸ್ಟೆಲ್ ನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು. ಅಕ್ಷರ ದಾಸೋಹ ಕೊಠಡಿಯ ಬಾಗಿಲು ಮುರಿದು ಹೋಗಿದೆ. ಇದರಿಂದ ನಾಯಿ ಬೆಕ್ಕುಗಳು ಅಕ್ಷರ ದಾಸೋಹ ಆಹಾರ ಸಾಮಗ್ರಿಗಳನ್ನು ಹಾಳುಗೆಡವುತ್ತಿದೆ. ಸಂಜೆಯ ವೇಳೆ ಕಿಡಿಗೇಡಿ ಪುಂಡಾ ಪೋಕರಿಗಳು ಶಾಲೆಯ ಆವರಣದಲ್ಲಿ ಆನೈತಿಕ ಚಟುವಟಿಕೆ ಮದ್ಯ, ಧೂಮಪಾನ ಸೇವಿಸಿ ಅಶುಚಿತ್ವಗೊಳಿಸುತ್ತಿದ್ದಾರೆ. ಶಾಲೆಯ ಶೌಚಾಲಯದ ಗುಂಡಿ ತೆರೆದುಕೊಂಡಿದ್ದು ಅಪಾಯ ಸಂಭವಿಸುವ ಮುಂಚಿತವಾಗಿ ಮುಚ್ಚುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಸುನಿಲ್ಕುಮಾರ್ ಈ ಎಲ್ಲಾ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಖಚಿತ ಭರವಸೆ ನೀಡಿದರು. ಗ್ರಾಮ ಸಭೆಗೆ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯಿತಿ ಅಭಿವೃಧಿ ಅಧಿಕಾರಿ ವಿ.ಜಿ.ಲೋಕೇಶ್, ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿಗಳು ಕಾರ್ಯಾಚರಿಸುತ್ತಿದ್ದು ಅವುಗಳ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರ ಬೇಡಿಕೆಗಳ ಅನುಗುಣವಾಗಿ ಪರಿಗಣಿಸಿ ಅವುಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆದು ತಮ್ಮ ಕಾರ್ಯವೈಖರಿಯನ್ನು ನಡೆಸಲಾಗುತ್ತದೆ. ಅದರಂತೆ ಮಕ್ಕಳ ಗ್ರಾಮ ಸಭೆಯನ್ನು ಅಯೋಜಿಸುವ ಮಕ್ಕಳ ಹಕ್ಕುಗಳ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಕ್ಕಳ ಗ್ರಾಮಸಭೆಯ ಮಹತ್ವತೆಯ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು. ಉದಯಕುಮಾರ್, ಸಿಂಚನ, ಸುಧಾ, ವಿಷ್ಣು, ಇರ್ಫಾನ್, ರಶೀದ್, ರಮೀಜ ಫಾತೀಮಾ, ಗ್ರೀಷ್ಮ, ಕೃತಿಕ, ಸಹನಾ ಫಾತಿಮ ಮುಂತಾದವರು ಸಮಸ್ಯೆಗಳ ಸಭೆಯಲ್ಲಿ ಹೇಳುವ ಮೂಲಕ ಗಮನಸೆಳೆದರು.ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜೀವನ್ ವಹಿಸಿದ್ದರು.ಎಂ.ಬಿ.ಸುಮತಿ ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಮಹಿಳಾ ಮುಖ್ಯ ಪೇದೆ ಮಕ್ಕಳ ರಕ್ಷಣೆ ಮತ್ತು ಕಾನೂನು ಬಗ್ಗೆ ಮಾಹಿತಿ ನೀಡಿದರು. ಸಮಾರಂಭದ ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ವಸಂತಿ, ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಈಶ, ಪ್ರೌಢಶಾಲಾ ಶಿಕ್ಷಕಿ ಜಯಶ್ರೀ, ಪ್ರಕಾಶ್, ಶಾಲಾ ಶಿಕ್ಷಕರಾದ ಮಂಜುನಾಥ್, ಸೌಭಾಗ್ಯ, ಸತೀಶ್, ರೂಪಕಲಾ, ಪಂಚಾಯಿತಿ ಲೆಕ್ಕಪರಿಶೋಧಕಿ ಚಂದ್ರಕಲಾ, ಸಿಬ್ಬಂದಿ ಸಂದ್ಯಾ, ಮಂಜುನಾಥ್, ಶ್ರೀನಿವಾಸ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.