ಚಂದ್ರು ಕೊಂಚಿಗೇರಿ
ಹೌದು, ತಾಲೂಕಿನಲ್ಲಿ ಹಿರೇಹಡಗಲಿಯ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆರೆಗೆ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ನೀರು ತುಂಬಿಸಲಾಗುತ್ತಿದೆ. ಈ ಬಾರಿ ಸಕಾಲದಲ್ಲಿ ಮಳೆ ಇಲ್ಲದೇ ಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಇದೇ ಸಂದರ್ಭದಲ್ಲಿ ಹಿರೇಹಡಗಲಿ ಹಾಗೂ ಅಕ್ಕಪಕ್ಕದೂರಿನ ರೈತರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ಹೂಳೆತ್ತುವ ಕೆಲಸ ಮಾಡಿದ್ದಾರೆ. ಆ ಹೂಳನ್ನು ಬಂಜರು ಬಿದ್ದಿರುವ ಭೂಮಿಗೆ ಹಾಕುವ ಮೂಲಕ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ.
ಇತ್ತ ಕೆರೆ ಹೂಳು ಎತ್ತುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದೆ. ಅತ್ತ ಬಂಜರು ಬಿದ್ದಿರುವ ರೈತರ ಭೂಮಿಗೆ ಮರು ಜೀವ ತುಂಬುವ ಕೆಲಸವಾಗುತ್ತಿದೆ. ಈಗಾಗಲೇ 20ರಿಂದ 30 ಎಕರೆ ಕೆರೆ ಪ್ರದೇಶದಲ್ಲಿನ ಹೂಳು ಎತ್ತಿದ್ದಾರೆ. ನಿತ್ಯ 2 ರಿಂದ 3 ಸಾವಿರ ಟ್ರಿಪ್ನಷ್ಟು ಹೂಳನ್ನು ಟ್ರ್ಯಾಕ್ಟರ್ಗೆ ತುಂಬಲು 7ರಿಂದ 8 ಜೆಸಿಬಿಗಳು ಹಾಗೂ 250ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ಬಳಕೆ ಮಾಡಲಾಗಿದೆ. ತಿಂಗಳುಗಟ್ಟಲೇ ಹೂಳು ಎತ್ತಿದ್ದಾರೆ. ಇದರಿಂದ ಕೆರೆಗೆ ನೀರು ತುಂಬುವ ಪ್ರಮಾಣವೂ ಹೆಚ್ಚಾಗಿದೆ.ನೀರಾವರಿ ಪ್ರದೇಶ ಮಾಡಿಕೊಳ್ಳಲು ರೈತರು ಕೊರೆಸಿದ ಕೊಳವೆಬಾವಿ ನೀರಿನಲ್ಲಿ ಪ್ಲೋರೈಡ್ ಅಂಶ ಇರುವ ಕಾರಣ, ಇದೇ ನೀರನ್ನು ಬೆಳೆಗಳಿಗೆ ನೀರುಣಿಸಿದ್ದಾರೆ. ಈ ನೀರಿನ ಬಳಕೆಯಿಂದ ಭೂಮಿಯ ಫಲವತ್ತತೆ ಇಲ್ಲದೇ ಬೆಳೆಗಳ ಇಳುವರಿ ಕುಂಠಿತವಾಗಿದೆ. ಇಂತಹ ಜಮೀನುಗಳಿಗೆ ರೈತರು ಕೆರೆ ಹೂಳನ್ನು ಬಳಕೆ ಮಾಡುತ್ತಿದ್ದಾರೆ.
ತುಂಗಭದ್ರಾ ನದಿಗೆ ಪೈಪ್ಲೈನ್ ಹಾಕಿ ನೀರಾವರಿ ಸೌಲಭ್ಯ ಮಾಡಿಕೊಂಡ ರೈತರು ಹೆಚ್ಚಾಗಿ ಕಬ್ಬು, ಬಾಳೆ, ತೆಂಗು, ಅಡಿಕೆ ಬೆಳೆಯುತ್ತಿದ್ದಾರೆ. ಜತೆಗೆ ಭತ್ತದ ಗದ್ದೆಗಳಿಗೆ ಹೆಚ್ಚು ಔಷಧಿ, ರಸಗೊಬ್ಬರ ಬಳಕೆ ಮಾಡಿದ್ದಾರೆ. ಇಂತಹ ಭೂಮಿಗಳಿಗೂ ಕೆರೆ ಹೂಳು ಹಾಕಿದ್ದಾರೆ. ಬೆಳೆಗಳ ಇಳುವರಿ ಹೆಚ್ಚಿಸಲು ಗೊಬ್ಬರ ಬಳಕೆಯ ಬದಲು ಕೆರೆಯಲ್ಲಿನ ಫಲವತ್ತಾಗಿರುವ ಹೂಳಿನ ಬಳಕೆಯಿಂದ ಹೆಚ್ಚು ಇಳುವರಿ ಪಡೆಯುವ ಪ್ರಯತ್ನಕ್ಕೆ ರೈತರು ಮುಂದಾಗಿದ್ದಾರೆ.
ಹಿರೇಹಡಗಲಿ ಕೆರೆಯಲ್ಲಿನ ಹೂಳನ್ನು ಲಾರಿ, ಟ್ರ್ಯಾಕ್ಟರ್ ಮೂಲಕ ಸುತ್ತಮುತ್ತಲಿನ ರೈತರು, 50 ಕಿ.ಮೀ. ದೂರದವರೆಗೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ನೀರಿನ ಸಂಗ್ರಹ ಹೆಚ್ಚಾಗಲಿದ್ದು, ರೈತರೇ ಹಣ ವೆಚ್ಚ ಮಾಡಿ ತಮ್ಮ ಜಮೀನುಗಳಿಗೆ ಹಾಕಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಿರೇಹಡಗಲಿ ಚರಣ ಗುಂಡಿ.