ಲಾಡ್ ಸಮುದಾಯದ ಹೆಸರಲ್ಲ, ಪ್ರದೇಶದ ಹೆಸರು: ರಾಹುಲ್

KannadaprabhaNewsNetwork |  
Published : Dec 23, 2024, 01:00 AM IST
20ಎಚ್‌ಪಿಟಿ5ಕನ್ನಡ ವಿವಿಯಲ್ಲಿ ನಡೆದ ಸಮಾಜಮುಖಿ ತಿಂಗಳ ಮಾತು-4ರ ಕಾರ್ಯಕ್ರಮದಲ್ಲಿ ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ವಿಷಯ ಕುರಿತು ಸಂಶೋಧನಾರ್ಥಿ ರಾಹುಲ್ ಎಸ್.ಎಂ. ಮಾತನಾಡಿದರು. | Kannada Prabha

ಸಾರಾಂಶ

ಲಾಡ್ ಎನ್ನುವುದು ಒಂದು ಪ್ರದೇಶದ ಹೆಸರು ಹೊರತು ಅದು ಜಾತಿ ಮತ್ತು ಸಮುದಾಯದ ಹೆಸರಲ್ಲ.

ಹೊಸಪೇಟೆ: ಲಾಡ್ ಎನ್ನುವುದು ಒಂದು ಪ್ರದೇಶದ ಹೆಸರು ಹೊರತು ಅದು ಜಾತಿ ಮತ್ತು ಸಮುದಾಯದ ಹೆಸರಲ್ಲ. ಈ ಸಮುದಾಯದಲ್ಲಿ ಎಲ್ಲ ಜಾತಿಯ ಜನಸಾಮಾನ್ಯರನ್ನು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ರಾಹುಲ್ ಎಸ್.ಎಂ. ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಶುಕ್ರವಾರ ಆಯೋಜಿಸಿದ್ದ ಸಮಾಜಮುಖಿ ತಿಂಗಳ ಮಾತು-4ರ ಕಾರ್ಯಕ್ರಮದಲ್ಲಿ ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ವಿಷಯ ಮಂಡಿಸಿ ಮಾತನಾಡಿದ ಅವರು, ಲಾಡ್ ಪದವು ಗುಜರಾತಿನ ಲಾಟ್ ಪ್ರವೇಶದಿಂದ ಬಂದಿರುವ ಶಬ್ದವಾಗಿದೆ. ಲಾಟ್ ಪ್ರದೇಶದ ಜನರು ಹೆಚ್ಚಾಗಿ ಕುದುರೆ, ಅರಿಸಿಣ ಕುಂಕುಮ ಹಾಗೂ ಸುಗಂಧ ದ್ರವ್ಯಗಳ ವ್ಯಾಪಾರವನ್ನೇ ತಮ್ಮ ಮೂಲ ವೃತ್ತಿಯಾಗಿಸಿಕೊಂಡಿದ್ದರು ಎಂದು ಪಂಪನು ತಮ್ಮ ಕಾವ್ಯ ಹಾಗೂ ನಿಘಂಟಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಲಾಡ್ ಸಮುದಾಯದ ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸುವುದಾದರೆ ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿ ಇವರ ಕುರುಹುಗಳು ದೊರಕಿವೆ ಎಂದರು.

ರಾಜ್ಯದಲ್ಲಿ 8ರಿಂದ 10 ಸಾವಿರ ಜನಸಂಖ್ಯೆ ಜನರನ್ನು ಕಾಣಬಹುದು. ಲಾಡ್ ಸಮುದಾಯಕ್ಕೆ ತನ್ನದೇ ಚೌರಾಸಿ ಎನ್ನುವ ಭಾಷೆಯಿದ್ದು ಅದಕ್ಕೆ ಲಿಪಿ ಇಲ್ಲ. ಚೌರಾಸಿ ಎಂದರೆ 84 ಎಂದು ಅರ್ಥ, ಲಾಟರ್ ಪ್ರದೇಶವೂ ಬಂದರು ಪ್ರದೇಶವಾಗಿದ್ದು ಅಲ್ಲಿ ದೇಶ, ವಿದೇಶಗಳ ವ್ಯಾಪಾರಸ್ಥರು ವ್ಯಾಪಾರದ ದೃಷ್ಟಿಕೋನದಿಂದ ಈ ಭಾಷೆಯನ್ನು ಬಳಕೆ ಮಾಡುತ್ತಿದ್ದರು ಎಂದರು.

