ಶವಸಂಸ್ಕಾರಕ್ಕೆ ಜಾಗದ ಕೊರತೆ: ರೊಚ್ಚಿಗೆದ್ದ ಗ್ರಾಮಸ್ಥರು

KannadaprabhaNewsNetwork |  
Published : Sep 07, 2025, 01:00 AM IST
ಶಿಕಾರಿಪುರ ತಾಲೂಕಿನ ಹುಲ್ಲಿನಕಟ್ಟೆ ಗ್ರಾಮಸ್ಥರು ದಹಿಸಲು ಕಟ್ಟಿಗೆರಾಶಿ ಹಾಕಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಕ್ಕೆ ತೆರಳಿದಾಗ ಸುಳಿವು ಅರಿತ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ಪ್ರತಿರೋಧಕ್ಕೆ ಪ್ರತೀಕಾರವಾಗಿ ಶವವನ್ನು ರಾಜ್ಯ ರಸ್ತೆ ಹೆದ್ದಾರಿಯಲ್ಲಿಯೇ ದಹಿಸಲು ಮುಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಹುಲ್ಲಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಕ್ಕೆ ತೆರಳಿದಾಗ ಸುಳಿವು ಅರಿತ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ಪ್ರತಿರೋಧಕ್ಕೆ ಪ್ರತೀಕಾರವಾಗಿ ಶವವನ್ನು ರಾಜ್ಯ ರಸ್ತೆ ಹೆದ್ದಾರಿಯಲ್ಲಿಯೇ ದಹಿಸಲು ಮುಂದಾಗಿ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ತಾಲೂಕಿನ ಹುಲ್ಲಿನಕಟ್ಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕುಮಾರನಾಯ್ಕ ಎಂಬುವರ ತಾಯಿ ಗಂಗೀಬಾಯಿ ಮೃತಪಟ್ಟ ಹಿನ್ನಲೆಯಲ್ಲಿ ಶವ ದಹಿಸಲು ಅಂತ್ಯಕ್ರಿಯೆಗಾಗಿ ಸಿದ್ದತೆ ಕೈಗೊಳ್ಳುವಾಗ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರವಾಗಿ ಆಕ್ಷೇಪಿಸಿ ಅರಣ್ಯ ಇಲಾಖೆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದರು. ಗ್ರಾಮದ ಸ.ನಂ 95 ರಲ್ಲಿನ 5 ಎಕರೆ ಜಾಗವನ್ನು ಹಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳು ಸ್ಮಶಾನಕ್ಕಾಗಿ ಮಂಜೂರುಗೊಳಿಸಿದ್ದು, ಇದುವರೆಗೂ ನಿರ್ದಿಷ್ಟ ಜಾಗವನ್ನು ಕಂದಾಯ ಇಲಾಖೆ ಗುರುತಿಸದ ಕಾರಣ ಗ್ರಾಮಸ್ಥರು ರೊಚ್ಚಿಗೆದ್ದು ಶವ ದಹಿಸಲು ಜಾಗದ ಕೊರತೆಯಿಂದಾಗಿ ಶಿಕಾರಿಪುರ-ಹೊನ್ನಾಳಿ ಮುಖ್ಯರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಶವ ದಹಿಸಲು ಅಗತ್ಯವಾದ ಕಟ್ಟಿಗೆ ರಾಶಿಯನ್ನು ಹಾಕಿ ಸಿದ್ದತೆ ಕೈಗೊಳ್ಳುವ ಮೂಲಕ ಅಧಿಕಾರಿಗಳನ್ನು ದಂಗು ಬಡಿಸಿದರು.

ಪರಿಸ್ಥಿತಿಯ ತೀವ್ರತೆ ಅರಿತು ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಮಂಜುಳಾ ಭಜಂತ್ರಿ, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಸಿಪಿಐ ಮತ್ತಿತರರು ಗ್ರಾಮಸ್ಥರನ್ನು ಸಮಾಧಾನಿಸುವ ಪ್ರಯತ್ನ ನಡೆಸಿದರು. ಗ್ರಾಮದ ಸ.ನಂ 90 ರ 450 ಎಕರೆ ಜಾಗದಲ್ಲಿ 50 ಎಕರೆ ಒತ್ತುವರಿಯಾಗಿದ್ದು, ಪುನಃ ಜಾಗದ ಸರ್ವೆ ಕೈಗೊಂಡು ಗುರುತಿಸಿಕೊಡಲಾಗುವುದು ಇದೀಗ ನೀಲಗಿರಿ ಪ್ಲಾಂಟೇಶನ್ ಸಮೀಪದಲ್ಲಿ ಶವ ಸಂಸ್ಕಾರ ನಡೆಸುವಂತೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರು.

ರಾಷ್ಟ್ರೀಯ ಗೋರ್ ಸೇನಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಾನಾಯ್ಕ ಮಾತನಾಡಿ, ಗ್ರಾಮದಲ್ಲಿ ಕನಿಷ್ಠ ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಸೂಕ್ತ ಜಾಗವಿಲ್ಲದೆ ಪರದಾಡುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಮಂಜೂರುಗೊಳಿಸಿದ ಜಾಗವನ್ನು ಕೂಡಲೇ ನಿಗದಿಪಡಿಸಿಕೊಡಬೇಕು ತಪ್ಪಿದಲ್ಲಿ ಘಟನೆ ಪುನರಾವರ್ತನೆಯಾದಲ್ಲಿ ಅಧಿಕಾರಿಗಳು ಹೊಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತ ಗಂಗೀಬಾಯಿ ಪುತ್ರ ಕುಮಾರನಾಯ್ಕ, ಗ್ರಾಮದಲ್ಲಿ ಸ್ಮಶಾನಕ್ಕಾಗಿ ಭೂಮಿ ಕೊರತೆ ಬಗ್ಗೆ ಹಲವು ಬಾರಿ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಜಮೀನು ಮಾಲೀಕರು ಹೊಲ ಗದ್ದೆ ತೋಟಗಳಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಇಲ್ಲದವರು ಗ್ರಾಮದ ಹೊರವಲಯಕ್ಕೆ ತೆರಳಬೇಕು ಕುಟುಂಬಸ್ಥರನ್ನು ಕಳೆದುಕೊಂಡ ದುಃಖ ಒಂದಡೆಯಾದರೆ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದ ಶೋಚನೀಯ ಸ್ಥಿತಿಯಿಂದ ಪರಿತಪಿಸಬೇಕಾಗಿದೆ ಎಂದು ತಿಳಿಸಿದರು.

ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮದ್ಯೆ ಮಾತಿನ ಚಕಮಕಿಯಿಂದಾಗಿ ಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು.ಗ್ರಾ.ಪಂ ಸದಸ್ಯ ರವಿಕುಮಾರ್, ಗಿರೀಶನಾಯ್ಕ, ಮಲ್ಲಿಕಾರ್ಜುನ, ಚನ್ನೇಶನಾಯ್ಕ, ಪೋಮ್ಯಾನಾಯ್ಕ, ಜಯಪ್ರಕಾಶ ನಾಯ್ಕ ಸಹಿತ ನೂರಾರು ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''