ಇಂದು ಜನಪರ ರಾಜಕಾರಣಿಗಳ ಕೊರತೆ: ಮಹೇಶ್‌ ಜೋಶಿ ಬೇಸರ

KannadaprabhaNewsNetwork | Published : Oct 21, 2024 12:44 AM

ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಜನರು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಭಾಷೆ ಪ್ರತಿ ಮನೆ ಮನೆಯ ಜನರ ಹೃದಯದ ಅಂತರಾಳಕ್ಕೆ ತಲುಪಲಿದೆ .

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಸ್ತುತ ದಿನಗಳಲ್ಲಿ ಜನಪರ ಮತ್ತು ಅಭಿವೃದ್ಧಿ ದೃಷ್ಟಿಕೋನವನ್ನು ಹೊಂದಿದ ರಾಜಕಾರಣಿಗಳ ಕೊರತೆ ಜಿಲ್ಲೆಯನ್ನು ಕಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಕೀರ್ತಿಶೇಷರಾದ ಎಚ್.ಕೆ. ವೀರಣ್ಣಗೌಡ. ಕೆ.ವಿ. ಶಂಕರೇಗೌಡ. ಎಸ್‌.ಸಿ.ಮಲ್ಲಯ್ಯ, ಎಸ್.ಎಂ. ಕೃಷ್ಣ. ಅಂಬರೀಶ್. ಸಜ್ಜನ ರಾಜಕಾರಣದ ಮೂಲಕ ಜಿಲ್ಲೆಗೆ ಮೌಲ್ಯಗಳನ್ನು ತಂದು ಕೊಟ್ಟಿದ್ದರು. ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಜಿಲ್ಲೆಗೆ ಮೆರುಗನ್ನು ತಂದುಕೊಟ್ಟಿದ್ದರು. ಅಲ್ಲದೆ ಈ ಎಲ್ಲರೂ ಅಭಿವೃದ್ಧಿಪರವಾದ ಚಿಂತನೆ ಹೊಂದಿದ್ದರು. ಈಗ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಚಿಂತಿಸುವ ರಾಜಕಾರಣಿ ಇಲ್ಲದ ಕಾರಣ ಅಭಿವೃದ್ಧಿ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ತಿಳಿಸಿದರು.

ಮಂಡ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಜನರು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡ ಭಾಷೆ ಪ್ರತಿ ಮನೆ ಮನೆಯ ಜನರ ಹೃದಯದ ಅಂತರಾಳಕ್ಕೆ ತಲುಪಲಿದೆ ಎಂದು ಹೇಳಿದರು.

ಭರದ ಸಿದ್ಧತೆ: ಜಿಲ್ಲಾ ಕಾರ್ಯಕಾರಿ ಸಮಿತಿ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೆರುಗು ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕು ಕಸಾಪ ಕೆ.ಎಸ್. ಸುನಿಲ್ ಕುಮಾರ್. ತಹಸೀಲ್ದಾರ್ ಡಾ. ಸ್ಮಿತಾರಾಮು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ. ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ. ತಾಲೂಕು ಆರೋಗ್ಯ ಅಧಿಕಾರಿ ಡಾ. ರವೀಂದ್ರಗೌಡ, ಶಿಶು ಅಭಿವೃದ್ಧಿ ಅಧಿಕಾರಿ ನಾರಾಯಣ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ. ಕೋಶಾಧ್ಯಕ್ಷ ಅಪ್ಪಾಜಯ್ಯ. ಗೌರವ ಕಾರ್ಯದರ್ಶಿ ಪಣ್ಣೆ ದೊಡ್ಡಿ ಹರ್ಷ, ಮಾಜಿ ಅಧ್ಯಕ್ಷ ಡಿ.ಪಿ.ಸ್ವಾಮಿ. ಶೌಕತ್ಅಲಿ, ಮಹದೇವಯ್ಯ. ಮಾರಸಿಂಗನಹಳ್ಳಿ ರಾಮಚಂದ್ರ. ಅಪೂರ್ವ ಚಂದ್ರ. ವಿ.ಸಿ. ಉಮಾಶಂಕರ . ಪ್ರೊಫೆಸರ್ ಬೋರೇಗೌಡ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.