ಆದರೆ ಮರಾಠಿ ಸಮುದಾಯಕ್ಕೂ ಲಾಡ್ ಸಮುದಾಯಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಮರಾಠಿ ಸಮುದಾಯದಲ್ಲಿ 96 ಕುಳಿಗಳಿದ್ದು, ಅದರಲ್ಲಿ 80 ಕುಳಿ ಲಾಟ್ ಸಮುದಾಯದಾಗಿದೆ. ಮುಖ್ಯವಾಗಿ ಕರ್ನಾಟಕದಲ್ಲಿ ಲಾಡ್ ಸಮುದಾಯವು ಜಾತಿಯಾಗಿ ಪರಿಗಣಿಸಲಾಗಿದೆ. ಆದರೆ ಲಾಡ್ ಸಮುದಾಯವನ್ನು ಕೇವಲ ರಾಜಕೀಯ ಹಿನ್ನೆಲೆಯಲ್ಲಿ ನೋಡಲಾರದೆ ಅವರಲ್ಲಿರುವ ಸಾಂಸ್ಕೃತಿಕ ನೆಲೆಗಳಲ್ಲಿ ಕಾಣಬೇಕು ಎಂದು ತಿಳಿಸಿದರು.

ಸಮಾಜಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಯರ‍್ರಿಸ್ವಾಮಿ ಈ., ಮಾತನಾಡಿ, ನಮ್ಮ ಅಧ್ಯಯನವು ಹೆಚ್ಚು ಸಮೀಕ್ಷೆಗಳಿಂದ ಕೂಡಿರಬೇಕು. ಹಾಗಾದರೆ ಮಾತ್ರ ನಮ್ಮ ಸಂಶೋಧನೆಯು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ. ಮುಖ್ಯವಾಗಿ ಒಂದು ಜಾತಿಯನ್ನು ನೋಡುವ ಸಂದರ್ಭದಲ್ಲಿ ಹುಟ್ಟು, ವಿವಾಹ ಹಾಗೂ ಸಾವಿನ ಅಂಶಗಳಿಂದ ಅವರ ಜಾತಿಯನ್ನು ನಿರ್ಧಾರ ಮಾಡಬೇಕಾಗುತ್ತದೆ. ಇನ್ನೂ ಹೆಣ್ಣು ಮತ್ತು ಗಂಡು ಸಮಬಲ ಸಾಧಿಸಬೇಕಾದರೆ ಅವರ ಗೋತ್ರ ಬಹಳ ಮುಖ್ಯವಾಗುತ್ತದೆ. ಗೋತ್ರ ಇಲ್ಲದೆ ಜಾತಿಯನ್ನು ಪರಿಗಣಿಸಲು ಸಾಧ್ಯವೇ ಇಲ್ಲ. ಒಂದು ಸಮುದಾಯದ ಸಾಂಸ್ಕೃತಿಕ ನೆಲೆಗಟ್ಟನ್ನು ನೋಡುವ ಸಂದರ್ಭದಲ್ಲಿ ಗೋತ್ರ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಲೆಮಾರಿನ ಪ್ರೀತಿ ಇರುವ ವ್ಯಕ್ತಿ ಇಂತಹ ವಿಚಾರ ಮಂಥನ ಮಾಡುತ್ತಾನೆ. ಬಹಳ ಮುಖ್ಯವಾಗಿ ಸಮುದಾಯಗಳ ಅಧ್ಯಯನಗಳನ್ನು ಮಾಡುವ ಸಂದರ್ಭದಲ್ಲಿ ಸಮುದಾಯಗಳ ಆರಂಭ ಎಲ್ಲಿಂದ, ಅದರ ಅಂತ್ಯ ಬಹಳ ಮುಖ್ಯವಾಗಿದ್ದು, ವರ್ತಮಾನವನ್ನು ಸರಿಯಾದ ದೃಷ್ಟಿಕೋನದಿಂದ ಅರ್ಥೈಸಿಕೊಂಡು ಅಧ್ಯಯನ ಕೈಗೊಳ್ಳಬೇಕು ಎಂದರು. ಕಾರ್ಯಕ್ರಮದ ಸಂಚಾಲಕ ತಿಪ್ಪೇಶ್ ಬಿ. ಮತ್ತಿತರರಿದ್ದರು.

ಕನ್ನಡ ವಿವಿಯಲ್ಲಿ ನಡೆದ ಸಮಾಜಮುಖಿ ತಿಂಗಳ ಮಾತು-4ರ ಕಾರ್ಯಕ್ರಮದಲ್ಲಿ ಕರ್ನಾಟಕ ಲಾಡ್ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ವಿಷಯ ಕುರಿತು ಸಂಶೋಧನಾರ್ಥಿ ರಾಹುಲ್ ಎಸ್.ಎಂ. ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