ಶಿವಾನಂದ ಅಂಗಡಿ
ಹುಬ್ಬಳ್ಳಿ:ಶ್ರಾವಣ ಹಿಂದೂಗಳಿಗೆ ಪವಿತ್ರ ಮಾಸ. ತಿಂಗಳ ಪರ್ಯಂತರ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಪುರಾಣ ಪ್ರವಚನಗಳು ನಡೆಯುತ್ತವೆ. ಹೀಗಾಗಿ ಪುರಾಣ ಪ್ರವಚನಕಾರರಿಗೆ ಈ ಬಾರಿ ಶುಕ್ರದೆಸೆ ತಿರುಗಿದ್ದು, ಕೈತುಂಬ ದಕ್ಷಿಣೆ ಪಡೆಯುತ್ತಿದ್ದಾರೆ. ಅವರಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶಿಷ್ಯರೇ ಮುಂಚೂಣಿಯಲ್ಲಿ ಇರುವುದು ವಿಶೇಷ.
ಪ್ರವಚನಕಾರರ ಜತೆಗೆ ಸಂಗೀತ ನೀಡುವ ಹಾರ್ಮೋನಿಯಂ ಗವಾಯಿಗಳು ಮತ್ತು ತಬಲಾ ಸಾಥ್ ನೀಡುವ ಕಲಾವಿದರಿಗೆ ಬೇಡಿಕೆ ಹೆಚ್ಚಿದೆ. ಈ ಬಾರಿ ಲಕ್ಷದಿಂದ ಒಂದೂವರೆ ಲಕ್ಷದ ವರೆಗೆ ಸಂಭಾವನೆ ನಿಗದಿಯಾಗಿರುವುದು ಬೆಳಕಿಗೆ ಬಂದಿದೆ.ಆ. 5ರಿಂದ ಎಲ್ಲಡೆ ಪುರಾಣ ಪ್ರವಚನ ಆರಂಭವಾಗಿದ್ದು, ಸೆ. 5ರವರೆಗೆ ನಡೆಯಲಿವೆ. ಈ ಅವಧಿಯಲ್ಲಿ ಶಾಸ್ತ್ರಿಗಳು ಹಾಗೂ ಅವರ ತಂಡದ ಸದಸ್ಯರು ಧಾರ್ಮಿಕ ಕೇಂದ್ರಗಳಲ್ಲಿಯೇ ತಂಗಲಿದ್ದು, ಭಕ್ತರಿಂದ ಉಪಾಹಾರ, ಪ್ರಸಾದ ಸ್ವೀಕರಿಸಲಿದ್ದಾರೆ.
ನಾಡಿನಾದ್ಯಂತ ವಿದ್ಯಾರ್ಥಿಗಳುಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳು ಇಂಥ ನೂರಾರು ಪ್ರವಚನಕಾರರನ್ನು ತಯಾರಿಸಿದ್ದಾರೆ. ಸಂಗೀತ ವಾದ್ಯಗಳ ವಾದಕರು, ಗಾಯಕರು ಆಗಿದ್ದ ಅವರು ಪುರಾಣ ಪ್ರವಚನ ಕಲೆಯನ್ನು ರೂಢಿಸಿಕೊಂಡಿದ್ದರು. ಅಂಧ ಅನಾಥರು ಇಂಥ ಕಲೆಗಳನ್ನು ಕಲಿತು ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಲಿ ಎಂಬುದು ಗವಾಯಿಗಳ ಆಶಯವಾಗಿತ್ತು.
