ಹೊನ್ನಾವರ: ಅರಣ್ಯ ಭೂಮಿ ವಿಚಾರದಲ್ಲಿ ಕಾನೂನು ತೊಡಕಿಲ್ಲ. ಇದರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಟಿ. ಯಶವಂತ ಆರೋಪಿಸಿದರು.
ಅರಣ್ಯ ಭೂಮಿ ಉಳಿಸುವವರು ರೈತರು, ಕೂಲಿಕಾರರು. ಅವರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆದರೆ ಕಾರ್ಪೊರೇಟ್ ಕಂಪನಿಗಳು, ಗಣಿಗಾರಿಕೆ ಮಾಡುವವರು ಅರಣ್ಯ ಕಬಳಿಕೆ ಮಾಡುತ್ತಾರೆ. ಆದರೆ ಸರ್ಕಾರ ಅವರಿಗೆ ಅನೂಕೂಲ ಮಾಡಿಕೊಡುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂಲೂ ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ಆದರೂ ತಲೆತಲಾಂತರಗಳಿಂದ ವಾಸ ಇರುವವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಮೂರು ತಲೆಮಾರುಗಳ ದಾಖಲೆ ಮಾನದಂಡದಿಂದ ಅರ್ಜಿ ತಿರಸ್ಕೃತ ಆಗುತ್ತಿದೆ ಎಂದರು.ಅರಣ್ಯ ಭೂಮಿ ಸಾಗುವಳಿದಾರರಾಗಿರುವ ಮಂಕಿಯ ದೇವಿ ನಾಗಪ್ಪ ಗೌಡ ಮಾತನಾಡಿ, ನಮ್ಮ ಜಾಗದಲ್ಲಿ ನೆಟ್ಟ ಅಡಕೆ ಸಸಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಡಿದು ಹಾಕಿದ್ದಾರೆ ಎಂದು ಅಳಲು ತೋಡಿಕೊಂಡರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ ಗೌಡ, ಸಿಐಟಿಯು ರಾಜ್ಯ ಸಮಿತಿಯ ಸದಸ್ಯೆ ಯಮುನಾ ಗಾಂವ್ಕರ್, ಜಿಲ್ಲಾಧ್ಯಕ್ಷ ತಿಲಕ್ ಗೌಡ, ನ್ಯಾಯವಾದಿ ಉದಯ ನಾಯ್ಕ, ಪುಂಡಲೀಕ ನಾಯ್ಕ, ಗಣೇಶ ಪಟಗಾರ ಮತ್ತಿತರಿದ್ದರು. ನೂರಾರು ಸಂಖ್ಯೆಯಲ್ಲಿ ಅರಣ್ಯ ಭೂಮಿ ಸಾಗುವಳಿದಾರರು ಪಾಲ್ಗೊಂಡಿದ್ದರು.ಹೊನ್ನಾವರದಲ್ಲಿ ತಹಸೀಲ್ದಾರರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.
ಕಾರವಾರ: ಬಾರ್ಕೂರು ಮಠ ಉತ್ತರ ಕನ್ನಡ ಘಟಕದಿಂದ ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ರಚಿಸಲ್ಪಡುತ್ತಿರುವ ನಾಡವೆಂಕಟೇಶ್ವರ ದೇವಸ್ಥಾನದ ಶಿಖರ ಪ್ರತಿಷ್ಠಾಪನೆ ಕಾರ್ಯ ಇತ್ತೀಚೆಗೆ ಜರುಗಿತು.ಶಿಖರ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮವನ್ನು ಶಾಂತಾ ನಾಯಕ ದಂಪತಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬಾರ್ಕೂರ ಮಠದ ಜಿಲ್ಲಾ ಘಟಕದ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಡಿ.ಎನ್. ನಾಯಕ, ಕಾರ್ಯದರ್ಶಿ ಎನ್.ಕೆ. ನಾಯಕ ಮತ್ತು ಕಟ್ಟಡ ಸಮಿತಿಯ ಅಧ್ಯಕ್ಷ ಆನಂದು ಕವರಿ, ಜಿ.ಎಂ. ಶೆಟ್ಟಿ, ರವಿ ನಾಯಕ ಹಾಗೂ ಇನ್ನಿತರ ಸದಸ್ಯರು ಇದ್ದರು.ನಾಡವೆಂಕಟೇಶ್ವರ ದೇವಸ್ಥಾನ ಕಟ್ಟಲ್ಪಡುತ್ತಿರುವ ಜಾಗ ಮತ್ತು ಸಂಪೂರ್ಣ ನಾಡವೆಂಕಟೇಶ್ವರ ದೇವಸ್ಥಾನಕ್ಕೆ ತಗಲುವ ಖರ್ಚನ್ನು ಹಿರೇಗುತ್ತಿಯ ಶಾಂತಾ ನಾಯಕ ಮತ್ತು ಯಶೋದಾ ದಂಪತಿ ನೀಡಿದ್ದಾರೆ. ಇದು ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು, ಈ ದೇವಸ್ಥಾನದಲ್ಲಿ ಸುಮಾರು 12 ಅಡಿ ಎತ್ತರದ ವೆಂಕಟರಮಣನ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು.