ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮಗನ ಮದುವೆಯಲ್ಲೂ ಆದರ್ಶ ಮೆರೆದ ಜಯಕುಮಾರಿ ತಿಮ್ಮೇಗೌಡ ದಂಪತಿ

KannadaprabhaNewsNetwork | Published : Nov 13, 2024 12:47 AM

ಕುವೆಂಪು ಅವರ ಕವಿಮನೆ ಕುಪ್ಪಳಿಯ ಹೇಮಾಂಗಣದಲ್ಲಿ ಸಂಬಂಧಿಕರು ಹಾಗೂ ಹಿತೈಷಿಗಳ ಸಮಾಗಮ

ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರಕವಿ ಕುವೆಂಪು ಅವರ ಆಶೀರ್ವಾದ ಪಡೆದು ಮಂತ್ರ ಮಾಂಗಲ್ಯ ಮದುವೆ ಮಾಡಿಕೊಂಡಿದ್ದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮತ್ತು ಎಚ್.ಆರ್. ತಿಮ್ಮೇಗೌಡ ಅವರ ಪುತ್ರ ಕೆನಡಾ ದೇಶದಲ್ಲಿ ಎಂಜಿನಿಯರ್ ಆಗಿರುವ ಟಿ.ಜೆ. ನಿಸರ್ಗ ಮತ್ತು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಮೈಸೂರಿನ ಶ್ರೀದೇವಿ ಮತ್ತು ಎಂ.ಜಿ. ರಾಜಶೇಖರ್ ಅವರ ಪುತ್ರಿ ಹರ್ಷಿತ ರಾಜ್ ಅವರ ಮಂತ್ರಮಾಂಗಲ್ಯ ಮದುವೆ ಕುವೆಂಪು ಅವರ ಕವಿಮನೆ ಕುಪ್ಪಳಿಯ ಹೇಮಾಂಗಣದಲ್ಲಿ ಸಂಬಂಧಿಕರು ಹಾಗೂ ಹಿತೈಷಿಗಳ ಸಮಾಗಮದಲ್ಲಿ ನೆರವೇರಿತು.ಕುವೆಂಪು ಅವರ ಈ ಮಂತ್ರಮಾಂಗಲ್ಯ ಮದುವೆ ಕುರಿತು ನಾಡಿನ ಖ್ಯಾತ ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಈ ಸರಳ ಮದುವೆ, ಮದುವೆಯ ಪರಿಕಲ್ಪನೆಯನ್ನೇ ಬದಲಾಯಿಸುವ ಒಂದು ವಿಶಿಷ್ಟವಾದ ಸಮಾರಂಭ.ಇಂದು ನಮ್ಮ ಸಮಾಜದಲ್ಲಿ ಮದುವೆ ತುಂಬಾ ಆಡಂಬರವಾಗಿ ಆಗುತ್ತಿದೆ. ಆದರೆ ಹಿಂದೆ ಮದುವೆಗಳು ಮನೆಗಳಲ್ಲೇ ಸರಳವಾಗಿ ಆಗುತ್ತಿತ್ತು. ಇಡೀ ಊರಿಗೆ ಊರೇ ಪಾಲ್ಗೊಳ್ಳುತ್ತಿತ್ತು. ಇಂದು ಮದುವೆ ಆಡಂಬರ, ವೈಭವದ ಪ್ರದರ್ಶನವಾಗಿ ರೂಪಾಂತರವಾಗಿಬಿಟ್ಟಿದೆ. ಆಡಂಬರದ ಮದುವೆಗಳು ಸಮಾಜದ ಮೇಲೆ ದುಷ್ಪರಿಣಾಮವುಂಟು ಮಾಡುತ್ತವೆ. ಮದುವೆಯ ವೈಭವ ತಿಳಿಯುತ್ತದೆಯೇ ಹೊರತು, ನಂತರದ ಸಂಕಟ, ಅವಮಾನಗಳು ತಿಳಿಯುವುದಿಲ್ಲ. ಒಂದು ವೈಜ್ಞಾನಿಕ ಸತ್ಯವೆಂದರೆ, ಭಾರತದಲ್ಲಿ ಒಂದು ದಿನ ಮದುವೆಯ ಮನೆಯಲ್ಲಿ ವ್ಯರ್ಥವಾಗುವ ಆಹಾರ, ಇಡೀ ಇಂಗ್ಲೆಂಡ್ ದೇಶದ ಒಂದು ದಿನದ ಆಹಾರವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.ಸರಳತೆಯನ್ನು ಕುರಿತು ಮಾತನಾಡುವುದು ಸುಲಭ, ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ಸರಳ ಮದುವೆಗೆ ದಿಟ್ಟ ನಿರ್ಧಾರಬೇಕು. ತಿಮ್ಮೇಗೌಡ ಜಯಕುಮಾರಿ ಅವರು ತಾವು ಮಂತ್ರ ಮಾಂಗಲ್ಯ ಮದುವೆ ಮಾಡಿಕೊಂಡಿದ್ದಲ್ಲದೇ ಮಗನ ಮದುವೆಯನ್ನು ಸರಳವಾಗಿ ಮಾಡುತ್ತಿರುವುದು ಪವಾಡ ಸದೃಶವಾಗಿದೆ. ಇಲ್ಲಿ ನೂರಾರು ಮಂತ್ರಮಾಂಗಲ್ಯ ಮದುವೆಗಳು ನಡೆಯುತ್ತವೆ. ಮಲೆನಾಡಿನ ಜನಕ್ಕಿಂತ ಮಂಡ್ಯದಲ್ಲಿ ಹೆಚ್ಚು ಮಂತ್ರಮಾಂಗಲ್ಯದ ಮದುವೆಗಳು ನಡೆದಿವೆ. ತಿಮ್ಮೇಗೌಡರು ಮಂಡ್ಯದ ಪ್ರತಿನಿಧಿಯಾಗಿ ಇಲ್ಲಿ ಬಂದು ಮದುವೆ ಮಾಡುತ್ತಿದ್ದಾರೆ. ಇದೊಂದು ಪವಿತ್ರವಾದ ನೆಲ, ಕುವೆಂಪು ಅವರ ಆಶೀರ್ವಾದ ನವದಂಪತಿಗಳ ಮೇಲೆ ಇರುತ್ತದೆ. ಈ ನವದಂಪತಿಗಳು ಚೆಂದವಾಗಿರುತ್ತಾರೆ. ಕುವೆಂಪು ಅವರು ಹೇಳುವಂತೆ ನೀವು ಲೋಕವನ್ನಾಗಲಿ, ಸಮಾಜವನ್ನಾಗಲಿ, ಪುರೋಹಿತಶಾಹಿ ವ್ಯವಸ್ಥೆಯನ್ನಾಗಲಿ ಪ್ರತಿಭಟಿಸುವ, ಬದಲಾಯಿಸುವ ಅಗತ್ಯವಿಲ್ಲ. ನೀವು ಪ್ರಾಮಾಣಿಕರಾಗಿದ್ದರೆ ನಾನು ಹೇಳುವ ಒಂದು ಸಣ್ಣ ಸುಧಾರಣೆ ಮಾಡಿಕೊಳ್ಳಿ. ನೀವು ವರದಕ್ಷಿಣೆ ತೆಗೆದುಕೊಳ್ಳದೆ ಶಾಸ್ತ್ರ, ಮಂತ್ರಗಳಿಲ್ಲದೆ, ನೀವು ಅಂತಸ್ತಿನ ಪ್ರದರ್ಶನಕ್ಕಾಗಿ ದುಂದುವೆಚ್ಚ ಮಾಡದೆ, ಮೊದಲಾದ ಕಾರ್ಯಕ್ರಮಗಳನ್ನು ಸರಳವಾಗಿ ಮಾಡಿಕೊಳ್ಳಿ. ನಂಬಿದ ಮೌಲ್ಯಗಳ ಹಿಂದೆ ನಡೆಯಿರಿ, ಗೊಡ್ಡು ಸಂಪ್ರದಾಯಗಳ ಹಿಂದೆ ಹೋಗದಿರಿ. ನಿಮಗರಿವಿಲ್ಲದಂತೆಯೇ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತವೆ ಎಂದು ಕುವೆಂಪು ಅವರ ಆದರ್ಶವನ್ನು ತಿಮ್ಮೇಗೌಡ ಜಯಕುಮಾರಿ, ಹರ್ಷಿತರಾಜ್ ಕುಟುಂಬದವರು ನೆರವೇರಿಸುತ್ತಿರುವುದು ಸಂತೋಷದ ಸಂಗತಿ ಎಂದು ನುಡಿದರು.