ಆಶ್ರಮದಿಂದ ಕಲಿತವರು 200 ಶಾಸ್ತ್ರಿಗಳು ಇದ್ದಾರೆ. ಈ ಬಾರಿ 100 ಶಾಸ್ತ್ರಿಗಳು ರಾಜ್ಯದ ಮೂಲೆಮೂಲೆಗಳಿಗೆ ಪುರಾಣ ಪ್ರವಚನಕ್ಕೆ ತೆರಳಿದ್ದಾರೆ. ಅವರ ಜತೆಗೆ ಸಂಗೀತ ನೀಡುವ ಹಾರ್ಮೋನಿಯಂ ಗವಾಯಿಗಳು, ತಬಲಾ ಸಾಥ್ ನೀಡಲು ಇಷ್ಟೇ ಸಂಖ್ಯೆ ಕಲಾವಿದರು ಶ್ರಾವಣದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ವಿಶೇಷ.ಪುಟ್ಟರಾಜ ಗವಾಯಿಗಳ ಶಿಷ್ಯರು ಆಗಿರುವ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ಪ್ರಸ್ತುತ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಶರಣಬಸವೇಶ್ವರ ಪ್ರವಚನ ಮಾಡುತ್ತಿದ್ದಾರೆ. ಎಂ. ಕಲ್ಲಿನಾಥ ಶಾಸ್ತ್ರಿ-ಬಾಗಲಕೋಟೆ, ಹೇಮರಾಜ ಶಾಸ್ತ್ರಿ-ಗದಗ, ರಾಚೋಟೇಶ್ವರ ಗುಡಿ, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿಗಳು-ಬಾಗಲಕೋಟೆಯ ಆಲೂರಿನಲ್ಲಿ ಪ್ರವಚನ ಮಾಡುತ್ತಿದ್ದಾರೆ. ಶಿವರಾಜ ಶಾಸ್ತ್ರಿ ತಾವರಗೆರೆ, ಎಂ.ಜಿ. ಗುರುಸಿದ್ದೇಶ್ವರ ಶಾಸ್ತ್ರಿ ಬೇವೂರ, ಶಶಿಧರ ಡೋಣಿ, ಚನ್ನವೀರ ಶಾಸ್ತ್ರಿ ಕಡಣಿ ಅವರು ಪುರಾಣ ಪ್ರವಚನಕ್ಕೆ ತೆರಳಿರುವುದು ವಿಶೇಷ.ಶ್ರಾವಣದ ಹಿನ್ನೆಲೆಯಲ್ಲಿ ಪುರಾಣ ಪ್ರವಚನಕಾರರಿಗೆ ಬೇಡಿಕೆ ಬಂದಿದ್ದು, ನಾವು ಈಗ ಹುನಗುಂದ ತಾಲೂಕಿನಲ್ಲಿ ಶರಣಬಸವೇಶ್ವರ ಪುರಾಣ ಪ್ರವಚನ ಮಾಡುತ್ತಿದ್ದು, ತಿಂಗಳ ಪರ್ಯಂತರ ನಡೆಯಲಿದೆ. ಪ್ರವಚನಕಾರರಿಗೆ ಲಕ್ಷದ ಮೊತ್ತದಲ್ಲಿ ಸಂಭಾವನೆ ನಿಗದಿಯಾಗುತ್ತಿರುವುದು ಖುಷಿ ತಂದಿದೆ ಎಂದು ಪುರಾಣ ಪ್ರವಚನಕಾರ ಕಲ್ಲಿನಾಥ ಶಾಸ್ತ್ರಿ ಹೇಳಿದರು.150 ರಿಂದ 200 ಸಂಖ್ಯೆಯಲ್ಲಿ ವೀರೇಶ್ವರ ಪುಣ್ಯಾಶ್ರಮದ ಶಿಷ್ಯರು ಈಗ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪುರಾಣ ಪ್ರವಚನಕ್ಕೆ ತೆರಳಿದ್ದಾರೆ. ಹಿರಿಯ ಶಾಸ್ತ್ರಿಗಳಿಗೆ ₹1 ಲಕ್ಷದಿಂದ ₹1.50 ಲಕ್ಷ ಸಂಭಾವನೆ ನಿಗದಿಯಾಗಿದ್ದು, ಸಂಗೀತ ಕಲಾವಿದರು, ತಬಲಾ ಸಾಥ್ ನೀಡುವವರಿಗೂ ಇದು ಹಂಚಿಕೆಯಾಗುತ್ತದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಮಾಜ್ಯೇನರ್ ಹೇಮರಾಜ್ ಶಾಸ್ತ್ರಿ ಹೇಳಿದರು.