ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬಿರ್ಲಾ ಕಂಪನಿಯಿಂದ ಕೆರೆ ಒತ್ತುವರಿ

KannadaprabhaNewsNetwork | Published : Nov 13, 2024 12:47 AM

ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೆಲ್ಲಂಬಳ್ಳಿ ವ್ಯಾಪ್ತಿಯಲ್ಲಿದ್ದ ಕೆರೆಗಳನ್ನು ಮುಚ್ಚಿ ಬಿರ್ಲಾ ಕಂಪನಿಯವರು ಒತ್ತುವರಿ ಮಾಡಿಕೊಂಡು ಸುತ್ತುಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ಕೆಲ್ಲಂಬಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕೆಲ್ಲಂಬಳ್ಳಿ ವ್ಯಾಪ್ತಿಯಲ್ಲಿದ್ದ ಕೆರೆಗಳನ್ನು ಮುಚ್ಚಿ ಬಿರ್ಲಾ ಕಂಪನಿಯವರು ಒತ್ತುವರಿ ಮಾಡಿಕೊಂಡು ಸುತ್ತುಗೋಡೆ ನಿರ್ಮಿಸಿಕೊಂಡಿದ್ದಾರೆ ಎಂದು ಕೆಲ್ಲಂಬಳ್ಳಿ ಗ್ರಾಮದ ನಿವಾಸಿ ಶಿವಕುಮಾರ್ ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ರಾಜ್ಯ ಸರ್ಕಾರವು ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗಾಗಿ ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಕೈಗಾರಿಕೆಗಳು ಕಾರ್ಯಾರಂಭ ಮಾಡಿ ಉತ್ಪಾದನೆಯಲ್ಲಿ ತೊಡಗಿವೆ. ಆದರೆ ಈ ಕೈಗಾರಿಕಾ ಪ್ರದೇಶದಲ್ಲಿ ಅನಾದಿ ಕಾಲದಿಂದಲೂ ಪ್ರಾಣಿ ಪಕ್ಷಿಗಳಿಗಾಗಿ ಹಾಗೂ ಅಂತರ್ಜಲ ವೃದ್ಧಿಗಾಗಿ ನಿರ್ಮಾಣವಾಗಿದ್ದ ಕೆರೆಗಳು ಇಲ್ಲವಾಗಿವೆ. ನೈಸರ್ಗಿಕವಾಗಿ ಇದ್ದ ಹತ್ತಾರು ಎಕರೆ ಪ್ರದೇಶದ ಸಾರ್ವಜನಿಕ ಉದೇಶಕ್ಕಾಗಿ ಇದ್ದ ಕೆರೆಯನ್ನು ಸೇರಿಸಿ ಸುತ್ತುಗೋಡೆ ನಿರ್ಮಿಸಿ ಅಕ್ರಮವಾಗಿ ಬಿರ್ಲಾ ಕಂಪನಿಯವರು ಕೆರೆ ಒತ್ತುವರಿ ಮಾಡಿಕೊಂಡಿದೆ ಎಂದು ತಹಸೀಲ್ದಾರ್‌ಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮೌಖಿಕವಾಗಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ದೂರು ನೀಡಿದರೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂಬ ಉಡಾಫೆ ಉತ್ತರ ನೀಡುತ್ತಾರೆ. ಆದ್ದರಿಂದ ತಾವುಗಳು ನೈಸರ್ಗಿಕವಾಗಿ ಈ ಪ್ರದೇಶದಲ್ಲಿದ್ದ ಹತ್ತಾರು ಎಕರೆ ವಿಸ್ತೀರ್ಣದ ಎಕರೆಯ ಕೆರೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಿ ಪ್ರಾಣಿ ಪಕ್ಷಿಗಳ ಉಳಿವಿಗೆ ನೆರವಾಗಬೇಕೆಂದು ಸಾರ್ವಜನಿಕರ ಪರವಾಗಿ ಕೆಲ್ಲಂಬಳ್ಳಿ ಗ್ರಾಮದ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಈ ಕೈಗಾರಿಕೆಗಳು ಪ್ರಾರಂಭವಾಗುವ ಮುನ್ನ ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ಕಳೆದುಕೊಂಡ ಕುಟುಂಬದವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ಕೊಡುತ್ತವೆ ಎಂಬ ಭರವಸೆ ನೀಡಿದರು. ಆದರೆ ಈಗ ಜಮೀನು ನೀಡಿದ ಕುಟುಂಬಗಳು ಉದ್ಯೋಗಕ್ಕಾಗಿ ಕಾರ್ಖಾನೆಗಳ ಮಾಲೀಕರ ಹಾಗೂ ಆಡಳಿತ ಮಂಡಳಿ ಮುಂದೆ ಉದ್ಯೋಗಕ್ಕಾಗಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಿಯರಿಗೆ, ಕನ್ನಡಿಗರಿಗೆ ಉದ್ಯೋಗ ನೀಡದೆ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದು ಸ್ಥಳೀಯರು ಉದ್ಯೋಗ ವಂಚಿತರಾಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ತಾವು ಈ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕಾಗಿ ಸಾರ್ವಜನಿಕರ ಪರವಾಗಿ ಮನವಿ ಮಾಡಿದ್ದಾರೆ.