- ಕಾಮಗಾರಿ ಸಂಪೂರ್ಣ ಬಳಿಕ ೩೬ ಕೆರೆಗಳಿಗೆ ನೀರು
- - -ಕನ್ನಡಪ್ರಭ ವಾರ್ತೆ ಜಗಳೂರು
೫೭ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಪ್ರಾಯೋಗಿಕವಾಗಿ ೧೬ ಕೆರೆಗಳಿಗೆ ಸೋಮವಾರದಿಂದ ನೀರು ಹರಿಸಲಾಗಿದೆ. ಜಗಳೂರು ಪಟ್ಟಣದ ಕೆರೆಗೆ ಪೈಪ್ ಲೈನ್ ಅಳವಡಿಸುವ ಕಾಮಗಾರಿ ಕೊನೆ ಹಂತದಲ್ಲಿದೆ. ಇದು ಪೂರ್ಣಗೊಂಡ ನಂತರ ೩೬ ಕೆರೆಗಳಿಗೆ ನೀರು ಹರಿಯಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಾ ಡ್ಯಾಂ ಸುತ್ತಮುತ್ತಲ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದ್ದು, ನೀರಿನ ಒಳಹರಿವು ಹೆಚ್ಚಲಿದೆ. ಮಳೆ ಇನ್ನೂ ಚನ್ನಾಗಿ ಬಂದರೆ ನಮಗೆ ಸಮರ್ಪಕ ನೀರು ದೊರೆಯಲಿದೆ. ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿ ಬಸ್ ಡಿಪೋ ಸಮೀಪ ಆಸ್ಪತ್ರೆ ನಿರ್ಮಿಸಲು ಸ್ಥಳ ನಿಗದಿ ಮಾಡಲಾಗಿದೆ. ಆದಷ್ಟು ಬೇಗ ರೂಪುರೇಷೆ ತಯಾರಿಸಲಾಗುವುದು ಎಂದರು.
₹೧೦ ಕೋಟಿ ಅನುದಾನ:ಸಿಇಒ ಸುರೇಶ್ ಹಿಟ್ನಾಳ್ ಮಾತನಾಡಿ, ನರೇಗ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ₹೧೦ ಕೋಟಿ ಅನುದಾನದಲ್ಲಿ ವೈಯಕ್ತಿಕ ಕಾಮಗಾರಿ, ಶಾಲಾ ಕಾಂಪೌಂಡ್ ನಿರ್ಮಾಣ, ಕೆರೆಯಲ್ಲಿ ಹೂಳೆತ್ತುವುದು ಸೇರಿದಂತೆ ಹಲವಾರು ಕಾಮಗಾರಿಗಳಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹಿಂದಿನ ವರ್ಷ ೨೫ ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡಿದ್ದು, ಕೂಲಿ ಕಾರ್ಮಿಕರ ಪ್ರಮಾಣ ಹೆಚ್ಚಿದೆ. ಗ್ರಾಮಗಳಲ್ಲಿ ಸ್ವಚ್ಛತೆ ಆದ್ಯತೆ ನೀಡುವಂತೆ ಪಿಡಒಗಳಿಗೆ ಸೂಚನೆ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸಮಸ್ಯೆಯಿದ್ದು, ಶೀಘ್ರ ಬಗೆಹರಿಸಲಾಗುವುದು. ಜೆಜೆಎಂ ಯೋಜನೆಯಡಿ ಗ್ರಾಮಗಳಲ್ಲಿ ಕಾಮಗಾರಿ ನಡೆಯುವಾಗ ರಸ್ತೆ ಅಗೆಯುತ್ತಿದ್ದರು. ಅದನ್ನು ದುರಸ್ತಿ ಮಾಡಿಕೊಡುವ ಜವಾಬ್ದಾರಿ ಗುತ್ತಿಗೆದಾರನದ್ದು ಎಂದು ಹೇಳಿದರು.
ಈ ಸಂದರ್ಭ ತಹಸೀಲ್ದಾರ್ ಕಲೀಂ ಉಲ್ಲಾ, ತಾಲೂಕು ಆರೋಗ್ಯಾಧಿಕಾರಿ ವಿಶ್ವನಾಥ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಷಣ್ಮುಖಪ್ಪ, ಸುರೇಶ್, ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರು ಹಾಜರಿದ್ದರು.- - - -೧೮ಜೆಜಿಎಲ್೦1:
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.