ಒಂದು ಕಾಲದಲ್ಲಿ ಬಡತನ ಎಂಬುದು ಅವಮಾನದ ಸಂಗತಿಯಾಗಿತ್ತು. ಆದರೆ ಇಂದು ಶ್ರೀಮಂತಿಕೆ ಅವಮಾನದ ಸಂಗತಿಯಾಗಿದೆ. ಸರಳತೆ ಎಂಬುಂದು ಆದರ್ಶಕ್ಕಿಂತ ಚೆಲುವು. ಶ್ರೀಮಂತಿಕೆ ಸೊಗಸಲ್ಲ, ಚೆಲುವಲ್ಲ ಎಂಬುದನ್ನು ಅರಿಯಬೇಕಾಗಿದೆ. ಪ್ರಾಮಾಣಿಕವಾಗಿ ವ್ಯಕ್ತಿ ಇದನ್ನು ಮಾಡುತ್ತ ಹೋದರೆ ಸಾಕು, ತನಗೆ ತಾನೇ ಸಮಾಜ ಸುಧಾರಣೆಯಾಗುತ್ತದೆ ಎಂದು ನುಡಿದ ಅವರು ಮಾಧ್ಯಮಗಳು ವೈಭವದ ಮದುವೆಯನ್ನು ಸುದ್ದಿ ಮಾಡುವುದಕ್ಕಿಂತ ಇಂತಹ ಸರಳ ಮದುವೆಗಳನ್ನು ಪ್ರಚಾರ ಮಾಡುವುದು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದೆ ಎಂದರು.ಗಾಂಧಿವಾದಿಗಳಾದ ಪ್ರೊ. ಜಿ.ಬಿ. ಶಿವರಾಜು ಮಾತನಾಡಿ, ನಮ್ಮ ಜೀವನದಲ್ಲಿ ದಾಖಲಿಸಿಕೊಳ್ಳಬೇಕಾದ ಮಾದರಿ ಮದುವೆ ಇಂದು ಜರುಗಿದೆ. ವೃತ್ತಿ ಹಾಗೂ ಜೀವನದಲ್ಲಿ ಸಾರ್ಥಕತೆ ಪಡೆದ ಜೀವನದುದ್ದಕ್ಕೂ ಆದರ್ಶವನ್ನಿಟ್ಟುಕೊಂಡು ಬಾಳಿದ ಮತ್ತು ಗ್ರಾಮೀಣ ಬದುಕು ಹಾಗೂ ಮಕ್ಕಳ ಬಗ್ಗೆ ಆಪಾರವಾದ ಪ್ರೀತಿ ಇಟ್ಟುಕೊಂಡ ಡಾ. ಬಿ.ಆರ್. ಜಯಕುಮಾರಿ ಎಚ್.ಆರ್. ತಿಮ್ಮೇಗೌಡ ಅವರು ಕುವೆಂಪು ಅವರ ಆದರ್ಶಗಳನ್ನು, ಅವರು ಹುಟ್ಟಿ ಬೆಳೆದ ಪವಿತ್ರವಾದ ನೆಲದಲ್ಲಿ ಮಗನ ಮಂತ್ರ ಮಾಂಗಲ್ಯ ಮದುವೆ ಮಾಡುತ್ತಿರುವುದು ಈ ಸಮಾಜಕ್ಕೆ ಮಾದರಿಯಾಗಿದೆ ಎಂದು ನುಡಿದರು. ನಿವೃತ್ತ ಪ್ರಾಂಶುಪಾಲ ಪ್ರೊ. ಗಣಪತಿ ಅವರು ಸರಳ ವಿವಾಹವನ್ನು ನಡೆಸಿಕೊಟ್ಟರು.ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಸ್ವಾಗತಿಸಿದರು. ಅಭಿನವ ರವಿ ವಂದಿಸಿದರು.