ಕನ್ನಡಪ್ರಭ ವಾರ್ತೆ ಸೊರಬ
ದೇವಸ್ಥಾನಕ್ಕೆ ವಿಶೇಷವಾಗಿ ವಿವಿಧ ರೀತಿಯ ದೀಪಾಲಂಕಾರ, ಪುಷ್ಪಾಲಂಕಾರ, ಮಾಡಲಾಗಿತ್ತು. ಲಕ್ಷ ದೀಪೋತ್ಸವ ಪ್ರಯುಕ್ತ ಪರಿವಾರ ದೇವರಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರಿಗೆ ವಿಶೇಷ ಪೂಜೆ ನೆರವೇರಿದವು. ಅನಂತರ ಶ್ರೀ ರೇಣುಕಾಂಬದೇವಿಗೆ ಲಕ್ಷ ದೀಪೋತ್ಸವದ ಮಹಾಮಂಗಳಾರತಿ ಜರುಗಿತು.
ಪ್ರಧಾನ ಅರ್ಚಕ ಅರವಿಂದ್ ಭಟ್ ನೇತೃತ್ವದಲ್ಲಿ ಲಕ್ಷ ದೀಪೋತ್ಸವದ ಪೂಜಾ ವಿಧಿವಿಧಾನಗಳ ನಡೆದವು. ವಾದ್ಯ ಮೇಳಗಳು ಲಕ್ಷ ದೀಪೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ದೇವಸ್ಥಾನದ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಸಿಡಿಸಿ ಸಂಭ್ರಮಿಸಿದರು. ಸಾವಿರಾರು ಭಕ್ತರು ದೇವಸ್ಥಾನದ ಮೆಟ್ಟಿಲುಗಳಿಂದ ಆವರಣದವರೆಗೆ ದೀಪಗಳನ್ನು ಹೆಚ್ಚಿದರು.ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ಚಂದ್ರಗುತ್ತಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಂಡರು. ಮಹಿಳೆಯರು ದೀಪವನ್ನು ಬೆಳಗಿ ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.